ಬೀದರ್, ಕಲಬುರಗಿಯಲ್ಲಿ ವರುಣನ ಅಬ್ಬರ: ತುಂಬಿ ಹರಿದ ಕಾಗಿಣಾ ನದಿ
ಕಲಬುರಗಿ, ಸೆಪ್ಟೆಂಬರ್ 18: ಕಲಬುರಗಿ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದ್ದು, ಕಾಗಿಣಾ ನದಿಯು ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಕಲಬುರಗಿ-ಸೇಡಂ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಕಲಬುರಗಿ ಜಿಲ್ಲೆಯ ಮಳಖೇಡ ಬಳಿಯ ಸೇತುವೆ ಮೇಲೆ ಸತತ 36 ಗಂಟೆಯಿಂದ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಮಳೆ ಆರ್ಭಟಕ್ಕೆ ಕಲಬುರಗಿ ಜಿಲ್ಲೆಯ ಆಳಂದ ಬೊಮ್ಮನಹಳ್ಳಿ ಗ್ರಾಮದ ಬಳಿ ಒಂದು ಕಾರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದೆ. ಕಾರಿನಲ್ಲಿದ್ದ ಇಬ್ಬರ ಪೈಕಿ ಓರ್ವನನ್ನು ಪೊಲೀಸರು ರಕ್ಷಿಸಿದ್ದಾರೆ.
ಕಲಬುರಗಿ, ಬೀದರ್ನಲ್ಲಿ ಧಾರಾಕಾರ ಮಳೆ; ವ್ಯಕ್ತಿ ಸಾವು
ಯಳಸಂಗಿ ಗ್ರಾಮದ ಇಬ್ಬರು ನಿವಾಸಿಗಳು ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ರಾಜು ಕುಂಬಾರ್ ನನ್ನು ನಿಂಬರ್ಗಾ ಠಾಣೆ ಪೊಲೀಸರು ರಕ್ಷಿಸಿದರು.
ಆದರೆ ಸಿದ್ದು ಅನ್ನುವ ವ್ಯಕ್ತಿ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಯಳಸಂಗಿ ಗ್ರಾಮಕ್ಕೆ ಕಾರಿನಲ್ಲಿ ಬರುವಾಗ ಕಾರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದೆ. ಸ್ಥಳದಲ್ಲಿ ನಿಂಬರ್ಗಾ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಅವಾಂತರದಿಂದಾಗಿ ವಾಡಿ ಪಟ್ಟಣದಲ್ಲಿ ವಾಹನ ಸವಾರರು ಪರದಾಟ ನಡೆಸಬೇಕಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ರಸ್ತೆಗಳು ಭಾರಿ ಮಳೆಯಿಂದಾಗಿ ಜಲಾವೃತಗಂಡಿವೆ.
ಬೀದರ್ ಜಿಲ್ಲೆಯಲ್ಲೂ ಭಾರಿ ಮಳೆ
ಕಳೆದೆರಡು ದಿನದಲ್ಲಿ ವರುಣನ ಆರ್ಭಟಕ್ಕೆ ಬೀದರ್ ಜಿಲ್ಲೆಯಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಭಾಲ್ಕಿ ತಾಲೂಕಿನ ಸಾಯಿಗಾಂವ್ ಸೇತುವೆ ದಾಟುವಾಗ ಬೈಕ್ ಸವಾರ ಮನೋಜ್ ಗುಂಡಾಜೀ(34) ಮೃತಪಟ್ಟಿದ್ದಾನೆ.
ಬೀದರ್ ತಾಲೂಕಿನ ಜನವಾಡ ಗ್ರಾಮದ ಸರ್ಕಾರಿ ಆಸ್ಪತ್ರೆ ಪಕ್ಕದ ಮನೆ ಗೋಡೆ ಕುಸಿದು ಗುರಮ್ಮಾ(72)ವಯೋವೃದ್ಧೆ ಸಾವನ್ನಪ್ಪಿದ್ದು, ಇನ್ನು ಹಾಲಹಳ್ಳಿ ಬಳಿ ಅರ್ಜುನ (70) ಎಂಬಾತ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬೀದರ್ ಜಿಲ್ಲೆಯಲ್ಲಿ ವರ್ಷಧಾರೆಗೆ ಕಳೆದ ಎರಡು ದಿನದಲ್ಲಿ ಮೂವರು ಬಲಿಯಾಗಿದ್ದು, ಜಿಲ್ಲಾಡಳಿತವು ಮೃತರಿಗೆ ತಲಾ ಐದು ಲಕ್ಷ ರುಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.
ಬೀದರ್ ಜಿಲ್ಲೆಯಲ್ಲಿ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಿಗೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಭೇಟಿ ನೀಡಿ ಹಾನಿಯ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ.