ಲಿಂಗಾಯತ ಮುಖಂಡರಿಂದ ವೀರಶೈವ ಮುಖಂಡರ ಮೇಲೆ ಹಲ್ಲೆ
ಕಲಬುರಗಿ, ಮಾರ್ಚ್ 19: ಪ್ರತ್ಯೇಕ ಲಿಂಗಾಯಿತ ಧರ್ಮ ಮಾನ್ಯತೆಗಾಗಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವ ರಾಜ್ಯ ಸಚಿವ ಸಂಪುಟದ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವೀರಶೈವ ಮುಖಂಡರ ಮೇಲೆ ಲಿಂಗಾಯತ ಮುಖಂಡರು ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.
ಕಲಬುರಗಿ ನಗರದ ಸರದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ವೀರಶೈವ ಸಮಾಜದ ಮುಖಂಡ ಎಂಎಸ್ ಪಾಟೀಲ ನರಿಗೋಳ ಹಾಗೂ ಇತರರ ಮೇಲೆ ಲಿಂಗಾಯತ ಸಮುದಾಯದ ಕೆಲವರು ಸೇರಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು : ಸಚಿವ ಸಂಪುಟದ ನಿರ್ಣಯ
ರಾಜ್ಯ ಸಚಿವ ಸಂಪುಟದ ತೀರ್ಮಾನ ಖಂಡಿಸಿ ವೀರಶೈವ ಮುಖಂಡರು ಸರದಾರ ವಲ್ಲಭಭಾಯ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗುತ್ತಾ ಚಪ್ಪಲಿ ತೋರಿಸುತ್ತಿದ್ದರು. ಈ ಸಂದರ್ಭದಲ್ಲಿಯೇ ಜಗತ್ ವೃತ್ತದಿಂದ ವಿಜಯೋತ್ಸವ ಆಚರಿಸಿಕೊಂಡು ಬರುತ್ತಿದ್ದ ಲಿಂಗಾಯತ ಸಮಾಜದವರು ವೀರಶೈವರು ನಡೆಸುತ್ತಿದ್ದ ಪ್ರತಿಭಟನೆಯಿಂದ ಕುಪಿತಗೊಂಡರು. ಹೀಗಾಗಿ ಪರಸ್ಪರ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿತು. ಈ ಘಟನೆಯನ್ನು ತಿಳಿಗೊಳಿಸಲು ಪೋಲಿಸರು ಹರಸಾಹಸ ಪಟ್ಟರು.
ಹಲ್ಲೆಗೆ ಒಳಗಾದ ಎಂ.ಎಸ್.ಪಾಟೀಲ್ ನರಿಗೋಳ ಅವರು ಸ್ಟೇಶನ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಲ್ಲೆ ಮಾಡಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಕೆಲವರಿಗಾಗಿ ಹುಡುಕಾಟ ನಡೆದಿದೆ.
ಲಿಂಗಾಯತ ಪ್ರತ್ಯೇಕ ಧರ್ಮ: ಯಾರು, ಏನು ಹೇಳಿದರು?