ಅವನ್ಯಾರೀ ಎಚ್ ವಿಶ್ವನಾಥ್, ಅವ್ನಿಗೆ ಏನ್ ಗೊತ್ತು, ಹೊಟ್ಟಿಕಿಚ್ಚು ಆತನಿಗೆ: ಸಿದ್ದರಾಮಯ್ಯ
ಅವನ್ಯಾರೀ ವಿಶ್ವನಾಥ್, ಅವ್ನಿಗೆ ಏನ್ ಗೊತ್ತು, ಹೊಟ್ಟಿಕಿಚ್ಚು ಆತನಿಗೆ
Recommended Video
ಕಲಬುರಗಿ, ಮೇ 12: ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳ ನಡುವಿನ ಬಹಿರಂಗ ಟೀಕೆ ಟಿಪ್ಪಣಿ ಮುಂದುವರಿದಿದ್ದು, ಸಮನ್ವಯ ಸಮಿತಿಯ ಅಧ್ಯಕ್ಷರೇ, ಜೆಡಿಎಸ್ ರಾಜ್ಯಾಧ್ಯಕ್ಷರ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಅಸೆಂಬ್ಲಿ ಚುನಾವಣೆಗೆ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ, ಅವನ್ಯಾರೀ ಎಚ್ ವಿಶ್ವನಾಥ್, ಅವ್ನಿಗೆ ಏನ್ ಗೊತ್ತು, ಹೊಟ್ಟಿಕಿಚ್ಚು ಆತನಿಗೆ ಎಂದು ಕಿಡಿಕಾರಿದ್ದಾರೆ. ಇತ್ತೀಚೆಗೆ ವಿಶ್ವನಾಥ್, ಸಿದ್ದರಾಮಯ್ಯ ಜನಪ್ರಿಯ ಮುಖ್ಯಮಂತ್ರಿ ಆಗಿರಲಿಲ್ಲ ಎನ್ನುವ ಹೇಳಿಕೆಗೆ ಸಿದ್ದರಾಮಯ್ಯ, ಈ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಮೇ 23ರ ದಿನ ರಾಜ್ಯ ರಾಜಕಾರಣಕ್ಕೆ ಸಂಬಂಧವಿಲ್ಲ
ಮಾಧ್ಯಮದವರ ಪ್ರಶ್ನೆಗೆ ಮೊದಲು ಸಮನ್ವಯ ಸಮಿತಿಯಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಅಂದ ಸಿದ್ದರಾಮಯ್ಯ ನಂತರ, ನನ್ನನ್ನು ಜನಪ್ರಿಯ ಮುಖ್ಯಮಂತ್ರಿ ಎಂದು ನಾನು ಎಲ್ಲೂ ಹೇಳಿಕೊಂಡು ಓಡಾಡಿಕೊಂಡಿದ್ದಲ್ಲ, ಅದು ಜನ ನನಗೆ ಕೊಟ್ಟಿದ್ದು, ಇದನ್ನು ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಜನಪ್ರಿಯ ಮುಖ್ಯಮಂತ್ರಿಯಾಗಿದ್ದರೂ 75 ಸೀಟು ಮಾತ್ರ ಯಾಕೆ ಬಂತು ಎನ್ನುವ ವಿಶ್ವನಾಥ್ ಹೇಳಿಕೆಗೆ, ಅದಕ್ಕೆ ಬಿಜೆಪಿಯ ಅಪಪ್ರಚಾರವೇ ಕಾರಣ. ಎಸ್ ಎಂ ಕೃಷ್ಣ ಅವರ ಅವಧಿಯಲ್ಲಿ, ಅವರಿಗೂ ಇದೇ ರೀತಿಯಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇತ್ತೀಚೆಗೆ, ನಾನೇನು ಜೆಡಿಎಸ್ ಬಿಟ್ಟಿಲ್ಲ. ಅಹಿಂದ ಸಮಾವೇಶ ಮಾಡಿದ್ದಕ್ಕಾಗಿ ದೇವೇಗೌಡ್ರೇ ನನ್ನನ್ನು ಪಕ್ಷದಿಂದ ಹೊರಹಾಕಿದರು ಎಂದು ಸಿದ್ದರಾಮಯ್ಯ ಬಹಿರಂಗವಾಗಿಯೇ ಹೇಳಿದ್ದರು.
ಮೇ 23ರ ದಿನ ರಾಷ್ಟ್ರ ರಾಜಕಾರಣದ ಭವಿಷ್ಯ ನಿರ್ಧರವಾಗಲಿದೆಯೇ ಹೊರತು ರಾಜ್ಯಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯ ಮತ್ತೆ ಸ್ಪಷ್ಟಪಡಿಸಿದ್ದಾರೆ.