ಮುಂದಿನ ಬಾರಿ ಖರ್ಗೆ ಸಂಸತ್ತಿಗೆ ಬರಲ್ಲ ಅಂತ ಮೋದಿ ಹೇಳಿದ್ದರು!
Recommended Video
ಕಲಬುರಗಿ, ಮೇ 24 : 'ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ ಬಾರಿ ಈ ಸದನಕ್ಕೆ ಬರುವುದಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಅಧಿವೇಶನದ ಸಮಯದಲ್ಲಿ ಹೇಳಿದ್ದರು. ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಖರ್ಗೆ 95,452 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
1972ರಿಂದ ಇಲ್ಲಿಯವರೆಗೆ 12 ಚುನಾವಣೆಗಳನ್ನು ಎದುರಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸತತ 9 ಬಾರಿ ವಿಧಾನಸಭೆಗೆ, 2 ಬಾರಿ ಸಂಸತ್ತಿಗೆ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿದ್ದರು. ಆದರೆ, ಈ ಬಾರಿ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕರಿಗೆ ಸೋಲಾಗಿದೆ.
ಮಲ್ಲಿಕಾರ್ಜುನ ಖರ್ಗೆಗೆ ಆಘಾತ: ಮೊದಲ ಬಾರಿಗೆ ಸೋಲು
ಹಳ್ಳಿಯಿಂದ ದೆಹಲಿ ತನಕ ಎಲ್ಲಾ ನಾಯಕರು ಒಗ್ಗೂಡಿ ಸೋಲಿಲ್ಲದ ಸರದಾರನಿಗೆ ಸೋಲಿನ ರುಚಿ ತೋರಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ತಂತ್ರ ಸಿದ್ಧವಾಗುತ್ತಿತ್ತು. ಎಲ್ಲಾ ತಂತ್ರಗಳು ಫಲ ನೀಡಿದ್ದು, ಖರ್ಗೆ ಸೋಲು ಕಂಡಿದ್ದಾರೆ.
ದಲಿತ ಸಿಎಂ ಹೆಸರಲ್ಲಿ ನನಗೆ ಅವಮಾನ ಮಾಡಬೇಡಿ: ಖರ್ಗೆ ಮನವಿ
ಲೋಕಸಭೆಯಲ್ಲಿ ಪ್ರತಿಪಕ್ಷ ಪಕ್ಷ ಸ್ಥಾನದಲ್ಲಿ ಕುಳಿತು ಕೇಂದ್ರ ಸರ್ಕರವನ್ನು ಹಲವು ಬಾರಿ ಮಲ್ಲಿಕಾರ್ಜುನ ಖರ್ಗೆ ಇಕ್ಕಟ್ಟಿಗೆ ಸಿಲುಕಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ಖರ್ಗೆ ಗೆಲ್ಲಬಾರದು ಎಂಬ ಸಂದೇಶ ರಾಷ್ಟ್ರೀಯ ನಾಯಕರಿಂದಲೇ ಕರ್ನಾಟಕ ಬಿಜೆಪಿಗೆ ಸಿಕ್ಕಿತ್ತು....
ಕಾಂಗ್ರೆಸ್ಗೆ ಮುಖಭಂಗ ಉಂಟು ಮಾಡುವುದು
2019ರ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಉಂಟು ಮಾಡುವುದು ಬಿಜೆಪಿ ತಂತ್ರವಾಗಿತ್ತು. ಲೋಕಸಭೆಯ ಕಾಂಗ್ರೆಸ್ ನಾಯಕನನ್ನು ಸೋಲಿಸಲು ಪ್ರಧಾನಿ ನರೇಂದ್ರ ಮೋದಿ ಕಲಬುರಗಿಗೆ ಬಂದು ಸಮಾವೇಶ ನಡೆಸಿದ್ದರು. ಖರ್ಗೆ ಗೆಲ್ಲದಂತೆ ರಾಜ್ಯ ಬಿಜೆಪಿ ಘಟಕವೂ ತಂತ್ರ ರೂಪಿಸಿತ್ತು. ಚುನಾವಣೆ ಮುಗಿದಿದ್ದು, ಹಿರಿಯ ಕಾಂಗ್ರೆಸ್ ನಾಯಕನಿಗೆ ಸೋಲಾಗಿದೆ.
ಹಳ್ಳಿಯಿಂದ ದೆಹಲಿ ತನಕ ಎಲ್ಲಾ ಒಂದಾದರು
ದೆಹಲಿಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ಕರ್ನಾಟಕದಲ್ಲಿ ಯಡಿಯೂರಪ್ಪ, ಉಮೇಶ್ ಜಾಧವ್, ಮಾಲೀಕಯ್ಯ ಗುತ್ತೇದಾರ್, ಬಾಬೂರಾಚ್ ಚಿಂಚನಸೂರ್, ಡಾ.ಎ.ಬಿ.ಮಾಲಕ ರಡ್ಡಿ ಸೇರಿದಂತೆ ಹಳ್ಳಿಯಿಂದ ದೆಹಲಿ ತನಕ ಎಲ್ಲಾ ನಾಯಕರು ಒಂದಾಗಿ ಸೋಲಿಲ್ಲದ ಸರದಾ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ್ದಾರೆ.
'ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ ಬಾರಿ ಈ ಸದನಕ್ಕೆ ಬರುವುದಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದನ್ನು ಅವರು ಮಾಡಿ ತೋರಿಸಿದ್ದಾರೆ.
ಜಾತಿ ಲೆಕ್ಕಾಚಾರಗಳು ಕೆಲಸ ಮಾಡಿದವು
ಗುಲ್ಬರ್ಗ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ಲಿಂಗಾಯತ ಮತಗಳನ್ನು ಒಂದುಗೂಡಿಸಿದರು. ಮಾಲೀಕಯ್ಯ ಗುತ್ತೇದಾರ್ ಈಡಿಗ, ಬಾಬೂರಾವ್ ಚಿಂಚನಸೂರ ಕೋಲಿ, ಡಾ.ಎ.ಬಿ. ಮಾಲಕರಡ್ಡಿ ಲಿಂಗಾಯತ ರೆಡ್ಡಿ ಮತಗಳನ್ನು ಒಟ್ಟಾಗಿಸಿದರು. ಡಾ.ಉಮೇಶ್ ಜಾಧವ್ ಅವರ ಬೆಂಬಲಕ್ಕೆ ಬಂಜಾರ ಸಮುದಾಯ ನಿಂತಿತು. ಸಂಪ್ರದಾಯಿಕ ಮತಗಳು ಬಿಜೆಪಿಗೆ ಬಂದವು. ಮಲ್ಲಿಕಾರ್ಜುನ ಖರ್ಗೆ 95,452 ಮತಗಳ ಅಂತರದಿಂದ ಸೋಲು ಕಂಡರು.
ಗುರುಮಿಠಕಲ್ನಲ್ಲಿ ಮೈತ್ರಿ ಧರ್ಮ ಪಾಲನೆ ಇಲ್ಲ
ಗುರುಮಿಠಕಲ್ ವಿಧಾನಸಭಾ ಕ್ಷೇತ್ರ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಕ್ಕೆ ಸದಾ ನಿಲ್ಲುತ್ತಿತ್ತು. ಆದರೆ, ಈ ಬಾರಿ ಅಲ್ಲಿ ಜೆಡಿಎಸ್ನ ಅಧಿಕಾರದಲ್ಲಿದೆ. ಖರ್ಗೆ ಅವರ ವಿರುದ್ಧದ ಮುನಿಸಿನ ಕಾರಣ ಶಾಸಕ ನಾಗನಗೌಡ ಕಂದಕೂರ ಮೈತ್ರಿ ಧರ್ಮವನ್ನು ಸರಿಯಾಗಿ ಪಾಲನೆ ಮಾಡಿಲ್ಲ ಎಂಬ ಆರೋಪವಿದೆ. ಆದ್ದರಿಂದ, ಖರ್ಗೆ ಅವರಿಗೆ ಚುನಾವಣೆಯಲ್ಲಿ ಸೋಲಾಗಿದೆ.
ಸೋಲಿಲ್ಲದ ಸರದಾರ ಕಿರೀಟ ಕಳಚಿತು
ಗುಲ್ಬರ್ಗ ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರ ಗೌಣವಾಯಿತು. 371 (ಜೆ), ಇಎಸ್ಐ ಆಸ್ಪತ್ರೆ, ರೈಲ್ವೆ ಇಲಾಖೆಯ ಕೊಡುಗೆಗಳು ಚರ್ಚೆಗೆ ಬರಲಿಲ್ಲ. ಜಾತಿಯ ವಿಚಾರ ಪ್ರಮುಖವಾಯಿತು. ಖರ್ಗೆ ಪುತ್ರ ವ್ಯಾವೋಹಿ ಎಂಬ ಹಣೆಪಟ್ಟಿ ಕಟ್ಟಲಾಯಿತು. ಪ್ರಿಯಾಂಕ್ ಖರ್ಗೆ ಹಿರಿಯ ನಾಯಕರಿಗೆ ಗೌರವ ಕೊಡುವುದಿಲ್ಲ ಎಂಬ ಆರೋಪ ಮಾಡಲಾಯಿತು. ಎಲ್ಲವೂ ಸೇರಿ ಸೋಲಿಲ್ಲದ ಸರದಾರ ಎಂಬ ಖರ್ಗೆ ಅವರ ಕಿರೀಟ ಕಳಚಿ ಬೀಳಲು ಕಾರಣವಾಯಿತು.