ಮದುವೆ ಮಾಡುವ ಭರವಸೆ ಕೊಟ್ಟಿದ್ದರೂ ಆತ್ಮಹತ್ಯೆ ಮಾಡಿಕೊಂಡರು!
ಬೆಂಗಳೂರು, ಫೆ. 16: ಮದುವೆ ಮಾಡುವುದಾಗಿ ಮನೆಯವರು ಭರವಸೆ ಕೊಟ್ಟಿದ್ದರೂ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾನಶಿವನಗಿ ಗ್ರಾಮದ ಪರಶುರಾಮ ಪೂಜಾರಿ ಹಾಗೂ ಭಾಗ್ಯಶ್ರೀ ನೇಣಿಗೆ ಶರಣಾಗಿ ಶವವಾಗಿ ಪತ್ತೆಯಾಗಿರುವ ದುರ್ದೈವಿಗಳು. ಇಬ್ಬರ ಪ್ರೀತಿಗೆ ಅಡ್ಡಿ ಬರಬಾರದೆಂಬ ಉದ್ದೇಶದಿಂದಲೇ ಮನೆಯವರು ಮದುವೆ ಮಾಡಲು ಒಪ್ಪಿದ್ದರು. ಆದರೂ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರ ಮದುವೆಗೆ ಎರಡೂ ಮನೆಯವರು ಒಪ್ಪಿದ್ದರು. ಜೊತೆಗೆ ಮದುವೆ ಮಾಡುವ ಭರವಸೆಯನ್ನೂ ನೀಡಿದ್ದರು. ಆದರೆ, ಮದುವೆ ಮಾಡುವುದು ತಡವಾಗುತ್ತಿದೆ ಎಂದುಕೊಂಡ ಪ್ರೇಮಿಗಳಿಬ್ಬರು ತಬ್ಬಿಕೊಂಡು ನೇಣಿಗೆ ಶರಣಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪ್ರೇಮಿಗಳ ದಿನಕ್ಕೂ ಮೂರು ದಿನದ ಮೊದಲೇ ಮನೆಯನ್ನು ತೊರೆದಿದ್ದ ಪ್ರೇಮಿಗಳ ಶವಗಳು ಕೊಳೆತ ಸ್ಥಿತಿಯಲ್ಲಿ ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ಹೊರವಲಯದ ಹಳ್ಳದಲ್ಲಿ ಪತ್ತೆಯಾಗಿವೆ. ಇಬ್ಬರ ದೇಹಗಳು ಅಕ್ಕಪಕ್ಕದಲ್ಲಿಯೇ ನೇತಾಡುತ್ತಿದ್ದವು.
ಆದರೆ, ಪ್ರೇಮಿಗಳು ಮದುವೆಯನ್ನ ವಿಳಂಬ ಮಾಡುವ ಮೂಲಕ ತಮ್ಮನ್ನು ಬೇರೆ ಮಾಡುವ ಉದ್ದೇಶ ಹೊಂದಿರಬಹುದು ಎಂಬ ಶಂಕೆಯಿಂದ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.