ಕನ್ನಡ ಆಡಳಿತ ಭಾಷೆ, ಇದರಲ್ಲಿ ರಾಜಿಯಿಲ್ಲ: ಸಿದ್ದರಾಮಯ್ಯ
ಕಲಬುರಗಿ, ಫೆಬ್ರವರಿ 7: ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಲೇಬೇಕು, ಇದರಲ್ಲಿ ಯಾವುದೇ ರಾಜಿಯಿಲ್ಲ, ಉದಾರತೆ ಮನುಷ್ಯತ್ವಕ್ಕೆ ಇರಬೇಕು. ಭಾಷೆಯಲ್ಲಿ ಮಾತ್ರ ಕಠಿಣವಾಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಲಬುರಗಿ ವಿವಿ ಆವರಣದಲ್ಲಿ ಆಯೋಜಿಸಿದ್ದ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಖಂಡ ಕರ್ನಾಟಕದಲ್ಲಿ ಕನ್ನಡ ಒಂದೇ ಸಾರ್ವಭೌಮ. ಹೀಗಾಗಿ ಕನ್ನಡ ಮಾತೃಭಾಷೆಯಾಗಬೇಕು ಅಂದು ಹೇಳಿದರು.
ಸಾಹಿತ್ಯ ಸಮ್ಮೇಳನದಲ್ಲಿ ಮಿಂಚಿದ 'ಭುವನೇಶ್ವರಿ' ವೇಷಧಾರಿ
ರಾಜ್ಯದಲ್ಲಿ ಇಂಗ್ಲಿಷ್ ಶಾಲೆಗಳಿವೆ, ಕನ್ನಡ ಶಾಲೆಗಳಿವೆ. ನಾವು ಎರಡು ದೋಣಿಗಳ ಮೇಲೆ ಕಾಲಿಟ್ಟು ನಡೆಯುತ್ತಿದ್ದೇವೆ. ಅಲ್ಲದೇ ಇಂಗ್ಲೀಷ್ ಕಲಿತರೆ ಉದ್ಯೋಗ ಸಿಗುತ್ತೆ ಎನ್ನುವ ಭ್ರಮೆಯಿಂದ ಹೊರಬರಬೇಕು. ಜೊತೆಗೆ ಪ್ರತಿಯೊಬ್ಬ ಕನ್ನಡಿಗ ಕನ್ನಡ ಭಾಷೆ ಮಾತೃಭಾಷೆಯಾಗಲು ಬೆಂಬಲ ನೀಡಬೇಕು. ನಮ್ಮ ಮಕ್ಕಳು ಬುದ್ಧಿವಂತರಾಗಲು ಮಾತೃಭಾಷೆಯಲ್ಲೇ ಶಿಕ್ಷಣ ಕಲಿಯಬೇಕು ಎಂದು ಸಲಹೆ ನೀಡಿದರು.
ಹೈದರಾಬಾದ್-ಕರ್ನಾಟಕ ಅಭಿವೃದ್ಧಿಗೋಸ್ಕರ 371ಜೆ ಮೀಸಲಾತಿ ನೀಡಲಾಗಿದೆ. ಈ ಆರು ಜಿಲ್ಲೆಗಳು ಇನ್ನೂ ಅಭಿವೃದ್ಧಿಯಾಗಬೇಕು. ಅಲ್ಲದೇ ಕನ್ನಡ ನಾಡು ನುಡಿಗೆ ನಮ್ಮ ಸೇವೆ ಮಾಡಬೇಕು. ಕನ್ನಡಿಗರಲ್ಲಿ ಈ ಗುಣ ಇರುವುದರಿಂದ ಕನ್ನಡದ ನೆಲ, ಜಲಕ್ಕೆ ಯಾವತ್ತು ಅಪಾಯ ಬರುವುದಿಲ್ಲ, ಎಲ್ಲರೂ ಈ ನೆಲದ ಭಾಷೆ ಕಲಿಯಬೇಕು ಜೊತೆಗೆ ಹೊರಗಿನಿಂದ ಬಂದವರು ಸಹ ಕನ್ನಡಿಗರಾಗಿ ಬಾಳಬೇಕು. ನೆಲದ ಭಾಷೆ ಕಲಿಯಬೇಕು ಕನ್ನಡಿಗರಾಗಿ ಬಾಳುವುದು ಪ್ರತಿಯೊಬ್ಬನ ಕರ್ತವ್ಯ ಎಂದು ಹೇಳಿದರು.
'ಮಹಿಳೆಯರು ದೇಗುಲಗಳ ಪ್ರವೇಶಕ್ಕೆ ಹಾಕುವ ಶ್ರಮ ಸಂಸತ್ ಪ್ರವೇಶಕ್ಕೆ ಹಾಕಲಿ'
ಸಾಹಿತ್ಯ ಸಮ್ಮೇಳಾನಧ್ಯಕ್ಷರಾದ ಎಚ್.ಎಸ್ ವೆಂಕಟೇಶಮೂರ್ತಿ ಮಾತನಾಡಿ, ವಿಧಾನಸೌಧದಲ್ಲಿ ಪಕ್ಷ-ವಿಪಕ್ಷಗಳು ಎಷ್ಟೇ ವಾಗ್ವಾದ ನಡೆಸಿದರೂ ಕನ್ನಡದ ವಿಚಾರ ಬಂದಾಗ ನಾವೆಲ್ಲರೂ ಒಂದೇ ಎಂದರು.
ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ನಾಡಿನ ಚಿಂತಕರು, ಕಲಾವಿದರು, ಸಾಹಿತಿಗಳು ಹಾಗೂ ಲಕ್ಷಾಂತರ ಕನ್ನಡಿಗರನ್ನು ಕಣ್ತುಂಬಿಕೊಡಿದ್ದೇನೆ ಎಂದು ಹೇಳಿದರು.
ಇನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನು ಬಳಿಗಾರ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಜನರ ಕನ್ನಡದ ಕಂಪು, ಪರಂಪರೆ ಮೆಚ್ಚಬೇಕು. ಈ ಸಮ್ಮೇಳನದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕನ್ನಡಿಗರೂ ಸ್ವಯಂಸೇವರಾಗಿ ಕೆಲಸ ಮಾಡಿದ್ದಾರೆ ಇದು ಕನ್ನಡ ಶಕ್ತಿ ಎಂದರು.
ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ
ಈ ಸಮಾರೋಪ ಸಮಾರಂಭದದಲ್ಲಿ ವಿಧಾನಪರಿಷತ್ ಸದಸ್ಯರಾದ ಶರಣಪ್ಪ ಮಟ್ಟೂರ, ಬಿ,ಜಿ ಪಾಟೀಲ್, ಡಾ. ಚಂದ್ರಶೇಖರ್ ಪಾಟೀಲ್, ಜೇವರ್ಗಿ ಶಾಸಕ ಅಜಯ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಡಾ.ಪದ್ಮರಾಜ ದಂಡಾವತಿ ಸ್ವಾಗತಿಸಿದರು, ಡಾ.ವತ್ಸಲಾ ಮೋಹನ್ ನಿರೂಪಿಸಿದರು, ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ಜಿಲ್ಲಾಧ್ಯಕ್ಷರಾದ ವೀರಭದ್ರಪ್ಪ ಸಿಂಪಿ ವಂದಿಸಿದರು.
ಈ ಸಾಹಿತ್ಯ ಸಮ್ಮೇಳನದ ವಿಜಯ ಪ್ರಧಾನ ವೇದಿಕೆ ಮೇಲೆ ಮಾತನಾಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿದ್ದಂತೆ ಕನ್ನಡ ನುಡಿ ಜಾತ್ರೆಗೆ ಬಂದ ಕೆಲವರು 'ಹೌದು ಹುಲಿಯಾ.. ಹೌದು ಹುಲಿಯಾ' ಎಂದು ಕೂಗಿದರು.