ಕಲಬುರಗಿ ಬಾಲಕಿ ಸಾವು ಪ್ರಕರಣ: ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಪ್ರತಿಭಟನೆ
ಕಲಬುರಗಿ, ಜನೆವರಿ 4: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮೂರು ವರ್ಷದ ಬಾಲಕಿ ಸಾವು ಪ್ರಕರಣ ಘಟನೆಗೆ ಜೇವರ್ಗಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರ್ಗಿಯ ಜಿಮ್ಸ್ ಆಸ್ಪತ್ರೆ ಎದುರು ಬಾಲಕಿಯ ಶವ ಇಟ್ಟು ಪ್ರತಿಭಟನೆ ನಡೆಸಲಾಯಿತು.
ಕಲಬುರಗಿ ಜಿಲ್ಲಾ ಎಸ್.ಪಿ ಕಚೇರಿಗೆ ಶವ ಒಯ್ಯಲು ಯತ್ನಿಸಿದಾಗ ಪೊಲೀಸರ ಅಡ್ಡಿಪಡಿಸಿದರು. ಪೊಲೀಸ್ ಭವನಕ್ಕೆ ತೆರಳದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದರು. ಹೀಗಾಗಿ ಜಿಮ್ಸ್ ಆಸ್ಪತ್ರೆ ಎದುರೇ ರಸ್ತೆ ಮೇಲೆ ಶವ ಇಟ್ಟು ಪ್ರತಿಭಟನೆ ನಡೆಸಿದರು.
ತಾಯಿಯೊಂದಿಗೆ ಜೈಲು ಸೇರಿದ್ದ 3 ವರ್ಷದ ಬಾಲಕಿ ಸಾವು: ಭಾರೀ ಪ್ರತಿಭಟನೆ
ಬಾಲಕಿಯನ್ನು ಜೈಲಿಗೆ ಹಾಕಿದ ಜೇವರ್ಗಿ ಇನ್ಸ್ ಪೆಕ್ಟರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ರಾಜಕೀಯ ಕುಮ್ಮಕ್ಕಿನಿಂದ ಮಹಿಳೆಯರು ಮತ್ತು ಮಕ್ಕಳನ್ನು ಬಂಧಿಸಿದ್ದಾರೆ. ಈ ವೇಳೆ ಠಾಣೆಯಲ್ಲಿ ಮಹಿಳೆಯನ್ನು ಥಳಿಸುವ ವೇಳೆ ಮಗುವಿಗೂ ಪೆಟ್ಟಾಗಿದ್ದು, ಪೊಲೀಸರು ಹೊಡೆದ ಪೆಟ್ಟಿನಿಂದಾಗಿಯೇ ಜೈಲಿಗೆ ಹೋದ ನಂತರ ಮಗು ಸಾವನ್ನಪ್ಪಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕೂಡಲೇ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಾಲಕಿಯ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು. ಗ್ರಾ.ಪಂ ಚುನಾವಣೆ ನಂತರ ಜೇವರ್ಗಿ ತಾಲ್ಲೂಕಿನ ಜೈನಾಪುರದಲ್ಲಿ ಹಲ್ಲೆ ಘಟನೆ ನಡೆದಿತ್ತು.
ಗೆದ್ದ ಅಭ್ಯರ್ಥಿ ಕಡೆಯವರಿಂದ ಸೋತ ಅಭ್ಯರ್ಥಿ ಬೆಂಬಲಿಗರ ಮೇಲೆ ಹಲ್ಲೆಯಾಗಿತ್ತು. ಹಲ್ಲೆ ಮಾಡಿದವರೇ ಮೊದಲು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರನ್ನು ಆಧರಿಸಿ ಸಂತೋಷ್ ಸೇರಿ ಆತನ ಕುಟುಂಬದ ಏಳು ಜನರನ್ನು ಬಂಧಿಸಿದ್ದ ಪೊಲೀಸರು, ಮಕ್ಕಳನ್ನೂ ವಶಕ್ಕೆ ಪಡೆದಿದ್ದರು.
ಬಂಧಿತರನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿಕೊಟ್ಟ ನಂತರ ಭಾರತಿ ಎಂಬ ಮೂರು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಜೇವರ್ಗಿ ಜನರ ಪಟ್ಟು ಹಿಡಿದಿದ್ದರು. ಕಲಬುರಗಿ ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಮತ್ತು ಕಾಂಗ್ರೆಸ್ ಶಾಸಕರ ಮಧ್ಯೆ ಎರಡನೇ ಸುತ್ತಿನ ಮಾತುಕತೆ ವಿಫಲಗೊಂಡಿತು.
ಈ ವೇಳೆ ಜೇವರ್ಗಿ ಶಾಸಕ ಡಾ ಅಜಯ್ಸಿಂಗ್ ಅವರು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ""ನೀವು ಪ್ರತಿಭಟನೆ ಕೊನೆಗೊಳಿಸಿಸಿ, ನನಗೆ 24 ಗಂಟೆಗಳ ಅವಕಾಶ ಕೊಡಿ ನಾನು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂಬ ಡಿಸಿ ಮನವಿಗೆ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್ ಕೆಂಡಮಂಡಲವಾದರು.
ಈ ಕ್ಷಣವೇ ಜೇವರ್ಗಿ ಪಿಎಸ್ಐ ಸಸ್ಪೆಂಡ್ ಮಾಡಿ ಬಂಧಿಸಬೇಕು. ಪಿಎಸ್ಐ ಮೇಲೆ ಕ್ರಮ ತೆಗೆದುಕೊಳ್ಳೊವರೆಗೂ ಪ್ರತಿಭಟನೆ ಸ್ಥಗಿತಗೊಳಿಸದಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಅವರಿಂದ ಆದೇಶ ಬಂದಿದೆ ಎಂದು ಶಾಸಕ ಅಜಯ್ಸಿಂಗ್ ತಿಳಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತಿಗೆ ಮಣಿದು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವ ಬಸವರಾಜ ಬೊಮ್ಮಾಯಿ ನೀಡಿದರು. ನಂತರ ಸಂಬಂಧಿಕರು ತಡರಾತ್ರಿ ಬಾಲಕಿಯ ಅಂತ್ಯಸಂಸ್ಕಾರವನ್ನು ಗ್ರಾಮದಲ್ಲಿ ನೆರವೇರಿಸಿದರು.