ಕಲಬುರಗಿಯಲ್ಲಿ ಭಾರೀ ಮಳೆ; ಕಾಗಿಣಾ ಸೇತುವೆ ಸಂಪೂರ್ಣ ಮುಳುಗಡೆ
ಕಲಬುರಗಿ, ಸೆಪ್ಟೆಂಬರ್ 16: ಕಲಬುರಗಿ ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಲಬುರಗಿಯ ಸೇಡಂ ತಾಲೂಕಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಮಳೆಯಿಂದ ಅನೇಕ ಮನೆಗಳಿಗೆ ನೀರು ನುಗ್ಗಿದೆ.
ಪಟ್ಟಣದ ಚೋಟಿ ಗಿರಣಿ, ಕೋಡ್ಲಾ ಕ್ರಾಸ್, ಜಿ.ಕೆ. ರಸ್ತೆ, ದೊಡ್ಡ ಅಗಸಿ, ಸಣ್ಣ ಅಗಸಿ ಸೇರಿದಂತೆ ಅನೇಕ ಕಡೆಗಳ ರಸ್ತೆಗಳ ಮೇಲೆ ನೀರು ತುಂಬಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿದ್ದ ದವಸ-ಧಾನ್ಯಗಳು ನೀರು ಪಾಲಾಗಿದ್ದು, ನಿವಾಸಿಗಳು ಅವೈಜ್ಞಾನಿಕ ಚರಂಡಿಗಳ ನಿರ್ಮಾಣದಿಂದಲೇ ಮನೆಗಳಿಗೆ ನೀರು ನುಗ್ಗಿದೆ ಎಂದು ಆರೋಪಿಸಿದ್ದಾರೆ.
ಕಲಬುರಗಿ, ಬೀದರ್ನಲ್ಲಿ ಭಾರಿ ಮಳೆ; ಕರಾವಳಿಯಲ್ಲಿ ಅಬ್ಬರ ಕಡಿಮೆ
ತಾಲೂಕಿನ ವಿವಿದೆಢೆಯಲ್ಲಿ ಐದು ಮನೆಗಳು ನೆಲಸಮವಾಗಿವೆ. ಕಾಗಿಣಾ ಮತ್ತು ಕಮಲಾವತಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಲು ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ ಮನವಿ ಮಾಡಿದ್ದಾರೆ.
ನಿರಂತರ ಮಳೆಯಿಂದಾಗಿ ಸೇಡಂನ ಮಳಖೇಡ ಗ್ರಾಮದ ಸಮೀಪವಿರುವ ಕಾಗಿಣಾ ನದಿಯ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಇದೇ ಮಾರ್ಗವಾಗಿ ಪ್ರತಿನಿತ್ಯ ನೂರಾರು ವಾಹನಗಳು ಕಲಬುರಗಿ, ಹೈದರಾಬಾದ್ಗೆ ತೆರಳುತ್ತಿದ್ದವು. ಮಂಗಳವಾರ ತಡರಾತ್ರಿ ತುಂಬಿ ಹರಿದ ಕಾಗಿಣಾ ನದಿಯಿಂದ ಕಲಬುರಗಿಗೆ ಸಂಪರ್ಕ ಕಡಿತಗೊಂಡಿದೆ. ವಾಹನ ಸವಾರರು ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ.