ವಿವಾಹ ಬಂಧನದಲ್ಲಿ ಅಧ್ಯಕ್ಷೆ-ಉಪಾಧ್ಯಕ್ಷರು, ವಿಚಾರಿಸಿ ಕ್ರಮ ಎಂದರು ಡೀಸಿ!
ಬೆಂಗಳೂರು, ಜು. 14: ಇತ್ತೀಚೆಗಂತೂ ರಾಜಕೀಯ ಎಂದರೆ ಬರಿ ಕೆಸರೆರಚಾಟ ಎಂಬಂತಾಗಿದೆ. ಆದರೆ ಅದಕ್ಕೆ ವಿರುದ್ಧವಾಗಿ ನಮ್ಮ ರಾಜ್ಯದಲ್ಲಿ ಆಗಾಗ ರಾಜಕೀಯವೇ ಬೇರೆ ಜೀವನವೇ ಬೇರೆ ಎಂಬಂತಹ ಸಂಗತಿಗಳು ನಡೆದಿವೆ. ಈಗಲೂ ನಡೆಯುತ್ತಿವೆ. ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಸ್ಪತ್ರೆಯಲ್ಲಿದ್ದಾಗ ಪಕ್ಷಬೇಧ ಮರೆತು ಎಲ್ಲ ರಾಜಕೀಯ ಮುಖಂಡರು ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದರು.
Recommended Video
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸಿದ್ದರು. ಹೀಗೆ ರಾಜಕೀಯ ಜಿದ್ದಾಜಿದ್ದಿಯ ಮಧ್ಯೆ ರಾಜ್ಯದ ರಾಜಕಾರಣಿಗಳಲ್ಲಿ ಸೌಹಾರ್ಧಯುತ ನಡೆಗಳು ನೋಡಲು ಸಿಗುವುದು ನಮ್ಮ ರಾಜ್ಯದಲ್ಲಿ ಮಾತ್ರ ಎನ್ನಬಹುದು. ಈಗ ಅದನ್ನು ಮೀರಿದ ವೈವಾಹಿಕ ಸಂಬಂಧವೊಂದು ರಾಜ್ಯದಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಕಠಿಣ ಲಾಕ್ಡೌನ್ ನಿಯಮಗಳು: ಬೊಮ್ಮಾಯಿ
ವಿವಾಹ ಬಂಧನದಲ್ಲಿ ಜನಪ್ರತಿನಿಧಿಗಳು
ಪ್ರೀತಿ ಅನ್ನೋದು ಹಾಗೆ. ಅದು ಎಲ್ಲಿ? ಯಾವಾಗ? ಯಾರ? ಜೊತೆ ಆಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ರಾಜಕೀಯದಲ್ಲಿ ಪ್ರತಿಷ್ಠೆಗಾಗಿ ಬೇರೆ ಬೇರೆ ಪಕ್ಷಗಳ ಮುಖಂಡರು ವೈವಾಹಿಕ ಸಂಬಂಧ ಬೆಳೆಸುವುದು ಸಹಜ. ಆದರೆ ಅಲ್ಲೊಂದು ಯುವ ಜೋಡಿ ಪ್ರತಿಷ್ಠೆಗಾಗಿ ಅಲ್ಲ, ಪ್ರೀತಿಯಿಂದ ವಿವಾಹ ಬಂಧನದಲ್ಲಿ ಸಿಲುಕಿದೆ.
ಹೌದು, ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಾಗೂ ಅದೇ ಪಂಚಾಯಿತಿಯ ಉಪಾಧ್ಯಕ್ಷ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಜೊತೆಗೆ ಇಬ್ಬರು ಪ್ರತಿನಿಧಿಸುತ್ತಿರುವ ಪಕ್ಷಗಳು ಬೇರೆ ಬೇರೆ ಎಂಬುದು ಮತ್ತೊಂದು ವಿಶೇಷ. ಒಬ್ಬರು ಬಿಜೆಪಿಯಿಂದ ತಾಪಂ ಸದಸ್ಯರಾಗಿ ಆಯ್ಕೆಯಾಗಿದ್ದರೆ, ಮತ್ತೊಬ್ಬರು ಕಾಂಗ್ರೆಸ್ ಪಕ್ಷದಿಂದ ತಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದರು.
ರಾಜಕೀಯ ಬೇರೆ, ಪ್ರೀತಿ ಬೇರೆ
ತಾಲ್ಲೂಕು ಪಂಚಾಯಿತಿ ಎಂದ ಮೇಲೆ ಕೇಳಬೇಕೆ? ಅಲ್ಲಿ ರಾಜಕೀಯ ಜಿದ್ದಾಜಿದ್ದಿ ಇದ್ದೇ ಇರುತ್ತದೆ. ಆದರೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ರಾಜಕೀಯ ಹೊರತು ಪಡಿಸಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಆ ಮೂಲಕ ಮೂಲಕ ರಾಜಕೀಯ ಬೇರೆ, ಪ್ರೀತಿ ಬೇರೆ ಎಂದಿದ್ದಾರೆ.
ಅಫಜಲಪುರ ತಾಲೂಕ ಪಂಚಾಯ್ತಿ ಅಧ್ಯಕ್ಷೆ ರುಕ್ಮಿಣಿ ಜಮಾದಾರ್ ಅವರು ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದು, ಕಾಂಗ್ರೆಸ್ ಪಕ್ಷ ಪ್ರತಿನಿಧಿಸುವ ಉಪಾಧ್ಯಕ್ಷ ಭೀಮಾಶಂಕರ್ ಹೊನ್ನಕೇರಿ ಅವರು ಮದುವೆಯಾಗುವ ಹೊಸ ಭಾಷ್ಯೆ ಬರೆದಿದ್ದಾರೆ. ತಾಲ್ಲೂಕು ಪಂಚಾಯಿತಿ ಸದಸ್ಯೆಯಾಗಿ ರುಕ್ಮಿಣಿ ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದರೆ, ಕಾಂಗ್ರೆಸ್ನಿಂದ ಭೀಮಾಶಂಕರ್ ತಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದರು.
ಜಿಡಗಾ ಮಠದಲ್ಲಿ ಮದುವೆ
ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಮಧ್ಯೆ ಪರಸ್ಪರ ಪ್ರೀತಿ ಚಿಗುರಿ ನಿನ್ನೆ (ಜು.13) ಆಳಂದ ತಾಲ್ಲೂಕಿನ ಜಿಡಗಾ ಮಠದಲ್ಲಿ ಮದುವೆಯಾಗುವ ಮೂಲಕ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಇವರಿಬ್ಬರ ಮದುವೆಗೆ ಎರಡೂ ಪಕ್ಷಗಳ ಮುಖಂಡರು ಬಂದು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಇಬ್ಬರೂ
ಸರಳ
ವಿವಾಹವಾಗಿದ್ದರೂ
ಕೂಡ
ಲಾಕ್ಡೌನ್
ನಿಯಮಗಳ
ಉಲ್ಲಂಘನೆ
ಮಾಡಿದ
ಆರೋಪ
ಎದುರಿಸಿದ್ದಾರೆ.
ವಿಚಾರಿಸಿ ಕ್ರಮ ಎಂದ ಡಿಸಿ
ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್-19 ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮದುವೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಕೇವಲ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾತ್ರ ವಿವಾಹ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಆದೇಶ ಮಾಡಲಾಗಿದೆ. ಆದರೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ, ಉಪಾಧ್ಯಕ್ಷರು ಇಬ್ಬರೂ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ಈ ಬಗ್ಗೆ ಕೇಳಿದಾಗ ಪ್ರತಿಕ್ರಿಯೆ ಕೊಟ್ಟಿರುವ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಅವರು, ಆಳಂದ ತಾಲ್ಲೂಕಿನ ಜಿಡಗಾ ಮಠದಲ್ಲಿ ಮದುವೆಯಾಗಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಮದುವೆಯಾಗಿದ್ದರೆ ಅವರಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದಿದ್ದಾರೆ.