ಜೆಡಿಎಸ್ ನಾಯಕರ ಹೇಳಿಕೆ ಗಮನಿಸಿದರೆ ಸರ್ಕಾರ ಶೀಘ್ರ ಪತನ: ಬಿಎಸ್ವೈ
ಚಿಂಚೋಳಿ, ಮೇ 13: ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ನಾಯಕರ ಮಾತನಾಡೋದು ನೋಡಿದರೆ ಈ ಸರಕಾರ ಬಹಳ ದಿನ ಇರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಂಗವಾಗಿ ಚಿಮ್ಮನಚೋಡ್ ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಮೈತ್ರಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಬಿರು ಬಿಸಿಲಿನಲ್ಲಿ ಸಭೆಗೆ ಆಗಮಿಸಿದ್ದ ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಿದ ಯಡಿಯೂರಪ್ಪ, ಮೇ 23 ರ ನಂತರ ಮಲ್ಲಿಕಾರ್ಜುನ ಖರ್ಗೆ ಸೋಲ್ತಾರೆ ಎಂದರು.
ಚಿಂಚೋಳಿ ಉಪ ಚುನಾವಣಾ ಕಣ : ಪಕ್ಷಗಳ ಬಲಾಬಲ
ಚಿಂಚೋಳಿ ಹಾಗೂ ಕುಂದಗೋಳ ಉಪಚುನಾವಣೆಯಲ್ಲಿ ಬಿ ಜೆ ಪಿ ಗೆಲುವು ಸಾಧಿಸಿದರೆ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗುವುದು ಖಚಿತ. ಕಳೆದ 50 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈ ಕ್ಷೇತ್ರದ ಅಭಿವೃದ್ದಿಗೆ ಕಾಳಜಿ ತೋರಿಸಿಲ್ಲ. ಕಳೆದ ಬಾರಿ ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ಉಮೇಶ್ ಜಾಧವ್ ಅವರು ಬಹಳಷ್ಟು ಪ್ರಯತ್ನಪಟ್ಟರು. ಆದರೆ ಅದಕ್ಕೆ ಅಡ್ಡಗಾಲು ಹಾಕಿದ್ದು ಮಲ್ಲಿಕಾರ್ಜುನ ಖರ್ಗೆ ಅವರು. ಚಿಂಚೋಳಿ ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಭರವಸೆಯನ್ನು ನೀಡಿದ ಅವರು, ಕೋಲಿ ಸಮಾಜವನ್ನು ಎಸ್ ಟಿ ಗೆ ಸೇರಿಸೋ ಜವಾಬ್ದಾರಿ ನನ್ನದು ಎಂದು ಹೇಳಿದರು.
ಸಾಲಮನ್ನಾ ಮಾಡುತ್ತೇನೆ ಎಂದು ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಬೇಡಿ. ಸಾಲ ಮನ್ನಾ ಮಾಡಿ ಅಧಿಕಾರ ಬಿಟ್ಟು ತೊಲಗಿ ಎಂದು ಗುಟುರು ಹಾಕಿದರು. ತಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು, ಈ ಸರಕಾರ ನನ್ನ ಯೋಜನೆಗಳನ್ನು ಮುಂದುವರೆಸುತ್ತಿಲ್ಲ ಎಂದು ಆರೋಪಿಸಿದರು.
ಮೇ 23ರಂದು ಬಿಜೆಪಿ ಶಾಸಕರ ಸಭೆ
ಮೇ 23 ರಂದು ಬಿಜೆಪಿ ಶಾಸಕರ ಸಭೆ ಕರೆಯುತ್ತೇವೆ. ಸಿದ್ದರಾಮಯ್ಯ ವಿರುದ್ದ ಜೆಡಿಎಸ್ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹೇಳಿಕೆಗಳನ್ನು ಗಮನಿಸಿದರೆ ಈ ಸರಕಾರ ಬಹಳಷ್ಟು ದಿನ ಇರುವುದಿಲ್ಲ ಎನ್ನುವುದು ನಿಶ್ಚಿತವಾಗಿದೆ. ನಾವು ಸರಕಾರ ಬಿಳಿಸೋದು ಬೇಡ ಅವರೇ ಕಚ್ಚಾಡಿಕೊಂಡು ಸರಕಾರವನ್ನು ಕಳೆದುಕೊಳ್ಳುತ್ತಾರೆ ಎಂದರು.
ಪ್ರಚಾರದಲ್ಲಿ ಶೋಭಾ ಕರಂದ್ಲಾಜೆ ಭಾಗಿ
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಇಡೀ ರಾಜ್ಯ ಸರಕಾರ ಕುಂದಗೋಳ ಮತ್ತು ಚಿಂಚೋಳಿಯಲ್ಲಿದೆ. ರಾಜ್ಯದ ಅಭಿವೃದ್ದಿ ಮಾಡಬೇಕಾದ ಸಿಎಂ ರೆಸಾರ್ಟ್ನಲ್ಲಿದ್ದಾರೆ. ಐತಿಹಾಸಿಕ ವಿಧಾನಸೌಧ ವನ್ನು ಬಿಟ್ಟು ಎಲ್ಲೆಲ್ಲೂ ಕೂತು ಆಡಳಿತ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 7 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿದರೆ, ಸಿಎಂ ಕುಮಾರಸ್ವಾಮಿ ಪ್ರಚಾರ ಮಾಡಿದ್ದ ಮೂರು ಕ್ಷೇತ್ರಗಳಲ್ಲಿ ಮಾತ್ರ. ಅಷ್ಟಕ್ಕೇ ಸುಸ್ತಾದರೇ, ಎಂದು ಪ್ರಶ್ನಿಸಿದ ಅವರು ರೆಸ್ಟ್ ಗೆ ರೆಸ್ಟೋರೆಂಟ್ ಗೆ ಬಂದಿದ್ದಾರೆ ಎಂದು ವಂಗ್ಯವಾಡಿದರು. ಕೇಂದ್ರದ ಬರ ಪರಿಹಾರ ಹಣವನ್ನೂ ಸರಿಯಾಗಿ ಬಳಸಿಲ್ಲ. ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರ ಕೊಡುಗೆ ಏನು. ಜಾತಿ ಜಾತಿಗಳ ಮಧ್ಯೆ ಜಗಳ ತಂದರು. ಲಿಂಗಾಯತ ವೀರಶೈವರ ಮಧ್ಯೆ ಜಗಳ ತಂದಿಟ್ಟರು. ಅನ್ನಭಾಗ್ಯದ ಅಕ್ಕಿ ಗೋಧಿಯನ್ನು ಕಾಂಗ್ರೆಸ್ ಪುಢಾರಿಗಳು ಮಾರಾಟ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸಂಖ್ಯಾಬಲ 104 ರಿಂದ 106ಕ್ಕೇರಿಕೆ: ಶೋಭಾ ಕರಂದ್ಲಾಜೆ ವಿಶ್ವಾಸ
ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯೆ
ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಅವರಿಗೆ ತಲೆಕೆಟ್ಟಿದೆ. ಈ ಹಿಂದೆ ಕುಮಾರಸ್ವಾಮಿ ಸಿಎಂ ಆದರೆ ತಲೆಕಡಿದುಕೊಳ್ಳುತ್ತೇನೆ ಎಂದಿದ್ದರು. ಅದೇ ಕುಮಾರಸ್ವಾಮಿ ಸರಕಾರದಲ್ಲಿ ಸಚಿವರಾಗಿದ್ದಾರೆ. ಈಗ ಯಡಿಯೂರಪ್ಪ ಸಿಎಂ ಆದ್ರೆ ಮನೆ ಕಾಯ್ತಿನಿ ಅಂತಾರೆ. ಅವರ ಅವಾಗಾವಗ ಕೆಡುತ್ತಿರುತ್ತದೆ. ಅವರ ಮಾತಿಗೆ ಬೆಲೆ ಇಲ್ಲ. ಒಮ್ಮೆ ತಲೆಬೋಳಿಸಿಕೊಳಸ್ತೇನೆ ಅಂದ್ರು, ಒಮ್ಮೆ ತಲೆಕಡಿದು ಟೇಬಲ್ ಮೇಲೆ ಇಡುತ್ತೆನೆ ಎಂದ್ರು. ಆಂತರಿಕ ಜಗಳ ಕಚ್ಚಾಟದಿಂದಲೇ ಕುಮಾರಸ್ವಾಮಿ ರೆಸಾರ್ಟ್ಗೆ ಹೋಗಿದ್ದಾರೆ. ಇವರರಿವರ ಪಾಪಕ್ಕೆ ಜನರು ಪರಿತಪಿಸುತ್ತಿದ್ದಾರೆ ಎಂದರು.
ಆಪರೇಶನ್ ಹಸ್ತ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸತೀಶ್ ಜಾರಕಿಹೊಳಿ ಮೊದಲು ಅವರ ಸಹೋದರ ರಮೇಶ್ ಅವರನ್ನು ಸಂಭಾಳಿಸಲಿ. ಆಮೇಲೆ ನಮ್ಮವರನ್ನು ಕರೆದುಕೊಳ್ಳಲಿ. ಅವರ ಹೇಳಿಕೆಗಳಿಗೆ ಬೆಲೆ ಇರಬೇಕಲ್ವಾ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಸಿಎಂ ಆದರೆ ಒಂದು ದಿನ 'ಚೌಕಿದಾರ್' ಆಗ್ತೀನಿ: ಜಮೀರ್ ಅಹ್ಮದ್
ಮಾಜಿ ಶಾಸಕ ಉಮೇಶ್ ಜಾಧವ್
ಮಾಜಿ ಶಾಸಕ ಉಮೇಶ್ ಜಾಧವ್ ಮಾತನಾಡಿ, ಇಂದೊಂದು ವಿಶೇಷ ಉಪಚುನಾವಣೆ. ಚಿಂಚೋಳಿಯಲ್ಲಿ ಯಾರು ಶಾಸಕರಾಗ್ತಾರೋ ಅವರದ್ದೇ ಪಕ್ಷ ಅಧಿಕಾರದಲ್ಲಿ ಇರುತ್ತದೆ. ಯಡಿಯೂರಪ್ಪ ಸಿಎಂ ಆಗಲು, ಈ ಎಲ್ಲಾ ಘಟನೆ ನಡೆಯುತ್ತಿದೆ. ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ನಾಲಿಗೆ ಮೇಲೆ ಹಿಡಿತ ಇಲ್ಲ. ಅವರು ಏನು ಮಾತನಾಡ್ತಾರೋ ಅವರಿಗೇ ಗೊತ್ತಿಲ್ಲ. ಒಂದೋಂದು ಮನೆಗೆ ಒಬ್ರ ಮಂತ್ರಿ ಕಳುಹಿಸಿದ್ರೂ, ಚಿಂಚೋಳಿ ಜನ ಬದಲಾಗಲ್ಲ. ನಾನು ಯಾವೋತ್ತೂ ಪರಮೇಶ್ವರ್ ಕಾಲಿಗೆ ಬಿದ್ದಿಲ್ಲ. ನಾನು ಕೇವಲ ಮತದಾರರ ಕಾಲು ಮುಗಿದಿದ್ದೇನೆ. ರಾಜೀನಾಮೆ ಅಂಗೀಕಾರಕ್ಕೂ ಕಿರಿಕಿರಿ ಮಾಡಿದ್ರು. ಆದ್ರೂ ಹಣ ಪಡೆದಿದ್ದೇನೆ ಎಂದು ಸುಳ್ಳು ಹೇಳುತ್ತಾ ಡಂಗೂರು ಸಾರುತ್ತಿದ್ದಾರೆ. ಅಭಿವೃದ್ದಿ ಬಗ್ಗೆ ಮಾತನಾಡಿದರೆ ಕಾಂಗ್ರೆಸನ್ನು ಇಲ್ಲಿ ಜನರು ಓಡಿಸ್ತಾರೆ. ನನಗಷ್ಟೇ ಅಲ್ಲ ವೀರೇಂದ್ರ ಪಾಟೀಲ್ ಗೂ ಕಿರುಕುಳ ಕೊಟ್ಟ ಪಕ್ಷ ಕಾಂಗ್ರೆಸ್ ಎಂದು ಆರೋಪಿಸಿದರು.
ಸುಭಾಷ್ ರಾಥೋಡ್ ನೀತಿಗೆಟ್ಟವನು, ಸ್ಪರ್ಧಿಸಲು ಅನರ್ಹ: ಉಮೇಶ್ ಜಾಧವ್
ಮಾಜಿ ಸಚಿವ ಬಾಬುರಾವ್ ಚಿಂಚನಸೂರು
ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಮಾತನಾಡಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಪ್ರಧಾನಿಯಾಗುವ ತಿರುಕನ ಕನಸನ್ನು ಕಾಣುತ್ತಿದ್ದಾರೆ. ಅವರು ಪ್ರಧಾನಿಯಾದ್ರೆ ಕೋಲಿ ಸಮಾಜವನ್ನು ಎಸ್.ಟಿ ಗೆ ಸೇರಿಸುತ್ತೇವೆ ಎಂದು ಖರ್ಗೆ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಎರಡು ವರ್ಷಗಳ ಕಾಲ ನಾನು ಕೋಲಿ ಸಮುದಾಯವನ್ನು ಎಸ್ ಟಿ ಗೆ ಸೇರಿಸಿ ಎಂದು ಪ್ರತಿಭಟನೆ, ಧರಣಿ ಸತ್ಯಾಗ್ರಹ ಹಾಗೂ ಉರುಳು ಸೇವೆಯನ್ನು ಮಾಡಿದ್ದೇನೆ. ಆಗ ಕಾಂಗ್ರೆಸ್ ನಾಯಕರು ಯಾವುದೇ ಚಕಾರವೆತ್ತಲ್ಲಿಲ್ಲಾ. 50 ವರ್ಷಗಳಿಂದ ರಾಜಕೀಯದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಯುಪಿಎ ಸರಕಾರದ ಅವಧಿಯಲ್ಲಿ ಈ ಬಗ್ಗೆ ಚಿಂತಿಸಬೇಕು ಎನ್ನುವ ಪರಿಜ್ಞಾನ ಇರಲಿಲ್ಲಾ. ಈಗ ಚಿಂಚೋಳಿ ಉಪಚುನಾವಣೆ ಬಂದಿರುವ ಸಂಧರ್ಭದಲ್ಲಿ ಅವರಿಗೆ ಜ್ಞಾನೋದಯವಾಗಿದೆ. ಆದರೆ, ಈಗಾಗಲೇ ಈ ಫೈಲ್ ಪ್ರಧಾನಿ ನರೇಂದ್ರ ಮೋದಿ ಅವರ ಹತ್ತಿರವಿದ್ದು, ಅವರೇ ಕೋಲಿ ಸಮುದಾಯವನ್ನು ಎಸ್ ಟಿ ಸಮುದಾಯಕ್ಕೆ ಸೇರ್ಪಡೆ ಮಾಡಲಿದ್ದಾರೆ ಎಂದರು.
ಮೇ 23ರ ನಂತರ ಕಾಂಗ್ರೆಸ್ 4 ಹೋಳು: ಬಾಬುರಾವ್ ಚಿಂಚನಸೂರ್
ಮಾಜಿ ಸಚಿವ ಸುನೀಲ್ ವಲ್ಯಾಪುರ್
ಕೋಲಿ ಸಮಾಜದ ಹಕ್ಕನ್ನು ಕಿತ್ತುಕೊಂಡು ಮಗನ ಮಂತ್ರಿ ಮಾಡಿದ್ದಾರೆ. ಸತತವಾಗಿ ಎರಡು ವರ್ಷ ಸತ್ಯಾಗ್ರ ಮಾಡಿದ್ದೇನೆ. ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಉರುಳು ಸೇವೆ ಮಾಡಿದ್ದೇನೆ. ಆಗ ಖರ್ಗೆ ಮತ್ತು ಸಿದ್ದರಾಮಯ್ಯ ಸೌಜನ್ಯಕ್ಕೂ ಮಾತನಾಡಲಿಲ್ಲಾ. ಖರ್ಗೆ ಮನಸ್ಸು ಮಾಡಿದ್ದರೆ ಎರಡು ನಿಮಿಷದಲ್ಲಿ ಮಾಡಬಹುದಾಗಿದ್ದ ಕೆಲಸ ಇದು ಎಂದು ಹರಿಹಾಯ್ದರು.
ಮಾಜಿ ಸಚಿವ ಸುನೀಲ್ ವಲ್ಯಾಪುರ್ ಮಾತನಾಡಿ, ನನಗೆ ಕೊಟ್ಟ ಪ್ರೀತಿಯನ್ನು ಅವಿನಾಶ್ ಗೆ ನೀಡಿ. ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಅವಿನಾಶ್ ಜಾಧವ್ ನನ್ನ ಮಗನಿದ್ದಂತೆ ಅವನಿಗೆ ಆಶೀರ್ವದಿಸಿ. ಇದು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವ ಚುನಾವಣೆ. ಸುನೀಲ್ ವಲ್ಯಾಪುರ ಮತ್ತು ಉಮೇಶ್ ಜಾಧವ್ ಚಿಂಚೋಳಿಯ ಜೋಡೆತ್ತುಗಳು. ನಿಮ್ಮ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದರು.
ಸಭೆಯಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್, ಸಂಸದ ಭಗವಂತ ಖೂಬಾ, ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್, ಶಾಸಕ ರಾಜೀವ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.