ಗಂಡು ಮಗುವಿಗಾಗಿ ತಾಯಂದಿರ ಪಟ್ಟು , ಡಿಎನ್ಎ ಪರೀಕ್ಷೆಗೆ ಚಿಂತನೆ
ಕಲಬುರಗಿ, ಡಿಸೆಂಬರ್ 20: ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತು ಶಿಶುಗಳ ಅದಲಿ ಬದಲಿ ಪ್ರಕರಣ ಅಂತ್ಯ ಕಾಣದೆ ದಿನದಿಂದ ದಿನಕ್ಕೆ ಜಠಿಲಗೊಳ್ಳುತ್ತಾ ಹೋಗುತ್ತಿದೆ.
ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಡಿಸೆಂಬರ್ 14 ರಂದು ವೈದ್ಯರ ಎಡವಟ್ಟಿನಿಂದಾಗಿ ನವಜಾತ ಶಿಶುಗಳು ಅದಲು ಬದಲಾಗಿದ್ದವು, ಹೆಣ್ಣು ಮಗು ಹೆತ್ತ ನಂದಮ್ಮನಿಗೆ ಗಂಡು ಮಗು ಕೊಟ್ಟು, ಗಂಡು ಮಗು ಹೆತ್ತಿದ್ದ ನಾಜ್ಬಿಯಾಗೆ ಹೆಣ್ಣು ಮಗು ಕೊಟ್ಟಿದ್ದರು, ಆದರೆ ಆಮೇಲೆ ತಪ್ಪಿನ ಅರಿವಾಗಿ ಮಕ್ಕಳನ್ನು ಮತ್ತೆ ಅವರ ತಾಯಂದಿರಿಗೆ ತಲುಪಿಸಲು ಪ್ರಯತ್ನಿಸಿದ್ದರು.
ಆದರೆ ನಂದಮ್ಮ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ 'ನಾನು ಹೆತ್ತಿರುವುದು ಗಂಡು ಮಗುವನ್ನೇ ವೈದ್ಯರು ನನ್ನ ಮಗುವನ್ನು ಬೇರೆಯವರಿಗೆ ನೀಡಿ ನನಗೆ ಹೆಣ್ಣು ಮಗು ನೀಡಿದ್ದಾರೆ ಎಂದು ಪ್ರತಿಭಟನೆ ಪ್ರಾರಂಭ ಮಾಡಿದ್ದರು. ಇತ್ತ ನಾಜ್ಬಿಯಾ ನಾನು ಹೆತ್ತಿರುವುದು ಗಂಡು ಮಗು ಅದನ್ನು ಬೇರೆಯವರಿಗೆ ನಾನು ಕೊಡಲು ತಯಾರಿಲ್ಲ ಎಂದಿದ್ದರು.
ವೈದ್ಯರು ಎಷ್ಟು ಹೇಳಿದರೂ ಕೇಳದೆ ನಂದಮ್ಮ ಹಾಗೂ ಕುಟುಂಬದವರು ಗಂಡು ಮಗುವೇ ಬೇಕೆಂದು ಪಟ್ಟು ಹಿಡಿದ ಕಾರಣ ವೈದ್ಯರು ಮಕ್ಕಳ ಹಾಗೂ ಪೋಷಕರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳಿಸಿದ್ದರು.
ಇದೀಗ ರಕ್ತದ ಪರೀಕ್ಷೆ ವರದಿಗಳು ಬಂದಿದ್ದು, ನಂದಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು ಎಂದು ತಿಳಿದು ಬಂದಿದೆ ಆದರೆ ನಂದಮ್ಮ ವರದಿಯನ್ನು ನಿರಾಕರಿಸಿದ್ದು, ಗಂಡು ಮಗುವನ್ನೇ ಹೆತ್ತಿದ್ದೇನೆ ಎಂದು ಹಠ ಹಿಡಿದಿದ್ದಾರೆ.
ಸಚಿವರೂ ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದು ಕಲಬುರಗಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ರಕ್ತ ಪರೀಕ್ಷೆ ವರದಿ ಬಂದ ನಂತರ ಪ್ರಕರಣ ತಾರ್ತಿಕವಾಗಿ ಅಂತ್ಯವಾಗಬೇಕಿತ್ತು ಆದರೆ ಮಹಿಳೆ ವರದಿಯನ್ನ ತಿರಸ್ಕರಿಸಿದ್ದಾಳೆ, ಅಗತ್ಯ ಬಿದ್ದರೆ ಡಿಎನ್ಗೆ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಈಗಿನ 'ಭೇಟಿ ಪಡಾವೊ ಭೇಟಿ ಬಚಾವೊ' ಸೇರಿದಂತೆ ಈ ಮುಂಚೆಯೇ ಹೆಣ್ಣು ಶಿಶು ಜೀವ ಉಳಿಸಲು ನೂರಾರು ಕಾರ್ಯಕ್ರಮಗಳು ಬಂದು ಹೋಗಿದ್ದರು ಕೂಡ ಈಗಲೂ ಗಂಡು ಮೇಲೆಂಬ ಭಾವನೆ ಹೋಗಿಲ್ಲವೆಂಬುದಕ್ಕೆ ಇದೊಂದು ತಾಜಾ ಉದಾಹರಣೆ.