ಕಲಬುರಗಿ ಪ್ರವಾಹ- ಅಮೆರಿಕಾದಿಂದ ಸಚಿವ ನಿರಾಣಿ ಕೊಟ್ಟ ಸೂಚನೆ ಏನು?
ಕಲಬುರಗಿ, ಸೆ.12- ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಿಲ್ಲಾಡಳಿತ ತಕ್ಷಣವೇ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಅಮೆರಿಕಾ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ ನಿರಾಣಿ ಸೂಚಿಸಿದ್ದಾರೆ.
ಜಾಗತಿಕ ಬಂಡವಾಳ ಹೂಡಿಕೆ ಸಂಬಂಧ ಪ್ರಸ್ತುತ ಅಮೆರಿಕಾ ಪ್ರವಾಸದಲ್ಲಿರುವ ನಿರಾಣಿ, ಕಲಬುರಗಿ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಜಿಲ್ಲೆಯ ಸಮಗ್ರ ಚಿತ್ರಣ ಮತ್ತು ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡು ಕೆಲವು ಸೂಚನೆಗಳನ್ನು ನೀಡಿದ್ದಾರೆ.
ಈ ಕುರಿತು ಅಮೆರಿಕಾದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ನಿರಾಣಿ ಅವರು, ಜಿಲ್ಲೆಯಲ್ಲಿ ಮಳೆ ಪರಿಹಾರ ಕಾರ್ಯ ತೆಗೆದುಕೊಳ್ಳಲು ಸೂಚಿಸಿರುವುದಾಗಿ ಹೇಳಿದ್ದಾರೆ.
ಅಮೆರಿಕಾ ಪ್ರವಾಸದಲ್ಲಿದ್ದರೂ ಜಿಲ್ಲೆಯ ಪ್ರತಿಯೊಂದು ಮಾಹಿತಿಯನ್ನು ಕ್ಷಣಕ್ಷಣಕ್ಕೂ ಸಂಬಂಧ ಪಟ್ಟ ಅಧಿಕಾರಿಗಳಿಂದ ಪಡೆಯುತ್ತಿದ್ದೇನೆ, ಜನ ಮತ್ತು ಜಾನುವಾರುಗಳ ರಕ್ಷಣೆಗೆ ಆದ್ಯತೆ ಕೊಡಬೇಕು ಎಂದು ಸೂಚಿಸಿದ್ದಾರೆ.
ಅಧಿಕಾರಿಗಳಿಗೆ ರಜೆ ನೀಡದಿರಲು ಸೂಚನೆ
ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವುದು. ಅಗತ್ಯವಿರುವ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಸಂತ್ರಸ್ತರಿಗೆ ಉಟ, ಬಟ್ಟೆ, ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಸಚಿವ ನಿರಾಣಿ ಅವರು ತಾಕೀತು ಮಾಡಿದ್ದಾರೆ. ಪರಿಹಾರ ಕಾರ್ಯಕ್ಕೆ ಬೇರೆ ಬೇರೆ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳಿಗೆ ರಜೆ ನೀಡಬಾರದು. ಆಶಿಸ್ತು ತೋರುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲು ನಿರಾಣಿ ಸೂಚನೆ ಕೊಟ್ಟಿದ್ದಾರೆ.
ಉಜನಿ ಜಲಾಶಯ ಅಧಿಕಾರಿಗಳ ಜೊತೆ ಚರ್ಚೆ
ಮಹಾರಾಷ್ಟ ಡ್ಯಾಂಗಳಿಂದ ಬರುವ ನೀರು ಕಡಿಮೆಯಾಗಿದ್ದರಿಂದ ಸದ್ಯಕ್ಕೆ ಜಿಲ್ಲೆಯಲ್ಲಿ ಪ್ರವಾಹ ಭೀತಿಯಿಲ್ಲ. ಹೀಗಾಗಿ ಜನರು ಆತಂಕ ಪಡಬೇಕಾಗಿಲ್ಲ ಜನರ ರಕ್ಷಣೆ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ. ಮಹಾರಾಷ್ಟದ ಸಚಿವರೊಂದಿಗೆ ತಾವು ಸಹ ಕರೆ ಮಾಡಿ ಮಾತನಾಡಿದ್ದು, ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವುದಿಲ್ಲ ಎಂದು ನಿರಾಣಿ ಹೇಳಿದ್ದಾರೆ. ಉಜನಿ ಜಲಾಶಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಸಂಪರ್ಕದಲ್ಲಿದ್ದು ಅಲ್ಲಿಯೂ ನೀರಿನ ಮಟ್ಟ ತಗ್ಗಿದ ಪ್ರಯುಕ್ತ 60 ಸಾವಿರ ಕ್ಯೂಸೆಕ್ ನೀರು ಮಾತ್ರ ನದಿಗೆ ಹರಿಸುತ್ತಿದ್ದಾರೆ. ಹೆಚ್ಚಿನ ನೀರು ಬರುವ ಆತಂಕ ಸದ್ಯಕ್ಕಿಲ್ಲ, ಹೀಗಾಗಿ ಸೊನ್ನ ಬ್ಯಾರೇಜ್ದಿಂದ ಬಿಡುಗಡೆ ಮಾಡುತ್ತಿರುವ ನೀರಿನ ಪ್ರಮಾಣವು ಕಡಿಮೆ ಆಗಲಿದೆ ಎಂದು ನಿರಾಣಿ ತಿಳಿಸಿದ್ದಾರೆ.
ಸ್ಥಳೀಯ ಆಡಳಿತವರು ಬಿಗಿಯಾದ ಕ್ರಮ
ಕೆಲವು ಕಡೆಗಳಲ್ಲಿ ಸಂಪರ್ಕ ಕಡಿತಗೊಂಡಿದ್ದು, ಜನರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗ ಬಳಸಿಕೊಂಡು ಸಂಚರಿಸಲು ಸೂಚಿಸಬೇಕು. ಯಾವುದೇ ಕಾರಣಕ್ಕೂ ನೀರು ತುಂಬಿ ಹರಿಯುತ್ತಿರುವ ಸೇತುವೆ ಮೇಲೆ ಹೋಗುವ ಇಲ್ಲವೇ ವಾಹನಗೊಂದಿಗೆ ದಾಟುವ ಪ್ರಯತ್ನ ಸಾರ್ವಜನಿಕರು ಮಾಡಬಾರದು. ಸ್ಥಳೀಯ ಆಡಳಿತವರು ಬಿಗಿಯಾದ ಕ್ರಮ ಕೈಗೊಳ್ಳಬೇಕು ಎಂದು ಸಚಿವ ನಿರಾಣಿ ಸೂಚಿಸಿದ್ದಾರೆ.
ಅಮೆರಿಕಾದಿಂದಲೇ ಎಲ್ಲಾ ಸೂಚನೆ ನೀಡಿದ ನಿರಾಣಿ
ಮುರುಗೇಶ್ ನಿರಾಣಿ ಘತ್ತರಗಿ ಇನ್ನಿತರ ಬ್ಯಾರೇಜ್ಗಳ ಮೇಲೆ ಸದ್ಯಕ್ಕೆ ಯಾವುದೇ ವಾಹನಗಳು ಹೋಗದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜನೆ ಮಾಡುವಂತೆ ಎಸ್ಪಿಯವರಿಗೆ ಸಚಿವ ನಿರಾಣಿ ಸೂಚಿಸಿದ್ದಾರೆ. ಇನ್ನು ಅಮೆರಿಕಾದಿಂದಲೇ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿ ಸೂಚನೆಗಳನ್ನು ನೀಡಿದ್ದಾರೆ.