ಟಿಕೆಟ್ ಕೊಟ್ಟರೆ ವಾರಣಾಸಿಯಿಂದ ಸ್ಪರ್ಧೆ: ಮಲ್ಲಿಕಾರ್ಜುನ ಖರ್ಗೆ
ಟಿಕೆಟ್ ಕೊಟ್ಟರೆ ವಾರಣಾಸಿಯಿಂದ ಸ್ಪರ್ಧೆ: ಮಲ್ಲಿಕಾರ್ಜುನ ಖರ್ಗೆ
Recommended Video
ಕಲಬುರಗಿ, ಏ 21: ರಾಜ್ಯದ ಎರಡನೇ ಹಂತದ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರ ಮುಕ್ತಾಯಗೊಂಡಿದೆ. ಕಲಬುರಗಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ದ ಎಂದಿನಂತೆ ಹರಿಹಾಯ್ದಿದ್ದಾರೆ.
ಬಿಜೆಪಿಯವರು ನಮ್ಮನ್ನು ನೋಡಿ ಮತಹಾಕಬೇಡಿ, ಮೋದಿಯನ್ನು ನೋಡಿ ಮತಹಾಕಿ ಎಂದು ಹೇಳುತ್ತಾರೆ. ಏನು ಮೋದಿ ಇಲ್ಲಿಗೆ ಬಂದು ಅಭಿವೃದ್ದಿ ಕೆಲಸ ಮಾಡುತ್ತಾನಾ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಮೋದಿಗೆ ಮಲ್ಲಿಕಾರ್ಜುನ ಖರ್ಗೆಯೆಂದರೆ ಹೆದರಿಕೆ
ಕಲಬುರಗಿ ರಿಸರ್ವ್ ಸೀಟು, ಇಲ್ಲಿಗೆ ಬಂದು ಮೋದಿ ನಿಲ್ಲಕಾಗುತ್ತಾ, ಇನ್ನು ನೀವು (ಮತದಾರರು) ಮತ್ತು ಗುಲಾಂನಬಿ ಆಜಾದ್ ಅನುಮತಿ ಕೊಟ್ಟರೆ ವಾರಣಾಸಿಯಿಂದ ಸ್ಪರ್ಧಿಸಲು ಸಿದ್ದನಿದ್ದೇನೆ. ಯಾಕೆಂದರೆ, ಅವನಿಗೆ (ಮೋದಿ) ಇಲ್ಲಿಂದ ಸ್ಪರ್ಧಿಸಲು ಸಾಧ್ಯವಿಲ್ಲ, ಇದು ಮೀಸಲು ಕ್ಷೇತ್ರ ಎಂದು ಖರ್ಗೆ ಹೇಳಿದ್ದಾರೆ.
ಅಂಬೇಡ್ಕರ್ ಅವರು ಮಾಡಿರುವ ಕಾನೂನಿನ ಪ್ರಕಾರ, ಶೋಷಿತರು ಮತ್ತು ಬಡವರು ಮಾತ್ರ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯ. ಹಾಗಾಗಿ, ರಿಸರ್ವ್ ಕ್ಯಾಂಡಿಡೇಟ್ ಮಾತ್ರ ಇಲ್ಲಿಂದ ಸ್ಪರ್ಧಿಸಲು ಸಾಧ್ಯ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ದೇಶದಲ್ಲಿ ಕಳೆದ ಐದು ವರ್ಷದಲ್ಲಿ ಮೋದಿ ಏನು ಮಾಡಿದ್ದಾನೆ, ಬಿಜೆಪಿಯವರು ತಮ್ಮ ಸಾಧನೆ ಏನು ಎನ್ನುವುದರ ಲೆಕ್ಕವನ್ನು ಕೊಡಲಿ. ಅಭಿವೃದ್ದಿ ವಿಚಾರದಲ್ಲಿ ಮಾತನಾಡಲು ಏನೂ ಇಲ್ಲದೇ ಇರುವುದರಿಂದ, ರಾಷ್ತ್ರೀಯತೆ, ದೇಶ ಎನ್ನುವುದರ ಬಗ್ಗೆ ಬುರುಡೆ ಬಿಡುತ್ತಿದ್ದಾರೆ.
ದೇಶ, ಸೈನಿಕರು ಏನು ಮೋದಿಯ ಸ್ವತ್ತಲ್ಲಾ, ಅವರ ಮಾತಿಗೆ ಮರುಳಾಗಬೇಡಿ, ನನ್ನನ್ನು ಈ ಬಾರಿಯೂ ಹರಸಿ ಎಂದು ಮಲ್ಲಿಕಾರ್ಜುನ ಖರ್ಗೆ, ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ.