ಚಿಕನ್ ಊಟ ಕೊಟ್ಟಿಲ್ಲವೆಂದು ಆಶಾಕಾರ್ಯಕರ್ತೆಯ ಕೈ ಮುರಿದ ಭೂಪ
ಕಲಬುರಗಿ, ಮೇ 23: ಚಿಕನ್ ಊಟ ಕೊಡಲಿಲ್ಲ ಎಂಬ ಕಾರಣಕ್ಕೆ ಕ್ವಾರಂಟೈನ್ ಕೇಂದ್ರದಲ್ಲಿದ್ದ ವ್ಯಕ್ತಿಯೊಬ್ಬ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ ನಡೆದಿದೆ.
Recommended Video
ಆಶಾ ಕಾರ್ಯಕರ್ತೆ ಮೇಲೆ ಮಂತ್ರವಾದಿಯಿಂದ ಹಲ್ಲೆ ಯತ್ನ
ರೇಣುಕಾ ಕುಡಕಿ ಎಂಬ ಆಶಾ ಕಾರ್ಯಕರ್ತೆ ಮೇಲೆ ಸೋಮನಾಥ್ ಕಾಂಬಳೆ ಎಂಬ ವ್ಯಕ್ತಿ ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ. ಈತ ಮತ್ತು ಈತನ ಕುಟುಂಬದವರು ಮುಂಬೈನಿಂದ ಬಂದಿದ್ದರು. ಈ ಕಾರಣಕ್ಕಾಗಿ ಇಡೀ ಕುಟುಂಬವನ್ನು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ತನಗೆ ಚಿಕನ್ ಊಟ ಬೇಕು, ಮಕ್ಕಳಿಗೆ ಚಿಪ್ಸ್ ಬೇಕು ಎಂದು ಒಂದೊಂದೇ ಬೇಡಿಕೆಯನ್ನು ಆಶಾ ಕಾರ್ಯಕರ್ತೆ ಬಳಿ ಈತ ಇಟ್ಟಿದ್ದಾನೆ.
ಆದರೆ ಆಹಾರ ಸರಬರಾಜು ನನ್ನಿಂದ ಆಗುವುದಿಲ್ಲ, ಈ ಕುರಿತು ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಆಶಾ ಕಾರ್ಯಕರ್ತೆ ಉತ್ತರಿಸಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಸೋಮನಾಥ್, ಆಶಾ ಕಾರ್ಯಕರ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಸೋಮನಾಥನ ಹೆಂಡತಿ ಸೇರಿ ಕುಟುಂಬದ ಐವರು ಸದಸ್ಯರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ರೇಣುಕಾ ಅವರ ಕೈ ಮೂಳೆ ಮೂರಿದ್ದು, ಆಳಂದ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಸೋಮನಾಥ್ ಸೇರಿ ಐವರ ಮೇಲೆ ಪ್ರಕರಣ ದಾಖಲಾಗಿದೆ.