ಬಿಎಸ್ವೈ ಸಂಪುಟದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಘೋರ ಅನ್ಯಾಯ, ಆಕ್ರೋಶ
ಕಲಬುರಗಿ, ಆಗಸ್ಟ್ 20: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೈದರಾಬಾದ್ -ಕರ್ನಾಟಕ ಭಾಗವನ್ನು ಬಹಳ ಇಷ್ಟಪಟ್ಟು ಕಲ್ಯಾಣ ಕರ್ನಾಟಕ ಎಂದೆ ಕರೆಯುತ್ತಾರೆ, ಆದರೆ, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಾತ್ರ ಈ ಭಾಗವನ್ನು ಮರೆಯುತ್ತಾರೆ.
ಯಡಿಯೂರಪ್ಪ ಸಂಪುಟ ವಿಸ್ತರಣೆಯಾದ ಬಳಿಕ ಸಹಜವಾಗಿ ಸಚಿವ ಸ್ಥಾನ ವಂಚಿತ ಶಾಸಕರ ಪೈಕಿ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಪ್ರದೇಶವಾರು ಇದರ ಜೊತೆಗೆ ಸಂಪುಟ ವಿಸ್ತರಣೆ ವೇಳೆ ಹೈದರಾಬಾದ್ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂಬ ಆಕ್ರೋಶ ಆ ಭಾಗದಲ್ಲಿ ಹೊರಹೊಮ್ಮಿದೆ.
ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ
ಹೈದರಾಬಾದ್ ಕರ್ನಾಟಕವನ್ನು 371(ಜೆ) ಕಲಂ ಜಾರಿ ಮಾಡಿದ್ದರು ಇಲ್ಲಿನ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ. ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ನಿರ್ಲಕ್ಷ್ಯ ಮತ್ತು ಅಭಿವೃದ್ಧಿಗೆ ರಾಜಕೀಯ ಪಕ್ಷಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದ್ದಾರೆ. ರಸ್ತೆಗಿಳಿದು ಪ್ರತಿಭಟನೆ ನಡೆಸಿ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತ್ಯೇಕ ರಾಜ್ಯ ಬೇಕೆಂದು ಆಗ್ರಹಿಸಿದ್ದಾರೆ. ಇದರ ಜೊತೆಗೆ ತಮ್ಮ ನೆಚ್ಚಿನ ಶಾಸಕರಿಗೆ ಅವಕಾಶ ಸಿಕ್ಕಿಲ್ಲವೆಂಬ ಕಿಚ್ಚು ಕೂಡ ಪ್ರತಿಭಟನಾಕಾರರಿಂದ ವ್ಯಕ್ತವಾಗುತ್ತಿದೆ.
ಕಳೆದ ವಿಧಾನಸಭೆಯಲ್ಲಿ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ 116 ಕ್ಷೇತ್ರಗಳಲ್ಲಿ ಶೇ 60ರಷ್ಟೂ ಗೆಲುವು ಬಿಜೆಪಿಗೆ ದಕ್ಕಿದ್ದರೂ ಒಬ್ಬೇ ಒಬ್ಬ ಶಾಸಕರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.
ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಸಿಸಿ ಪಾಟೀಲ, ಪ್ರಭು ಚೌಹಾಣ್, ಶಶಿಕಲಾ ಜೊಲ್ಲೆ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ, ದತ್ತಾತ್ರೇಯ ರೇವೂರ ಅವರು ಅಚ್ಚರಿಯ ಆಯ್ಕೆಯಾಗಿ ಸಚಿವ ಸ್ಥಾನ ಪಡೆಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಮಿಕ್ಕಂತೆ ಈ ಭಾಗದ ಶಾಸಕರಿಗೆ ಮೊದಲ ಪ್ರಾಶಸ್ತ್ಯ ಸಿಗದಿರುವುದು ಇಲ್ಲಿನ ಮತದಾರರಿಗೆ ಬೇಸರ ಉಂಟು ಮಾಡಿದೆ.
ಯಡಿಯೂರಪ್ಪ ಸಂಪುಟ: ಸಚಿವ ಸ್ಥಾನ ವಂಚಿತ ಶಾಸಕರು
ಯಾದಗಿರಿ, ವಿಜಯಪುರ, ರಾಯಚೂರು ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಒಟ್ಟಾರೆ, ಪ್ರದೇಶವಾರು ಹಂಚಿಕೆಯಲ್ಲಿ ಬಿಜೆಪಿ ಸೋತಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರಾದೇಶಿಕ ಅಸಮತೋಲನವನ್ನು ಮೆಟ್ಟಿ, ಮುಂದಿನ ಹಂತದ ಸಂಪುಟ ವಿಸ್ತರಣೆಯಲ್ಲಿ ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬಹುದು ಎಂಬ ಆಶಾಭಾವನೆ ಜನರಲ್ಲಿದೆ.