ಅಡುಗೆಗೆ ಎಣ್ಣೆ ಹೆಚ್ಚಾಯಿತೆಂದು ಮಡದಿಯನ್ನೇ ಕೊಂದ ಪತಿ
ಕಲಬುರಗಿ, ಡಿಸೆಂಬರ್ 02 : ಅಡುಗೆ ಸರಿಯಾಗಿ ಮಾಡಿಲ್ಲವೆಂದು ಕಟ್ಟಿಕೊಂಡ ಮಡದಿಯ ಮೇಲೆ ಕುದಿಯುವ ಎಣ್ಣೆ ಸುರಿದು ಸಾಯಿಸಿದ್ದಾನೆ ಕರುಣಾಹೀನ ಪತಿ.
ಪತ್ನಿ ಹತ್ಯೆಗೆ 15 ಲಕ್ಷಕ್ಕೆ ಸುಪಾರಿ ನೀಡಿದ್ದ ಪತಿರಾಯ ಪೊಲೀಸರ ಅತಿಥಿ
ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೇಲೋಗಿ ಗ್ರಾಮದಲ್ಲಿ ಪತ್ನಿ ಪ್ರಿಯಾಂಕಾ ಮಾಡಿದ ಅಡುಗೆಯಲ್ಲಿ ಎಣ್ಣೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಪತಿ ಭೀಮಾಶಂಕರ್ ಕುದಿಯುತ್ತಿದ್ದ ಅಡುಗೆಯಲ್ಲಿ ಎಣ್ಣೆಯನ್ನು ಪ್ರಿಯಾಂಕಾ ಮುಖಕ್ಕೆ ಎರಚಿದ್ದಾನೆ.
ಕುದಿಯುವ ಎಣ್ಣೆ ಬಿದ್ದು ತೀರ್ವ ಗಾಯಗೊಂಡಿದ್ದ ಪ್ರಿಯಾಂಕಾ ಅವರನ್ನು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನವೆಂಬರ್ 26ರಂದು ನಡೆದಿದ್ದು, ನಾಲ್ಕು ದಿನ ಚಿಕಿತ್ಸೆ ನೀಡಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಪ್ರಿಯಾಂಕ ಇಂದು (ಡಿಸೆಂಬರ್ 02) ಕೊನೆ ಉಸಿರೆಳೆದಿದ್ದಾಳೆ.
ಶೇಕಡಾ 70ಕ್ಕೂ ಹೆಚ್ಚು ಸುಟ್ಟಗಾಯಗಳಾಗಿದ್ದು, ಮುಖದ ಭಾಗ, ಕಣ್ಣಿನ ರೆಪ್ಪೆ, ಕಿವಿ ಒಳಗೆ ಎಲ್ಲ ಬಿಸಿ ಎಣ್ಣೆ ಹೋಗಿ ದೇಹದ ಒಳ ಅಂಗಾಂಗಗಳಿಗೆ ತೀರ್ವ ಹಾನಿಯಾಗಿದ್ದ ಕಾರಣ ನಿಧನ ಹೊಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭೀಮಾಶಂಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.