ಕಲಬುರಗಿಯಿಂದ ಎರಡು ತಿಂಗಳಲ್ಲಿ ವಿಮಾನ ಹಾರಾಟ
ಕಲಬುರಗಿ, ಜು.13: ಕಲಬುರಗಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಭಾಗದ ಅಭಿವೃದ್ಧಿಗೆ ವಿಮಾನ ನಿಲ್ದಾಣ ಕಾಮಗಾರಿಯನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಿ ವಿಮಾನ ಸೇವೆ ಕಾರ್ಯಾರಂಭ ಮಾಡುವಂತಾಗಬೇಕು ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ವಿಮಾನ ನಿಲ್ದಾಣಕ್ಕೆ ಅವಶ್ಯಕವಿರುವ ವಿದ್ಯುತ್ ಸಂಪರ್ಕ, ನೀರು ಸರಬರಾಜು ಕಾಮಗಾರಿ ಪೂರ್ಣಗೊಳಿಸಬೇಕು ಹಾಗೂ ಅಗ್ನಿಶಾಮಕ ಉಪಕರಣಗಳನ್ನು ಆದಷ್ಟು ಬೇಗ ಖರೀದಿಸಬೇಕು ಎಂದರು.
ಒಂದೂವರೆ ತಿಂಗಳಲ್ಲಿ ಕಲಬುರಗಿಯಲ್ಲಿ ವಿಮಾನ ಹಾರಾಟ
ವಿಮಾನ ನಿಲ್ದಾಣದ ರನ್ ವೇ ಮಾರ್ಕಿಂಗ್ ಮತ್ತು ಆವರಣ ಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ಪ್ರಾರಂಭಿಸುವುದಾಗಿ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯು ತಿಳಿಸಿದೆ. ಈ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.
ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ದಿನಾಂಕ ಪಡೆದು ಪ್ರಾಯೋಗಿಕ ವಿಮಾಣ ಹಾರಾಟ ಪ್ರಾರಂಭಿಸಬಹುದಾಗಿದೆ ಎಂದು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಹೆಚ್.ಕೆ.ಆರ್.ಡಿ.ಬಿ. ಯಿಂದ ವಿಮಾನ ನಿಲ್ದಾಣ ಆವರಣದಲ್ಲಿ 4 ಬೊರವೇಲ್ ಕೊರೆದು ಅವಶ್ಯಕ ನೀರು ಪೂರೈಸಲಾಗುತ್ತಿದೆ ಹಾಗೂ ತಾತ್ಕಾಲಿಕ ಅಗ್ನಿಶಾಮಕ ಠಾಣೆ ನಿರ್ಮಿಸುವ ಮೂಲಕ ವಿಮಾನ ಹಾರಾಟ ಕೈಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಮಾನ ನಿಲ್ದಾಣದಲ್ಲಿ ರನ್ ವೇ ಆವರಣ ಗೋಡೆ, 10 ಕಿ.ಮೀ. ರಸ್ತೆ, ಟರ್ಮಿನಲ್ ಕಟ್ಟಡ, ಎಟಿಸಿ ಕಟ್ಟಡ, ಅಗ್ನಿಶಾಮಕ ಕಟ್ಟಡ ಪೂರ್ಣಗೊಳಿಸಲಾಗಿದೆ. ಸರ್ಕಾರವು ವಿಮಾನ ನಿಲ್ದಾಣ ಕಾಮಗಾರಿಯನ್ನು 175 ಕೋಟಿ ರೂ.ಗಳಿಗೆ ಪರಿಷ್ಕೃತವಾಗಿ ಅನುಮೋದನೆ ನೀಡಿದೆ.
ಈಗಾಗಲೇ ಹೆಚ್.ಕೆ.ಆರ್.ಡಿ.ಬಿ.ಯು 55.94 ಕೋಟಿ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯು 40.96 ಕೋಟಿ ರೂ. ಹೀಗೆ ಒಟ್ಟು 96.90 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಅಧಿಕಾರಿ ಅಮೀನ್ ಮುಖ್ತಾರ ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ: ಅನಂತಪುರ, ತೆಲಂಗಾಣಾ, ಆಂಧ್ರಾ ಹಾಗೂ ರಾಜ್ಯದ ಇತರೆ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಜಿಲ್ಲೆಗೆ ಸಂಬಂಧಿಸಿದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಮಾಹಿತಿ ನೀಡಬೇಕು. ಕ್ರಿಯಾ ಯೋಜನೆ ರೂಪಿಸಬೇಕಾಗಿರುವ ಹಾಗೂ ಈಗಾಗಲೇ ಮಂಜೂರಾತಿ ಸಿಕ್ಕಿರುವ ರಸ್ತೆಗಳ ವಿವರ ಮುಂದಿನ ಸಭೆಯಲ್ಲಿ ಚರ್ಚಿಸುವಾಗ ಅಧಿಕಾರಿಗಳು ನೀಡಬೇಕೆಂದರು. .
ಹೆದ್ದಾರಿಗಳನ್ನು ಯಾವ ಭಾಗದಲ್ಲಿ ಸಿಮೆಂಟ್ನಿಂದ ಹಾಗೂ ಡಾಂಬರ್ನಿಂದ ನಿರ್ಮಿಸಲಾಗುತ್ತಿದೆ ಎಂಬ ಮಾಹಿತಿ ನೀಡಬೇಕು. ರಸ್ತೆ ನಿರ್ಮಿಸಿದಾಗ ರಸ್ತೆ ಪಕ್ಕದಲ್ಲಿ ಮುರುಮ್ ತುಂಬಬೇಕು ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದ ಸಂಸದರು, ಚೌಡಾಪುರದಿಂದ ಗಾಣಗಾಪುರವರೆಗೆ ನಿರ್ಮಿಸಿರುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದ ಭಕ್ತಾದಿಗಳಿಗೆ ತೊಂದರೆ ಉಂಟಾಗುತ್ತಿದೆ. ಅವುಗಳನ್ನು ಆದಷ್ಟು ಬೇಗ ಮುಚ್ಚಬೇಕು ಎಂದರು.