ಕನ್ಹಯ್ಯ ಕುಮಾರ್ ಭಾಷಣಕ್ಕೆ ನೀಡಿದ್ದ ಅನುಮತಿ ರದ್ದು ಮಾಡಿದ ಗುಲ್ಬರ್ಗ ವಿವಿ
ಕಲಬುರ್ಗಿ, ಅಕ್ಟೋಬರ್ 15: ಜೆಎನ್ಯು ವಿದ್ಯಾರ್ಥಿ ಸಂಘಟನೆ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಭಾಷಣಕ್ಕೆ ನೀಡಲಾಗಿದ್ದ ಅನುಮತಿಯನ್ನು ಗುಲ್ಬರ್ಗ ವಿಶ್ವವಿದ್ಯಾಲಯವು ರದ್ದು ಮಾಡಿದೆ.
ಗುಲ್ಬರ್ಗ ವಿವಿಯಲ್ಲಿ ಇಂದು ಕನ್ಹಯ್ಯ ಕುಮಾರ್ ಅವರ ಭಾಷಣ ಆಯೋಜಿತವಾಗಿತ್ತು. ಈ ಹಿಂದೆ ಪರ-ವಿರೋಧ ಅಭಿಪ್ರಾಯಗಳು ಬಂದ ಕಾರಣ ಸಿಂಡಿಕೇಟ್ನಲ್ಲಿ ಚರ್ಚಿಸಿ ಕನ್ಹಯ್ಯ ಕುಮಾರ್ ಭಾಷಣಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಈಗ ಏಕಾ-ಏಕಿ ಅನುಮತಿ ನಿರಾಕರಿಸಲಾಗಿದೆ.
ರಾಜ್ಯಪಾಲರ ಮೂಲಕ ಗುಲ್ಬರ್ಗ ವಿವಿ ಕುಲಪತಿ ಅವರಿಗೆ ಮೌಖಿಕ ಆದೇಶ ಬಂದ ಕಾರಣ ಕನ್ಹಯ್ಯ ಭಾಷಣಕ್ಕೆ ನೀಡಿದ್ದ ಅನುಮತಿಯನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಕನ್ಹಯ್ಯ ಕುಮಾರ್ ಭಾಷಣಕ್ಕೆ ಅನುಮತಿ ನೀಡುವಾಗಲೂ ಹಲವು ಷರತ್ತುಗಳನ್ನು ವಿಧಿಸಿ ಒಪ್ಪಿಗೆ ನೀಡಲಾಗಿತ್ತು. ಆದರೆ ಇದೀಗ ಏಕಾ-ಏಕಿ ಭಾಷಣಕ್ಕೆ ನೀಡಲಾಗಿದ್ದ ಅನುಮತಿಯನ್ನೇ ರದ್ದು ಮಾಡಲಾಗಿದೆ.
ಕನ್ಹಯ್ಯ ಕುಮಾರ್ ಇಂದು 'ಅಂಬೇಡ್ಕರ್ ಕಂಡ ಆಧುನಿಕ ಭಾರತದಲ್ಲಿ ಯುವಕರ ಪಾತ್ರ' ವಿಷಯದ ಮೇಲೆ ಭಾಷಣ ಮಾಡಬೇಕಿತ್ತು. ಆದರೆ ಒಬ್ಬ ಪ್ರಭಾವಿ ಸಂಸದ ಹಾಗೂ ಶ್ರೀರಾಮ ಸೇನೆ ಒತ್ತಾಯದ ಕಾರಣದಿಂದಾಗಿ ಕನ್ಹಯ್ಯ ಕುಮಾರ್ ಭಾಷಣ ರದ್ದಾಗಿದೆ ಎನ್ನಲಾಗಿದೆ.