ಕಲಬುರಗಿ: ಕೊರೊನಾ ಜೊತೆಗೆ ಎದುರಾಯ್ತು ಮತ್ತೊಂದು ಆತಂಕ!
ಬೆಂಗಳೂರು, ಜುಲೈ 18: ದೇಶದಲ್ಲಿಯೇ ಕೊರೊನಾ ವೈರಸ್ ಸೋಂಕಿತರ ಮೊದಲ ಸಾವಾಗಿದ್ದು ನಮ್ಮ ರಾಜ್ಯದ ಕಲಬುರಗಿಯಲ್ಲಿ. ವಿದೇಶ ಪ್ರಯಾಣದ ಪ್ರವಾಸ ಹಿನ್ನೆಲೆ ಹೊಂದಿದ್ದ ವಯೋವೃದ್ಧರೊಬ್ಬರು ಸೋಂಕಿನಿಂದ ಮೃತಪಟ್ಟಿದ್ದರು. ಅದಾದ ಬಳಿಕ ಇಡೀ ರಾಜ್ಯದಲ್ಲಿ ಆತಂಕ ಶುರುವಾಗಿತ್ತು. ರಾಜ್ಯ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿತ್ತು. ದೇಶದಲ್ಲಿ ಲಾಕ್ಡೌನ್ ಜಾರಿಗೂ ಮೊದಲು ಕಲಬುರಗಿಯಲ್ಲಿ ಭಾಗಶಃ ಲಾಕ್ಡೌನ್ ಜಾರಿಮಾಡುವ ಮೂಲಕ ರಾಜ್ಯ ಸರ್ಕಾರ ಮಾದರಿಯಾಗಿತ್ತು.
Recommended Video
ಆದರೆ ಇದೀಗ ಬೆಂಗಳೂರು ಹಾಗೂ ಮಂಗಳೂರು ಹೊರತುಪಡಿಸಿದರೆ ಅತಿಹೆಚ್ಚು ಕೋವಿಡ್ ಸೋಂಕಿತ ಪ್ರಕರಣಗಳು ಕಲಬುರಗಿ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಕೊರೊನಾ ವೈರಸ್ ಜೊತೆಗೆ ಮತ್ತೊಂದು ಆತಂಕ ಜಿಲ್ಲೆಯ ಜನರಿಗೆ ಶುರುವಾಗಿದೆ. ಅದರಿಂದಾಗಿ ಜಿಲ್ಲಾಸ್ಪತ್ರೆಗೆ ಬರಲೂ ಜನರು ಹೆದರುತ್ತಿದ್ದಾರೆ.
ವಿವಾಹ ಬಂಧನದಲ್ಲಿ ಅಧ್ಯಕ್ಷೆ-ಉಪಾಧ್ಯಕ್ಷರು, ವಿಚಾರಿಸಿ ಕ್ರಮ ಎಂದರು ಡೀಸಿ!
ಜನರಲ್ಲಿ ಆತ್ಮವಿಶ್ವಾಸ ತುಂಬಬೇಕಾಗಿದ್ದ ಜಿಲ್ಲಾ ಆಸ್ಪತ್ರೆಯೇ ಜನರ ಆತಂಕಕ್ಕೆ ಕಾರಣವಾಗಿರುವುದು ವಿಪರ್ಯಾಸ. ಕಲಬುರಗಿ ಜಿಲ್ಲಾಸ್ಪತ್ರೆ ಎಂದರೆ ಸ್ಥಳೀಯರು ಬೆಚ್ಚಿ ಬೀಳುವಂತಾಗಿದೆ, ಯಾಕೆ ಗೊತ್ತಾ?
ಬೆಚ್ಚಿ ಬೀಳುವ ರೋಗಿಗಳು
ಕಲಬುರಗಿ ಜಿಲ್ಲಾ ಆಸ್ಪತ್ರೆ ಎಂದರೇನೆ ಸ್ಥಳೀಯರು ಬೆಚ್ಚಿ ಬೀಳುವಂತಾಗಿದೆ. ಅದಕ್ಕೆ ಕಾರಣವೂ ಇದೆ. ಜಿಲ್ಲಾಸ್ಪತ್ರೆಯ ಕೂಗಳತೆಯ ದೂರದಲ್ಲಿ ಕೋವಿಡ್-19 ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಕೋವಿಡ್ ಆಸ್ಪತ್ರೆಯಿಂದ ಸಮಸ್ಯೆ ಆಗಿಲ್ಲ. ಸ್ಥಳೀಯರು ಆತಂಕ ಪಡುತ್ತಿರುವುದು ಕೋವಿಡ್ ಆಸ್ಪತ್ರೆಯ ಕಾರಣದಿಂದಲೂ ಅಲ್ಲ. ಬದಲಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕಂಡು ಬರುವ ದೃಶ್ಯಗಳಿಂದ!
ವಿಪರ್ಯಾಸ ಎಂದರೆ ರಾಜ್ಯ ಸರ್ಕಾರ ಕಲಬುರಗಿ ಜಿಲ್ಲಾಸ್ಪತ್ರೆಯನ್ನು 'ಎ ಗ್ರೇಡ್' ಆಸ್ಪತ್ರೆ ಎಂದು ಗುರುತಿಸಿದೆ. ಚಿಕಿತ್ಸೆ, ಸ್ವಚ್ಛತೆ, ಸೌಲಭ್ಯಗಳನ್ನು ಅತ್ಯುತ್ತಮ ಮಟ್ಟದಲ್ಲಿ ಕೊಡುವುದನ್ನು ಆಧರಿಸಿ .
ಹಂದಿಗೂಡಾದ ಜಿಲ್ಲಾಸ್ಪತ್ರೆ
ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಸದ್ಯ ಮನುಷ್ಯರಿಗಿಂತ ಹಂದಿಗಳದ್ದೆ ಕಾರುಬಾರು. ಆಸ್ಪತ್ರೆ ಕಾರಿಡಾರ್ನಲ್ಲಿ ಮನುಷ್ಯರು, ವೈದ್ಯರು ಹಾಗೂ ದಾದಿಯರಿಗಿಂತ ಹೆಚ್ಚಾಗಿ ಹಂದಿಗಳೇ ಓಡಾಡುತ್ತಿವೆ. ಮೈಮೇಲೆ ಕೊಳಚೆಯನ್ನು ಹಚ್ಚಿಕೊಂಡು ಮರಿಗಳೊಂದಿಗೆ ಓಡಾಡುವ ಹಂದಿ ಹಿಂಡು ಜನರಲ್ಲಿ ಅಸಹ್ಯ ಹುಟ್ಟಿಸುತ್ತಿವೆ. ಜೊತೆಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳಲ್ಲಿ ಆತಂಕವನ್ನು ಹೆಚ್ಚಿಸಿವೆ. ಹಂದಿಗಳಿಂದ ಬರುವ ಖಾಯಿಲೆಗಳಿಗೂ ರೋಗಿಗಳು ತುತ್ತಾಗುವ ಸಾಧ್ಯತೆಯಿದೆ.
ಹಂದಿಗಳು ಓಡಾಡುವ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದ್ದು ಇಲ್ಲದಂತಾಗಿದೆ. ಕೋವಿಡ್ ಸಂಕಷ್ಟದಲ್ಲಿ ಖಾಸಗಿ ಆಸ್ಪತ್ರೆಗಳು ಬಹುತೇಕ ಬಂದ್ ಆಗಿವೆ. ಹೀಗಾಗಿ ಹಂದಿಗಳ ಓಡಾಟದ ಮಧ್ಯೆ ಕೈಯಲ್ಲಿ ಜೀವ ಹಿಡಿದುಕೊಂಡು ರೋಗಿಗಳು ಚಿಕಿತ್ಸೆ ಪಡೆಯುವಂತಾಗಿದೆ. ಹಂದಿಗಳ ಓಡಾಟದಿಂದ ಆಸ್ಪತ್ರೆ ಕಾರಿಡಾರ್ ಕೊಳಚೆ ಪ್ರದೇಶದಂತಾಗುತ್ತಿದೆ. ಒಳ ರೋಗಿಗಳ ಪಾಡು ಕೇಳುವವರೇ ಇಲ್ಲದಂತಾಗಿದೆ.
ಮಾದರಿ ಜಿಲ್ಲಾಧಿಕಾರಿ
ಕಳೆದ ಮಾರ್ಚ್ ತಿಂಗಳಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಮೊದಲ ಕೋವಿಡ್ ಸೋಂಕಿತ ಬಲಿಯಾದ ಬಳಿಕ ಕಟ್ಟುನಿಟ್ಟಿನ ಕ್ರಮಗಳನ್ನು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಕೈಗೊಂಡಿದ್ದರು. ಅವರು ಇಡೀ ದೇಶಕ್ಕೆ ಮಾದರಿಯಾಗುವಂತೆ ಲಾಕ್ಡೌನ್ ಸೇರಿದಂತೆ ಇತ್ಯಾದಿ ಕ್ರಮಗಳನ್ನು ಕೈಗೊಂಡಿದ್ದರು. ದೇಶದಲ್ಲಿ ಮೊದಲ ಲಾಕ್ಡೌನ್ ಜಾರಿಗೆ ತಂದಿದ್ದು ಕಲಬುರಗಿ ಜಿಲ್ಲಾಡಳಿತ. ಅದರ ಹಿಂದೆ ಇದ್ದಿದ್ದು ಇದೇ ಜಿಲ್ಲಾಧಿಕಾರಿ ಶರತ್ ಬಿ ಅವರ ಶ್ರಮ.
ಹೀಗಿದ್ದಾಗ್ಯೂ ಕಲಬುರಗಿ ಜಿಲ್ಲಾಸ್ಪತ್ರೆಯ ಈ ಹಂದಿಗಳ ಕಾರುಬಾರಿಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಾರೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಹಂದಿಗಳ ಕಾರುಬಾರಿಗೆ ಕಡಿವಾಣ ಹಾಕುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಡಬೇಕಾದ ಅಗತ್ಯವಿದೆ.
ಕೋವಿಡ್ ತುರ್ತು
ಬೆಂಗಳೂರು ಹಾಗೂ ಮಂಗಳೂರು ಬಿಟ್ಟರೆ ರಾಜ್ಯದಲ್ಲಿ ಅತಿಹೆಚ್ಚು ಕೋವಿಡ್ ಸೋಂಕಿತ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿವೆ. ಈವರೆಗೆ ಒಟ್ಟು 2,592 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 38 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ. ಜೊತೆಗೆ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಜನರ ನೆಮ್ಮದಿಯನ್ನೇ ಹಾಳು ಮಾಡಿದೆ.
ಕೋವಿಡ್-19 ತಂದಿರುವ ಆರೋಗ್ಯ ತುರ್ತು ಪರಿಸ್ಥಿತಿಯಿಂದ ಆಸ್ಪತ್ರೆಗಳಲ್ಲಿ ಬೆಡ್ಗಳು ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳ ಉನ್ನತಿಗೆ, ಸೌಲಭ್ಯಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕೂಡ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಆದರೆ ಆ ಹಣ ಎಲ್ಲಿ ಹೋಗುತ್ತಿದೆ ಎಂದು ಕಲಬುರಗಿಯ ಜನತೆ ಕೇಳುತ್ತಿದ್ದಾರೆ.