ಚಿತ್ರಗಳು : ಕಲಬುರಗಿಯಲ್ಲಿ ದೇವರಾಜ ಅರಸು ರಥಯಾತ್ರೆ
ಕಲಬುರಗಿ, ಆಗಸ್ಟ್ 10 : ಡಿ.ದೇವರಾಜ ಅರಸು ಶತಮಾನೋತ್ಸವದ ಅಂಗವಾಗಿ ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರು ಜಾರಿಗೆ ತಂದ ಯೋಜನೆಗಳ ಜಾಗೃತಿ ಮೂಡಿಸಲು ಆರಂಭವಾದ ರಥಯಾತ್ರೆಗೆ ಕಲಬುರಗಿಯಲ್ಲಿ ಅದ್ದೂರಿ ಸ್ವಾಗತ ಸಿಕ್ಕಿತು.
ಮಂಗಳವಾರ ಕಲಬುರಗಿಗೆ ಆಗಮಿಸಿದ ಸ್ತಬ್ಧಚಿತ್ರಗಳ ರಥಯಾತ್ರೆಗೆ ಜಗತ್ ವೃತ್ತದಲ್ಲಿ ಕಲಾವಿದರ ನೃತ್ಯ, ಹಲಗೆ, ಡೊಳ್ಳು ಕುಣಿತದೊಂದಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ.ದೇವರಾಜ ಅರಸು ಶತಮಾನೋತ್ಸವ ಸಮಿತಿ ರಾಜ್ಯಾದ್ಯಂತ ರಥಯಾತ್ರೆ ಹಮ್ಮಿಕೊಂಡಿದೆ.[ಎಲ್ಲಾ ಜಿಲ್ಲೆಗಳಲ್ಲಿ ದೇವರಾಜ ಅರಸು ರಥಯಾತ್ರೆ]
ಕಲಬುರಗಿ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸ್ಗರ್ ಚುಲಬುಲ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೆಹಬೂಬ್ ಪಾಶಾ ಕಾರಟಗಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ರಥವನ್ನು ಸ್ವಾಗತಿಸಿದರು.[ಅರಸು ಹುಟ್ಟೂರನ್ನು ದತ್ತು ಪಡೆದ ಸರ್ಕಾರ]
ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಶತಮಾನೋತ್ಸವದ ಸಮಾರೋಪ ಸಮಾರಂಭ ಆಗಸ್ಟ್ 20ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಅದಕ್ಕೂ ಮೊದಲು ನಾಲ್ಕು ವಿಶೇಷ ರಥಗಳು ಏಕಕಾಲಕ್ಕೆ ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಬೆಂಗಳೂರಿಗೆ ವಾಪಸ್ ಆಗಲಿವೆ.
ರಥಯಾತ್ರೆಗಾಗಿ ವಿಶೇಷ ವಾಹನ
ರಥಯಾತ್ರೆಗಾಗಿ ವಿಶೇಷ ವಾಹನ ಸಿದ್ಧಪಡಿಸಲಾಗಿದ್ದು, ಇದರಲ್ಲಿ ಅರಸು ಅವರು ಜಾರಿಗೆ ತಂದಿರುವ ಹತ್ತು-ಹಲವು ಯೋಜನೆ ಮತ್ತು ಸಾಧನೆಗಳನ್ನು ಬಿಂಬಿಸುವ ಸ್ಲೈಡ್ ಸ್ಕ್ರೀನ್ ಅಳವಡಿಸಲಾಗಿದೆ.
ಆಗಸ್ಟ್ 17ರಂದು ಬೆಂಗಳೂರು ತಲುಪಲಿದೆ
ಆಗಸ್ಟ್ 8ರ ಸೋಮವಾರ ಬೀದರ್ ಜಿಲ್ಲೆಯಿಂದ ಪ್ರಾರಂಭವಾದ ಈ ರಥಯಾತ್ರೆಯು ಕಲಬುರಗಿ ವಿಭಾಗದ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಯ ಮಾರ್ಗವಾಗಿ ಆಗಸ್ಟ್ 17 ರಂದು ಬೆಂಗಳೂರಿಗೆ ತಲುಪಲಿದೆ.
ಕಣ್ಮನ ಸೆಳೆದ ರಥಯಾತ್ರೆ
ಡಿ. ದೇವರಾಜ ಅರಸು ಅವರ ಯೋಜನೆಗಳು ಮತ್ತು ಸರ್ಕಾರದ ಸಾಧನೆಗಳ ಕುರಿತ ಜಾಗೃತಿ ಮೂಡಿಸುವ ರಥಯಾತ್ರೆ ಕಲಬುರಗಿ ಜನರ ಕಣ್ಮನಗಳನ್ನು ಸೂರೆಗೊಂಡಿತು. ರಥಯಾತ್ರೆ ಆಗಮಿಸುತ್ತಿದಂತೆ ಸಣ್ಣನೆಯ ಮಳೆ ಸಿಂಚನ ಮೆರವಣಿಗೆಯಲ್ಲಿ ಪಾಲ್ಗೊಂಡವರ ಉಲ್ಲಾಸ ಹೆಚ್ಚಿಸಿತು.
ಯಾದಗಿರಿಗೆ ತೆರಳಲಿದೆ
ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಮಾರ್ಗವಾಗಿ ರಥಯಾತ್ರೆ ಡಾ.ಎಸ್.ಎಂ.ಪಂಡಿತ ರಂಗಮಂದಿರಕ್ಕೆ ಆಗಮಿಸಿತು. ನಂತರ ಜನಮಿತ್ರ ಅರಸು ನಾಟಕ ಪ್ರದರ್ಶಿಸಲಾಯಿತು. ಈ ರಥಯಾತ್ರೆಯು ಆಗಸ್ಟ್ 10ರಂದು ಜೇವರ್ಗಿ ಮಾರ್ಗವಾಗಿ ಯಾದಗಿರಿ ಜಿಲ್ಲೆಗೆ ತೆರಳಲಿದೆ.
ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ
ಕರ್ನಾಟಕ ಸರ್ಕಾರ ಈ ವರ್ಷ ದೇವರಾಜ ಅರಸು ಜನ್ಮಶತಮಾನೋತ್ಸವವನ್ನು ಆಚರಣೆ ಮಾಡುತ್ತಿದೆ. ಆಗಸ್ಟ್ 20ರಂದು ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಲವಾರು ಯೋಜನೆಗಳನ್ನು ಘೋಷಣೆ ಮಾಡಲಾಗುತ್ತದೆ. 2015ರ ಆಗಸ್ಟ್ 20ರಂದು ಜನ್ಮಶತಮಾನೋತ್ಸವ ಆಚರಣೆಗೆ ಚಾಲನೆ ನೀಡಲಾಗಿತ್ತು.