ಬಿಜೆಪಿ-ಬಿಎಸ್ವೈ ದಲಿತ-ವಿರೋಧಿ ಎಂದು ಪಕ್ಷ ತೊರೆದ ಮಾಜಿ ಸಚಿವ
ಕಲಬುರಗಿ, ಮಾರ್ಚ್ 26: ಭಾರತೀಯ ಜನತಾ ಪಕ್ಷವು ಸಂವಿಧಾನ ವಿರೋಧಿ ಹಾಗೂ ದಲಿತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ದಲಿತಕೇರಿಯಲ್ಲಿ ಊಟ ಮಾಡಿದ್ದು ಬಿಟ್ಟರೆ, ದಲಿತರ ಕಡೆ ತಿರುಗಿ ನೋಡಿಲ್ಲ ಎಂದು ಆರೋಪಿಸಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಮಾಜಿ ಸಚಿವ ಬಾಬುರಾವ್ ಚವಾಣ್ ಅವರು ರಾಜೀನಾಮೆ ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಓಟಿಗಾಗಿ ಮಾತ್ರ ದಲಿತರ ಬಾಯಿಗೆ ತುಪ್ಪ ಸವರುತ್ತಿದೆ. ಅಧಿಕಾರಕ್ಕೆ ಬಂದ ನಂತರ ಶೋಷಿತ ಸಮುದಾಯವನ್ನು ರಕ್ಷಿಸುತ್ತಿರುವ ಸಂವಿಧಾನವನ್ನೇ ಸುಟ್ಟು ಹಾಕುವವರಿಗೆ ಪಕ್ಷವೂ ಬೆಂಬಲ ನೀಡುತ್ತಾ, ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತನಾಗಿರುವುದಕ್ಕೆ 3 ಬಾರಿ ಸಿಎಂ ಪಟ್ಟ ಕೈತಪ್ಪಿತು: ಪರಮೇಶ್ವರ್
ದಲಿತ ಕೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಊಟ ಮಾಡಿದ್ದು ಬಿಟ್ಟರೆ ಸಮುದಾಯವನ್ನು ಯಾವೊಂದು ಕೆಲಸಕ್ಕೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಮಾಜವನ್ನು ತುಳಿದಿದ್ದಾರೆ. ವೋಟಿಗೋಸ್ಕರ ಮಾತ್ರ ದಲಿತ ಸಮುದಾಯ ಬೇಕು. ಆದರೆ, ಪಕ್ಷದಲ್ಲಿ ದಲಿತರಿಗೆ ಸೂಕ್ತ ಸ್ಥಾನ-ಮಾನ ಸಿಗುತ್ತಿಲ್ಲ. 'ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು' ಎಂಬ ತತ್ವದ ಮಾತುಗಳು ಕೇವಲ ಹೇಳಿಕೆ ಮಾತುಗಳಾಗಿವೆ ಹೊರತು ಕಾರ್ಯರೂಪದಲ್ಲಿ ಕಾಣಲು ಸಾಧ್ಯವಾಗಲಿಲ್ಲ ಎಂದರು.
ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹುದ್ದೆ ತೊರೆದ ಬಾಬುರಾವ್
ಲಂಬಾಣಿ ಸಮಾಜದ ಪ್ರಭಾವಿ ನಾಯಕನಾಗಿ ಹಾಗೂ ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷನಾಗಿ ಸಮುದಾಯದ ಲಕ್ಷಾಂತರ ಜನರ ಪ್ರತಿನಿಧಿಯಾಗಿರುವ ನನ್ನನ್ನು ಬಿಜೆಪಿ ಪಕ್ಷ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹುದ್ದೆಯನ್ನು ನೀಡಿದ ದಿನದಿಂದಲೂ ಇಲ್ಲಿಯವರೆಗೂ ನನ್ನನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ. ಪಕ್ಷದ ವೇದಿಕೆ ಕಾರ್ಯಕ್ರಮಗಳಲ್ಲೂ ನನ್ನ ಹೆಸರನ್ನು ಪ್ರಸ್ತಾಪಿಸದೆ ಅಗೌರವ ತೋರಿಸಿದ್ದಾರೆ ಎಂದರು.
ಬೆಳಮಗಿ ತುಳಿಯಲು ನನ್ನನ್ನು ಬಳಸಿಕೊಂಡರು
ಬಿಜೆಪಿ ಮೊದಲಿನಿಂದಲೂ ಒಬ್ಬರನ್ನು ತುಳಿದು ಮುಂದೆ ಬರುವ ರಾಜಕಾರಣ ಮುಂದುವರೆಸಿಕೊಂಡು ಬರಲಾಗಿದೆ. ಒಬ್ಬರನ್ನು ತುಳಿದು ಮತ್ತೊಬ್ಬರನ್ನು ಬೆಳೆಸುವ ಚಾಳಿ ಬಿಜೆಪಿಗೆ ಹೊಸದೇನೂ ಅಲ್ಲ. ಅಂತೆಯೇ ರೇವೂ ನಾಯಕ ಬೆಳಮಗಿ ಅವರನ್ನು ತುಳಿಯಲು ನನ್ನನ್ನು ಬಳಸಿಕೊಂಡರು. ಇದೀಗ ನನ್ನನ್ನು ತುಳಿಯಲು ಉಮೇಶ್ ಜಾಧವ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಇಂತಹ ಅನೈತಿಕ ರಾಜಕರಣದಿಂದ ಬಿಜೆಪಿ ತೊರೆಯುವಂತೆ ಮಾಡಿದೆ ಎಂದು ಬಾಬುರಾವ್ ಚವಾಣ್ ಬೇಸರಪಟ್ಟರು.
ಕಾಂಗ್ರೆಸ್ ಅಧಿಪತ್ಯವಿರುವ ಕಲಬುರಗಿ ಲೋಕಸಭಾ ಕ್ಷೇತ್ರದ ಪರಿಚಯ
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಾಬುರಾವ್
ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಬೆಲೆಯೇ ಇಲ್ಲ. ದೇಶದ ಸಂವಿಧಾನದ ಮೂಲ ಉದ್ದೇಶಗಳನ್ನು ಬುಡಮೇಲು ಮಾಡುವ ಪ್ರಯತ್ನ ಬಿಜೆಪಿಯಿಂದ ನಡೆಯುತ್ತಾ ಬಂದಿದ್ದು, ಸಂವಿಧಾನಕ್ಕೆ ಚ್ಯುತಿ ಬರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಆಡಳಿತ ನಡೆಯುತ್ತಿರುವುದರಿಂದ ನಾನು ಮನನೊಂದಿದ್ದೇನೆ ಎಂದಿದ್ದಾರೆ.
ಉಮೇಶ್ ಜಾಧವ್ ಸೇರ್ಪಡೆಯಿಂದ ಬೇಸರ
ಈ ಹಿಂದೆ ಧರ್ಮಸಿಂಗ್ ಅವರ ಕಾಲದಲ್ಲಿ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಾಬುರಾವ್ ಅವರು ಇಂದು ಅದೇ ಕಾರಣಕ್ಕೆ ಬಿಜೆಪಿ ತೊರೆದಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ ಎಂದಿದ್ದರು. ಆದರೆ, ಉಮೇಶ್ ಜಾಧವ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡು, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸೆಣಸಲು ಬಿಡಲಾಗಿದೆ.