ಕನ್ನಡ ಸಾಹಿತ್ಯ ಸಮ್ಮೇಳನ: ದಾಖಲೆ ಪ್ರಮಾಣದಲ್ಲಿ 21030 ಪ್ರತಿನಿಧಿಗಳು
ಕಲಬುರಗಿ,ಜನವರಿ 26: ಸಾಂಸ್ಕೃತಿಕ ಸಿರಿವಂತ ಹಾಗೂ ಸಾಮರಸ್ಯದ ನೆಲವಾಗಿರುವ ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ದಾಖಲೆಯ ಪ್ರಮಾಣದಲ್ಲಿ 21030 ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಪಿ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಸಾಹಿತ್ಯ ಸಮ್ಮೇಳನ ಅಂಗವಾಗಿ ವಿವರಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ನಡೆದ ರಾಯಚೂರಿನಲ್ಲಿ 12500, ಮೈಸೂರಿನಲ್ಲಿ 13000 ಹಾಗೂ ಧಾರವಾಡದಲ್ಲಿ 13500 ಜನ ನೋಂದಣಿ ಮಾಡಿಕೊಂಡಿದ್ದರು. ಆದರೆ ಕಲಬುರಗಿಯಲ್ಲಿ ದಾಖಲೆಯಾಗಿ 21,000 ಜನ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 15178 ಪುರುಷರು ಮತ್ತು 5852 ಮಹಿಳೆಯರು ಸೇರಿದ್ದಾರೆ. ಇದರಲ್ಲಿ ಕಲಬುರಗಿ ಜಿಲ್ಲೆಯಿಂದ 3500ಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
566 ಮಳಿಗೆಗಳ ನೋಂದಣಿ: 379 ಪುಸ್ತಕ ಮತ್ತು 177 ವಾಣಿಜ್ಯ ಮಳಿಗೆಗಳು ಸೇರಿದಂತೆ ಇದೂವರೆಗೆ 566 ಮಳಿಗೆಗಳ ನೋಂದಣಿಯಾಗಿದ್ದು, ಎಲ್ಲವು ಗುಣಮಟ್ಟದಿಂದ ಕೂಡಿರಲಿವೆ ಎಂದರು.
ಕನ್ನಡಮ್ಮನ ತೇರು ಎಳೆಯಲು ಎಲ್ಲರೂ ಸಕ್ರಿಯವಾಗಿದ್ದಾರೆ: ನುಡಿ ಜಾತ್ರೆ ಅಂಗವಾಗಿ ಕನ್ನಡಮ್ಮನ ತೇರು ಎಳೆಯಲು ಜಿಲ್ಲೆಯ ಎಲ್ಲ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಅಧಿಕಾರಿಗಳು ಸಮ್ಮೇಳನ ಯಶಸ್ಸಿಗೆ ದುಡಿಯುತ್ತಿದ್ದು, ಅಕ್ಷರ ಜಾತ್ರೆ ಐತಿಹಾಸಿಕ ಯಶಸ್ವಿಯಾಗಲಿದೆ. ಇದರಲ್ಲಿ ಎರಡು ಮಾತಿಲ್ಲ ಎಂದು ಸಿಂಪಿ ವಿವರಿಸಿದರು.
10 ಕೋಟಿ ರೂ. ಘೋಷಣೆ: ನುಡಿ ಜಾತ್ರೆಗೆ ರಾಜ್ಯ ಸರ್ಕಾರ 10 ಕೋಟಿ ರೂ. ಘೋಷಣೆ ಮಾಡಿದ್ದು, ಎರಡ್ಮೂರು ದಿನದಲ್ಲಿ ಅನುದಾನ ಬಿಡುಗಡೆಯಾಗಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಈಗಾಗಲೆ 10 ಲಕ್ಷ ರೂ. ಅನುದಾನ ನೀಡಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ದೇಣಿಗೆ ಸಂಗ್ರಹ ಮುಂದುವರೆದಿದೆ ಎಂದರು.
126 ಲೇಖನಗಳ ಸ್ಮರಣ ಸಂಚಿಕೆ ಸಿದ್ಧ: 126 ಲೇಖನಗಳನ್ನು ಒಳಗೊಂಡ 700 ಪುಟಗಳ ವೈವಿಧ್ಯಮಯ ಸ್ಮರಣ ಸಂಚಿಕೆ ಸಿದ್ಧಗೊಂಡಿದೆ. ಜನವರಿ 27ರಿಂದ ಕಲಬುರಗಿ ಜಿಲ್ಲೆಯಲ್ಲಿ ಹಿರಿಯ ಸಾಹಿತಿಗಳಿಂದ ಆಮಂತ್ರಣ ಪತ್ರಿಕೆ ವಿತರಣೆಗೆ ಚಾಲನೆ ನೀಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ದೌಲತರಾವ ಪಾಟೀಲ, ಗೌರವ ಕಾರ್ಯದರ್ಶಿ ವಿಜಯಕುಮಾರ್ ಪೊರತೆ, ಮಡಿವಾಳಪ್ಪ ನಾಗರಹಳ್ಳಿ, ಎಸ್.ಸಿ.ಎಸ್.ಟಿ. ಅಧ್ಯಕ್ಷ ಅಂಬಾಜಿ ಕವಲಗಾ, ಉತ್ತರ ವಲಯದ ಲಿಂಗರಾಜ, ದಕ್ಷಿಣ ವಲಯದ ಆನಂದ ನಂದೂರ್ಕರ್ ಇದ್ದರು. (ಮಾಹಿತಿ ಕೃಪೆ: ಗುಲ್ಬರ್ಗಾ ವಾರ್ತೆ)