ಸಂವಿಧಾನ ಬದಲಾವಣೆ ಕೈ ಹಾಕಿದರೆ ದೇಶದಲ್ಲಿ ರಕ್ತ ಕ್ರಾಂತಿ: ಖರ್ಗೆ
ಕಲಬುರಗಿ, ಮೇ 11: ಬಿಜೆಪಿ ಏನಾದರೂ ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ದೇಶದಲ್ಲಿ ರಕ್ತಕ್ರಾಂತಿ ಆಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಮಲ್ಲಿಕಾರ್ಜುನ್ ಖರ್ಗೆ ಎಚ್ಚರಿಕೆ ನೀಡಿದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಚಿಂಚೋಳಿ ಉಪಚುನಾವಣೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅನಂತ್ಕುಮಾರ್ ಹೆಗಡೆ, ಆರ್ಎಸ್ಎಸ್ನ ಭಾಗವತ್, ಬೆಂಗಳೂರಿನ ಒಬ್ಬಾತ ಬಿಜೆಪಿಯವ, ಬನಸಗೌಡ ಪಾಟೀಲ್ ಯಾತ್ನಾಳ್ ಎಲ್ಲರೂ ಸಂವಿಧಾನ ಬದಲಾಯಿಸುವ ಮಾತನಾಡುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮೊನ್ನೆಯಷ್ಟೆ ಬಿಜೆಪಿ ಸಂಸದ ಬನಸಗೌಡ ಪಾಟೀಲ್ ಯಾತ್ನಾಳ್ ಅವರು 'ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ದೇಶದೆಲ್ಲೆಡೆ ಏಕರೂಪ ನಾಗರೀಕ ಸಂಹಿತೆ ಜಾರಿಮಾಡುವುದಾಗಿ ಹೇಳಿದ್ದರು' ಇದು ವಿವಾದ ಎಬ್ಬಿಸಿತ್ತು.
ಮಲ್ಲಿಕಾರ್ಜುನ್ ಖರ್ಗೆ ಅವರು ಸಂವಿಧಾನದ ಬದಲಾವಣೆ ವಿಚಾರವಾಗಿ ಅವಕಾಶ ಸಿಕ್ಕಾಗೆಲ್ಲಾ ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಬರುತ್ತಿದ್ದಾರೆ. ದಲಿತ ಮುಖಂಡರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಬಲ ಅಂಬೇಡ್ಕರ್ ಅನುಯಾಯಿಯಾಗಿದ್ದಾರೆ.
ಕೇಂದ್ರ ಬಿಜೆಪಿ ಮಂತ್ರಿ ಅನಂತ್ಕುಮಾರ್ ಹೆಗಡೆ ಅವರು, ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು ಎಂದು ಹೇಳಿದ್ದರು, ಇದು ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಭಾರಿ ವಿವಾದ ಎಬ್ಬಿಸಿತ್ತು.
ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದು, ತಮ್ಮ ಅಧೀನದ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿಯೇತೀರುವ ಒತ್ತಡದಲ್ಲಿದ್ದಾರೆ.