ಕಲಬುರಗಿ ಅಕ್ರಮ ದಂಧೆಯ ಮಾಸಿಕ, ಹಫ್ತಾ 'ರೇಟ್ ಕಾರ್ಡ್' ಬಹಿರಂಗ
ಕಲಬುರಗಿ, ನ 24: ಕಲಬುರಗಿಯಲ್ಲಿ ಅಕ್ರಮ ದಂಧೆ ನಡೆಯುತ್ತಿದ್ದು, ಗೃಹ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗೂ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಕಣ್ಮುಚ್ಚಿ ಕೂತಿದ್ದಾರೆ ಎಂದು ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಈ ಬಗ್ಗೆ ಅವರ ಫೇಸ್ ಬುಕ್ ಪೋಸ್ಟ್ ಹೀಗಿದೆ, "ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ, ಗಾಂಜಾ & ಮಾದಕ ವಸ್ತುಗಳು, ಜೂಜು, ಐಪಿಎಲ್ ಬೆಟ್ಟಿಂಗ್, ಅಕ್ರಮ ಮರಳು ಗಣಿಗಾರಿಕೆ, ಅಕ್ರಮ ಮದ್ಯ ಮಾರಾಟ, ಉದ್ಯಮಿಗಳಿಗೆ ಕಿರುಕುಳ, ನಿಷೇಧಿತ ಗುಟ್ಕಾ ದಂಧೆ, ನಾಗರಿಕರಿಂದ ಸುಲಿಗೆ ಇತ್ಯಾದಿ ಅಕ್ರಮ ಚಟುವಟಿಕೆಗಳು ಕಲಬುರಗಿಯಲ್ಲಿ ಬಹಳ ನಡೆಯುತ್ತಿದೆ".
ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ
ಮಾನ್ಯ ಗೃಹ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗೂ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳರವರೇ, ಇದು ಕಲಬುರಗಿ ಗೃಹ ಇಲಾಖೆ ಅಕ್ರಮ ವ್ಯವಹಾರಕ್ಕಾಗಿ ಸಿದ್ದಪಡಿಸಿರುವ ವಸೂಲಿ ರೇಟ್ ಕಾರ್ಡ್, ಕಲಬುರಗಿ ಯುವಕರ ಭವಿಷ್ಯ ಹಾಳಾದರೂ ಪರವಾಗಿಲ್ಲ, ನಾವು ಅಕ್ರಮ ಚಟುವಟಿಕೆಗಳನ್ನು ಬೆಂಬಲಿಸುತ್ತೇವೆ ಎಂದು ಅವರ ವರ್ತನೆಯಾಗಿದೆ.
10 ಲಕ್ಷಕ್ಕೂ ಅಧಿಕ ಗಣಿ ಅವಲಂಬಿತರ ಕುಟುಂಬಗಳ ಗೋಳು ಕೇಳುವವರಿಲ್ಲ!
ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿ ಅಕ್ರಮ ದಂಧೆಗೆ ₹1 ಲಕ್ಷದಿಂದ ₹12ಲಕ್ಷವರೆಗೆ ಪ್ರತಿ ತಿಂಗಳು ಹಫ್ತಾ ವಸೂಲಿ ನಡೆಯುತ್ತಿದೆ. ನಗರದ ಪ್ರತಿ ವೈನ್ ಶಾಪ್ನಿಂದ ಪ್ರತಿ ತಿಂಗಳು ₹1,350 ಇಂದ ₹120000 ವರೆಗೆ ಹಫ್ತಾ ವಸೂಲಿ ಮಾಡಲಾಗುತ್ತಿದೆ. ಮುಂದೆ ಓದಿ..
ಗುಟ್ಕಾ ವ್ಯವಹಾರ
ಗುಟ್ಕಾ ವ್ಯವಹಾರದಿಂದ ಪ್ರತಿ ತಿಂಗಳು ₹5,00,000, ಅಕ್ರಮ ಅಕ್ಕಿ ಮಾರಾಟ ಹಾಗೂ ಸಾಗಾಣೆಯಿಂದ ₹6,00,000, 80 ಟಿಪ್ಪರ್ ಗಳಲ್ಲಿ ಸಾಗಿಸುವ ಅಕ್ರಮ ಮರಳು ದಂಧೆಕೋರದಿಂದ ₹12,00,000, ಇಸ್ಪೀಟ್ ಅಡ್ಡೆಗಳ ಮಾಲೀಕರಿಂದ ₹5,00,000, ಅಕ್ರಮ ಜಿಲೆಟಿನ್ ಕಡ್ಡಿ ಸಂಗ್ರಹಿಸಿಟ್ಟಿರುವವರಿಂದ ₹1,00,000 ವಸೂಲಿ ಮಾಡಲಾಗುತ್ತಿದೆ.
ಕಲಬುರಗಿಗೆ ಆಂಧ್ರ ಪ್ರದೇಶದಿಂದ ಜನ ಜೂಜಾಡಲು ಬರುತ್ತಿದ್ದಾರೆ
ನಮ್ಮ ಕಲಬುರಗಿಗೆ ಆಂಧ್ರ ಪ್ರದೇಶದಿಂದ ಜನ ಜೂಜಾಡಲು ಬರುತ್ತಿದ್ದಾರೆ. ಖಣದಾಳ್, ಸೇಡಂ ಹಾಗೂ ಆಳಂದ ರಸ್ತೆಯಲ್ಲಿ ಮೂರು ಜೂಜು ಅಡ್ಡೆಗಳಿವೆ. ಇಲ್ಲಿ ಪ್ರತಿ ಅಡ್ಡೆಗೆ ದಿನವೊಂದಕ್ಕೆ ₹60 ಸಾವಿರ ಬಾಡಿಗೆ ಇದೆ. ಈ ಎಲ್ಲಾ ಹಣ ಕಲಬುರಗಿ ಯುವಕರ ಜೇಬಿಂದ ಕಸಿಯಲಾಗುತ್ತಿದೆ. ಐಪಿಎಲ್ ಬೆಟ್ಟಿಂಗ್ ಹಾಗು ಜೂಜಾಟವನ್ನು ಯಾರು ಪ್ರೋತ್ಸಾಹಿಸುತ್ತಿದ್ದಾರೆ?
ಬೆಳಗಾವಿ/ಬೆಂಗಳೂರು ಸಿಸಿಬಿ ಪೊಲೀಸ್
Recreational ಕ್ಲಬ್ಗಳಿಗೆ ಯಾರು ಮತ್ತು ಏಕೆ ಅನುಮತಿ ನೀಡುತ್ತಿದ್ದಾರೆ? ಜಿಲ್ಲೆಯಲ್ಲಿ ಹೊರಗಿನ ಪೊಲೀಸರು ಅಕ್ರಮ ದಂಧೆಗಳ ಮಟ್ಟ ಹಾಕುವ ಕೆಲಸ ಮಾಡಿದ್ದಾರೆ. ಗಾಂಜಾ ಜಪ್ತಿ ಮಾಡಿದ್ದು ಬೆಳಗಾವಿ/ಬೆಂಗಳೂರು ಸಿಸಿಬಿ ಪೊಲೀಸರು, ಐಪಿಎಲ್ ದಂಧೆ ಬಯಲಿಗೆಳೆದಿದ್ದು ಸೊಲ್ಲಾಪುರ ಪೊಲೀಸರು. ಇದು ಸ್ಥಳೀಯ ಪೊಲೀಸ್ ವ್ಯವಸ್ಥೆ ಈ ಎಲ್ಲಾ ಕೆಲಸ ಮಾಡದಂತೆ ಈ ದಂಧೆಗಳಿಂದ ಲಾಭ ಗಳಿಸುತ್ತಿರುವವರು ಅವರ ಕೈ ಕಟ್ಟಿಹಾಕಿರುವುದಕ್ಕೆ ಸಾಕ್ಷಿ.
ಕಲಬುರಗಿ ಅಕ್ರಮ ದಂಧೆಯ 'ಮಾಸಿಕ ರೇಟ್ ಕಾರ್ಡ್' ಬಹಿರಂಗಗೊಳಿಸಿದ ಖರ್ಗೆ
ಈ ಎಲ್ಲಾ ಅಕ್ರಮ ಚಟುವಟಿಕೆಗಳು ಈಗ ಜಿಲ್ಲೆಯಲ್ಲಿ ರಾಜಾರೋಷವಾಗಿ ತಲೆ ಎತ್ತಿವೆ. ಇದು ಕಲಬುರಗಿ ನಗರದ ಮಾಹಿತಿ ಮಾತ್ರ, ಈ ನಿಟ್ಟಿನಲ್ಲಿ ತಾವು ದಯವಿಟ್ಟು ಕಲಬುರಗಿಯಲ್ಲಿ ಸಭೆಯನ್ನು ಮಾಡಿ, ನಾನು ನಿಮಗೆ ಜಿಲ್ಲೆಯ ಮಾಹಿತಿಯನ್ನು ಮತ್ತು ಅದಕ್ಕೆ ಜವಾಬ್ದಾರರಾಗಿರುವ ವ್ಯಕ್ತಿಗಳ ಮಾಹಿತಿಯನ್ನು ನೀಡುತ್ತೇನೆ. ಜಿಲ್ಲೆಯನ್ನು ಕಾಯಬೇಕಾದವರೇ ಹಣದಾಸೆಗೆ ಜಿಲ್ಲೆಯನ್ನು ಬಲಿ ಕೊಡುತ್ತಿದ್ದಾರೆ. ಇದಕ್ಕೆ ಆಡಳಿತ ಪಕ್ಷದ ಕೃಪಾಕಟಾಕ್ಷವಿದ್ದು, ಅವರ ಮೂಗಿನ ನೇರದಲ್ಲೇ ಇದೆಲ್ಲವೂ ನಡೆಯುತ್ತಿದೆ. ಕಲಬುರಗಿ ಯುವಕರ ಭವಿಷ್ಯಕ್ಕೆ ಈ ಬಿಜೆಪಿ ಸರ್ಕಾರದಲ್ಲಿ ಬೆಲೆ ಇದೆಯೇ?