ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ಗೆ ದೇವೇಗೌಡರ ಕಿವಿಮಾತು
ಕಲಬುರಗಿ, ನವೆಂಬರ್ 11: ಮಹಾರಾಷ್ಟ್ರದಲ್ಲಿ ರಾಜಕೀಯ ಗೊಂದಲ ಮುಂದುವರಿದಿದೆ. ಅಕ್ಟೋಬರ್ನಲ್ಲಿ ನಡೆದ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ತಾನು ಸರ್ಕಾರ ರಚನೆ ಮಾಡುವುದಿಲ್ಲ ಎಂದು ರಾಜ್ಯಪಾಲರಿಗೆ ಸ್ಪಷ್ಟಪಡಿಸಿದೆ.
ಹೀಗಾಗಿ ರಾಜ್ಯಪಾಲರು ಎರಡನೆಯ ಅತಿ ದೊಡ್ಡ ಪಕ್ಷ ಶಿವಸೇನಾಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡಿದೆ. ಅದರ ಬೆನ್ನಲ್ಲೇ ಎನ್ಸಿಪಿ ಮತ್ತು ಶಿವಸೇನಾ ನಾಯಕರು ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಶಿವಸೇನಾ-ಎನ್ಸಿಪಿ ನಡುವೆ ಮೈತ್ರಿ ಕುದುರಿದರೂ ಸರ್ಕಾರ ರಚನೆಗೆ ಸಾಲುವಷ್ಟು ಬಹುಮತ ಸಿಗುವುದಿಲ್ಲ. ಚುನಾವಣಾ ಪೂರ್ವದಲ್ಲಿ ಎನ್ಸಿಪಿ ಜತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಕೂಡ ಈ ಚುನಾವಣೋತ್ತರ ಮೈತ್ರಿಗೆ ಬೆಂಬಲ ನೀಡುವುದು ಅಗತ್ಯವಾಗಿದೆ. ಎನ್ಸಿಪಿ-ಶಿವಸೇನಾ ಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಲಿದೆ ಎಂದೂ ಹೇಳಲಾಗುತ್ತಿದೆ. ಈ ನಡುವೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಕಾಂಗ್ರೆಸ್ಗೆ ಕಿವಿಮಾತು ಹೇಳಿದ್ದಾರೆ.
ಮಿನಿ ಸಮರದ ಬಳಿಕ ರಾಜಕಾರಣ ಅದಲು-ಬದಲು
ರಾಜ್ಯದಲ್ಲಿ ಎರಡು ಬಾರಿ ಕಾಂಗ್ರೆಸ್ ಜತೆ ಮೈತ್ರಿ ಅಲ್ಪಾವಧಿ ಸರ್ಕಾರ ರಚಿಸಿದ್ದ ಜೆಡಿಎಸ್, ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಕಾಂಗ್ರೆಸ್ ಆಡಳಿತ ನಡೆಸಲು ಸಹಕಾರ ನೀಡದೆ ತಮಗೆ ಕಿರುಕುಳ ನೀಡಿತ್ತು ಎಂದು ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ದೇವೇಗೌಡರು ಕಾಂಗ್ರೆಸ್ಗೆ ನೀಡಿರುವ ಸಲಹೆ ಪ್ರಾಮುಖ್ಯ ಪಡೆದಿದೆ.
ಶಿವಸೇನಾಗೆ ಐದು ವರ್ಷ ಅಡ್ಡಿಪಡಿಸಬಾರದು
ಶಿವಸೇನಾಕ್ಕೆ ಕಾಂಗ್ರೆಸ್ ಬೆಂಬಲ ನೀಡುವುದೇ ಆದರೆ, ಅದು ಮುಂದಿನ ಐದು ವರ್ಷದವರೆಗೂ ಶಿವಸೇನಾ ಸರ್ಕಾರಕ್ಕೆ ಅಡ್ಡಿಪಡಿಸಬಾರದು. ಆಗ ಮಾತ್ರವೇ ಜನರು ಕಾಂಗ್ರೆಸ್ ಅನ್ನು ನಂಬುತ್ತಾರೆ ಎಂದು ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಬಿಜೆಪಿಗೆ ಪಾಠ ಕಲಿಸಲು ಅವಕಾಶ
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಜಾಗ ನೀಡಿದ್ದು ಬಾಳಸಾಹೇಬ್. ಅಡ್ವಾಣಿ ಮತ್ತು ವಾಜಪೇಯಿ ಅವರು ಬಾಳ ಸಾಹೇಬ್ ಅವರ ಮನೆಗೆ ತೆರಳಿ ಸೀಟುಗಳಿಗಾಗಿ ಮನವಿ ಮಾಡಿದ್ದರು. ಆದರೆ ಬಿಜೆಪಿ ಅದನ್ನು ಅತಿಕ್ರಮಿಸಿತು. ಹೀಗಾಗಿಯೇ ಅವರಿಗೆ ಪಾಠ ಕಲಿಸುವುದಕ್ಕಾಗಿ ಉದ್ಧವ್ ಠಾಕ್ರೆ ಒಂದು ನಿಲುವು ತೆಗೆದುಕೊಂಡಿದ್ದಾರೆ. ಬಿಜೆಪಿಯನ್ನು ಮಲಗಿಸುವುದಕ್ಕೆ ಈಗ ಕಾಂಗ್ರೆಸ್ ಮತ್ತು ಎನ್ಸಿಪಿಗೆ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಏನಿದು ದೇವೇಗೌಡ್ರ ಅಪ್ರತಿಮ ತಂತ್ರಗಾರಿಕೆ!
ಬಿಜೆಪಿ ಸರ್ಕಾರಕ್ಕೆ ಭಂಗವಿಲ್ಲ
ರಾಜ್ಯದಲ್ಲಿ ಉಪ ಚುನಾವಣೆ ಮುಗಿದ ಬಳಿಕ ಯಾವುದೇ ಫಲಿತಾಂಶ ಬಂದರೂ ಬಿಜೆಪಿ ಸರ್ಕಾರಕ್ಕೆ ಅಪಾಯವಾಗುವ ಸಾಧ್ಯತೆ ಕಡಿಮೆ ಎಂದು ಎಚ್ ಡಿ ದೇವೇಗೌಡ ಹೇಳಿದರು. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮತ್ತೆ ಒಂದಾಗಲು ಸದ್ಯಕ್ಕೆ ಸಾಧ್ಯವಿಲ್ಲ. ಹೀಗಾಗಿ ಬಿಜೆಪಿಗೆ ಉಪ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದರೂ ಸರ್ಕಾರಕ್ಕೆ ದಕ್ಕೆಯಾಗುವುದಿಲ್ಲ. ಬಿಜೆಪಿಯ ಒಳಗೆ ಸಮಸ್ಯೆ ಹೆಚ್ಚಾಗದಿದ್ದರೆ ಮಧ್ಯಂತರ ಚುನಾವಣೆ ಎದುರಾಗುವುದಿಲ್ಲ ಎಂದರು.
ಪಕ್ಷದ ಅಸ್ತಿತ್ವಕ್ಕಾಗಿ ಎಲ್ಲ ಕಡೆ ಸ್ಪರ್ಧೆ
ಉಪ ಚುನಾವಣೆಯಲ್ಲಿ ಎಲ್ಲ 15 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ. ಐದಾರು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಬಲ ಪೈಪೋಟಿ ನೀಡಬಲ್ಲದು. ಪಕ್ಷದ ಅಸ್ತಿತ್ವದ ದೃಷ್ಟಿಯಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಇಳಿಸುತ್ತೇವೆ. ನಮ್ಮ ಪಕ್ಷ ಅಷ್ಟೊಂದು ಶಕ್ತಿಯುತವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಪಕ್ಷ ಕಟ್ಟುವ ಹುಚ್ಚಿದೆ. ಉಪ ಚುನಾವಣೆಯಲ್ಲಿ ಹೋರಾಟ ಮಾಡುವುದು ಖಚಿತ. ಸೋಲು ಗೆಲುವು ಏನೇ ಇದ್ದರೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.