'ಜೈ ಮಹಾರಾಷ್ಟ್ರ' ಘೋಷಣೆ: ವಿವಾದ ಸೃಷ್ಟಿಸಿದ ಬಿಜೆಪಿ ಶಾಸಕನ ಪತ್ನಿ
ಕಲಬುರಗಿ, ಫೆಬ್ರವರಿ 20: ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ ಅವರ ಪತ್ನಿ ಜಯಶ್ರೀ ವಿವಾದ ಸೃಷ್ಟಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅವರು 'ಜೈ ಮಹಾರಾಷ್ಟ್ರ' ಎಂದು ಘೋಷಣೆ ಕೂಗಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕಲಬುರಗಿಯ ಶಹಬಾದ್ನಲ್ಲಿ ಜಯಶ್ರೀ ಅವರು ತಮ್ಮ ಭಾಷಣದ ಕೊನೆಯಲ್ಲಿ 'ಜೈ ಮಹಾರಾಷ್ಟ್ರ' ಎಂದು ಘೋಷಣೆ ಕೂಗಿದ್ದಾರೆ. ಕನ್ನಡಿಗರಾಗಿ ಹಾಗೂ ಚುನಾಯಿತ ಜನಪ್ರತಿನಿಧಿಯ ಪತ್ನಿಯಾಗಿ ಮಹಾರಾಷ್ಟ್ರ ಪರ ಘೋಷಣೆ ಕೂಗಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.
ಗಡಿ ಖ್ಯಾತೆ ತೆಗೆದ ಮಹಾರಾಷ್ಟ್ರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ
ಶಹಬಾದ್ ನಗರದ ಭಾರತ್ ಚೌಕ್ನಲ್ಲಿ ಬುಧವಾರ ಸಂಜೆ ಮರಾಠ ಯುವಕ ಮಂಡಳಿಯಿಂದ ಛತ್ರಪತಿ ಶಿವಾಜಿ ಮಹಾರಾಜ ಜಯಂತ್ಯುತ್ಸವ ಆಯೋಜಿಸಲಾಗಿತ್ತು. ಇದರಲ್ಲಿ ಶಾಸಕ ಬಸವರಾಜ್ ಮತ್ತಿಮೂಡ ಮತ್ತು ಅವರ ಪತ್ನಿ ಜಯಶ್ರೀ ಭಾಗವಹಿಸಿದ್ದರು.
ಜೈ ಮಹಾರಾಷ್ಟ್ರ, ಜೈ ಶಿವಾಜಿ ಘೋಷಣೆ
ತಮ್ಮ ಭಾಷಣದುದ್ದಕ್ಕೂ ಮರಾಠಿಯಲ್ಲಿಯೇ ಮಾತನಾಡಿದ್ದ ಜಯಶ್ರೀ, ಕೊನೆಯಲ್ಲಿ ಜೈ ಹಿಂದ್, ಜೈ ಮಹಾರಾಷ್ಟ್ರ, ಜೈ ಶಿವಾಜಿ ಎಂದು ಘೋಷಣೆ ಕೂಗಿದ್ದರು. ಇದು ವಿವಾದ ಸೃಷ್ಟಿಸುತ್ತಿದ್ದಂತೆಯೇ, ಮಾತಿನ ಭರದಲ್ಲಿ ಮಹಾರಾಷ್ಟ್ರ ಪರ ಘೋಷಣೆ ಕೂಗಿರುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.
ಕ್ಷಮೆ ಕೋರುತ್ತೇನೆ
ತಾವು ಮೂಲತಃ ಮಹಾರಾಷ್ಟ್ರದವಳಾಗಿದ್ದು, ಮರಾಠಿ ಸಮುದಾಯದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮರಾಠಿಯಲ್ಲಿ ಮಾತನಾಡುವಾಗ ಬಾಯ್ತಪ್ಪಿನಿಂದ ಜೈ ಮಹಾರಾಷ್ಟ್ರ ಎಂದು ಹೇಳಿದ್ದೇನೆ. ಇದಕ್ಕಾಗಿ ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಬಾಯ್ತಪ್ಪಿನಿಂದ ಹೇಳಿಕೆ
ಕಾರ್ಯಕ್ರಮದಲ್ಲಿ ಮರಾಠಿ ಭಾಷಿಕರು ಹೆಚ್ಚಾಗಿದ್ದರು. ಅವರನ್ನು ಉದ್ದೇಶಿಸಿ ಮರಾಠಿಯಲ್ಲಿಯೇ ಮಾತನಾಡಿದ್ದೆ. ಭಾವನಾತ್ಮಕವಾಗಿ ಮಾತನಾಡುವಾಗ ಬಾಯ್ತಪ್ಪಿನಿಂದ ಆ ಘೋಷಣೆ ಮಾಡಿದ್ದೇನೆಯೇ ಹೊರತು, ಬೇರೆ ಯಾವ ಉದ್ದೇಶವೂ ಇರಲಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಬೇರೆ ಕಡೆ ಕನ್ನಡದಲ್ಲಿಯೇ ಮಾತನಾಡುವುದು
ಕಳೆದ ಬಾರಿ ಮರಾಠ ಸಮಾಜದ ಕಾರ್ಯಕ್ರಮದಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದೆ. ಅದಕ್ಕೆ, ನಾವೆಲ್ಲರೂ ಮರಾಠಿಗರಿದ್ದೇವೆ, ದಯವಿಟ್ಟು ಮರಾಠಿಯಲ್ಲಿಯೇ ಮಾತನಾಡಿ ಎಂದು ಮನವಿ ಮಾಡಿದ್ದರು. ಅದಕ್ಕಾಗಿ ಮರಾಠಿಯಲ್ಲಿಯೇ ಮಾತನಾಡಿದ್ದೆ. ನಾನು ಹುಟ್ಟಿ ಬೆಳೆದಿದ್ದು ಮಹಾರಾಷ್ಟ್ರದಲ್ಲಿ. ಮಕ್ಕಳು, ಕುಟುಂಬದವರೊಂದಿಗೆ ಮರಾಠಿಯಲ್ಲಿಯೇ ಮಾತನಾಡುತ್ತೇನೆ. ಆದರೆ ಬಹಳಷ್ಟು ಕಾರ್ಯಕ್ರಮಗಳಲ್ಲಿ ಕನ್ನಡದಲ್ಲಿಯೇ ಮಾತನಾಡುತ್ತೇನೆ. ಹೀಗಾಗಿ ಮಾತಿನ ಭರದಲ್ಲಿ ಜೈ ಮಹಾರಾಷ್ಟ್ರ ಎಂದು ಹೇಳಿದ್ದೇನೆ. ಅದು ಬಾಯ್ತಪ್ಪಿ ಬಂದಿದ್ದು ಅರಿವಾಗಿ ಕೂಡಲೇ ಕ್ಷಮೆಯನ್ನೂ ಕೇಳಿದ್ದೇನೆ. ಇದು ಉದ್ದೇಶಪೂರ್ವಕ ಅಲ್ಲ ಎಂದು ತಿಳಿಸಿದ್ದಾರೆ.