ಕೊರೊನಾ ಜನಜಾಗೃತಿಗಾಗಿ ಮೈಕ್ ಹಿಡಿದು ಬೀದಿಗಿಳಿದ ಮಠಾದೀಶ!
ಕಲಬುರಗಿ, ಮಾರ್ಚ್ 26: ಮಹಾಮಾರಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ಪ್ರಯತ್ನಗಳು ನಡೆಸುತ್ತಿವೆ. ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಪೊಲೀಸ್ ಇಲಾಖೆಯು ಸಹ ಕೊತ್ತಲ ಬಸವೇಶ್ವರ ದೇವಸ್ಥಾನದ ಸದಾಶಿವ ಸ್ವಾಮಿಗಳ ನೇತೃತ್ವದಲ್ಲಿ ಅಭಿಯಾನ ಕೈಗೊಳ್ಳುವ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಗುರುವಾರ ಬೆಳಿಗ್ಗೆ ಸೇಡಂ ಪಟ್ಟಣದ ವಿವಿಧ ಬಡವಾಣೆ ಮತ್ತು ಬೀದಿಗಳಲ್ಲಿ ಟಂಟಂ ವಾಹನದಲ್ಲಿ ಸಂಚರಿಸಿದ ಸೇಡಂನ ಕೊತ್ತಲ ಬಸವೇಶ್ವರ ದೇವಸ್ಥಾನದ ಸದಾಶಿವ ಸ್ವಾಮೀಜಿಗಳು ಧ್ವನಿವರ್ಧಕ ಮೂಲಕ ಕೊರೋನಾ ವೈರಸ್ ಹರಡದಂತೆ ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.
Fact Check: ಕೊರೊನಾ ಓಡಿಸಲು ಸಿಂಹಗಳನ್ನು ರಸ್ತೆಗಿಳಿಸಿದ ಪುಟಿನ್!
ಚೈನ್ ಮುರಿಯಬೇಕಾಗಿದೆ
ಮಹಾಮಾರಿ ಕೊರೋನಾ ಸೋಂಕಿನಿಂದ ಕಲಬುರಗಿಯಲ್ಲಿ ಮೊದಲ ವ್ಯಕ್ತಿ ಮೃತಪಟ್ಟಿರುವುದು ತಮಗೆಲ್ಲ ತಿಳಿದ ಸಂಗತಿಯಾಗಿದೆ. ಸೋಂಕು ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡುವುದು ಮುಖ್ಯವಾಗಿದೆ. ಕೊರೋನಾ ಸೊಂಕಿನ ಚೈನ್ ಮುರಿಯಬೇಕಾದರೆ ಸಾರ್ವಜನಿಕರು ಮನೆಯಲ್ಲಿರುವುದು ತುಂಬಾ ಅವಶ್ಯಕವಾಗಿದೆ. ಅನಗತ್ಯ ಮನೆಯಿಂದ ಹೊರಬರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮಾನವ ಸಮಾಜಕ್ಕೆ ಕಂಟಕ
ಜಿಲ್ಲೆಯಲ್ಲಿ ಕಪ್ರ್ಯೂ ಮಾದರಿಯ ವಾತಾವರಣವಿದ್ದರೂ, ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ಸೇವೆ ಮತ್ತು ವಸ್ತುಗಳಿಗೆ ತೊಂದರೆಯಿಲ್ಲ. ಮನೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ಆಗಾಗ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಸರ್ಕಾರ ನೀಡುವ ಸೂಚನೆಗಳನ್ನು ತಪ್ಪದೆ ಪಾಲಿಸುವ ಮೂಲಕ ಮಾನವ ಸಮಾಜಕ್ಕೆ ಕಂಟಕವಾಗಿರುವ ಕೊರೋನಾ ಸೋಂಕನ್ನು ತೊಲಗಿಸೋಣ ಎಂದು ಸ್ವಾಮೀಜಿಗಳು ಕರೆ ನೀಡಿದರು.
ಸಾಮಾಜಿಕ ಅಂತರ
ಸ್ವಾಮೀಜಿಯನ್ನು ಕಂಡ ಬಡಾವಣೆಯಲ್ಲಿನ ಜನ ಪೂಜ್ಯರ ಹತ್ತಿರ ಬರಲು ಪ್ರಯತ್ನಿಸಿದರು. ಆದರೆ ಶ್ರೀಗಳು, ಮನೆಯಿಂದ ಯಾರೂ ಹೊರಗೆ ಬರಬೇಡಿ ಎಂದು ವಿನಂತಿಸಿ ಎಲ್ಲರು ನಿಮ್ಮ ಮನೆ-ಕಿಂಡಿಗಳಿಂದಲೇ ನಿಂತು ಕೊರೋನಾ ಸೊಂಕಿನ ಈ ಜನಜಾಗೃತಿ ಅಭಿಯಾನದ ಮಾಹಿತಿಯನ್ನು ಕೇಳಬೇಕು ಎಂದು ಹೇಳುವ ಮೂಲಕ ಸ್ವಯಂ ಸಾಮಾಜಿಕ ಅಂತರ ಕಾಪಾಡಿಕೊಂಡರು.
70ರಷ್ಟು ಬಡಾವಣೆಯಲ್ಲಿ
ಜಾಗೃತಿ ಅಭಿಯಾನದ ಉಸ್ತುವಾರಿ ವಹಿಸಿಕೊಂಡಿರುವ ಸೇಡಂ ಪೊಲೀಸ್ ಠಾಣೆಯ ಸಿಪಿಐ ರಾಜಶೇಖರ ಹಳಿಗೋದಿ ಮಾತನಾಡಿ ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಪೂಜ್ಯರನ್ನು ಕೇಳಿಕೊಂಡಿದ್ದೇವು. ಅದರಂತೆ ಗುರುವಾರ ಬೆಳಿಗ್ಗೆ ಸದಾಶಿವ ಸ್ವಾಮೀಜಿಗಳ ನೇತೃತ್ವದಲ್ಲಿ ತುಂಬಾ ಇಕ್ಕಟ್ಟಾದ ಬಡಾವಣೆಯಿರುವ ಸೇಡಂ ಹಳೇ ಪಟ್ಟಣದ ಶೇ.70ರಷ್ಟು ಬಡಾವಣೆಯಲ್ಲಿ ಟಂಟಂ ವಾಹನದ ಮೂಲಕ ಸಂಚರಿಸಿ ಕೊರೋನಾ ಸೋಂಕು ಹರಡುವಿಕೆ ಮತ್ತು ತಡೆಗಟ್ಟುವಿಕೆ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.