ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷ ಎಚ್ಎಸ್ವಿಗೆ ಅದ್ದೂರಿ ಸ್ವಾಗತ
ಕಲಬುರಗಿ, ಫೆಬ್ರವರಿ 05: 85 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಬುರಗಿಯಲ್ಲಿ ಇಂದು ಚಾಲನೆ ಸಿಗಲಿದ್ದು, ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ಎಚ್.ಎಸ್.ವೆಂಕಟೇಶ ಮೂರ್ತಿ ಅವರನ್ನು ಅದ್ಧೂರಿ ಮೆರವಣಿಗೆ ಮೂಲಕ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಕರೆತಂದರು.
ಕಲಬುರಗಿಯ ಪ್ರಮುಖ ಬೀದಿಗಳಲ್ಲಿ ಅಲಂಕಾರಗೊಂಡ ರಥದ ಮೂಲಕ ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ಶ್ರೀವಿಜಯ ಪ್ರಧಾನ ವೇದಿಕೆಗೆ ಕರೆತರಲಾಯಿತು.
85 ನೇ ಕನ್ನಡ ಸಾಹಿತ್ಯ ಸಮ್ಮೇಳನ; ಕಳೆಗಟ್ಟಿದ ಕಲಬುರಗಿ
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಿಂದ ಆರಂಭವಾಗಿದ್ದು, ಕುಸನೂರು ರಸ್ತೆ ಮಾರ್ಗವಾಗಿ ಪ್ರಧಾನ ವೇದಿಕೆ ತಲುಪಲಿದೆ.
ಬೆಳಿಗ್ಗೆ 11:30 ಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಸಾಥ್ ನೀಡಲಿದ್ದಾರೆ. ಎಚ್ ಎಸ್ ವೆಂಕಟೇಶಮೂರ್ತಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ.
ಜಾನಪದ ನೃತ್ಯ, ಡೋಲು, ಕುಣಿತ, ರಾರಾಜಿಸುತ್ತಿರುವ ಕನ್ನಡ ಧ್ವಜ, ಕುಂಭ ಹೊತ್ತ ಮಹಿಳೆಯರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಸ್ವಾಗತಿಸಿದರು.
85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತೇರು ಎಳೆಯಲು ಶರಣರ ನಾಡು, ತೊಗರಿಯ ಕಣಜ ಕಲಬುರಗಿ ಸರ್ವಸಿದ್ಧಗೊಂಡಿದೆ. ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಇಂದಿನಿಂದ ಮೂರು ದಿನ (ಫೆಬ್ರವರಿ 5, 6 ಮತ್ತು 7) ನುಡಿ ಜಾತ್ರೆ ನಡೆಯಲಿದೆ.