ಕಲಬುರಗಿ ಪ್ರವಾಹ; 73 ಗ್ರಾಮಗಳ 27,278 ಜನರ ರಕ್ಷಣೆ
ಕಲಬುರಗಿ, ಅಕ್ಟೋಬರ್ 19 : ಭೀಮಾ ನದಿಯಲ್ಲಿನ ಪ್ರವಾಹದಿಂದಾಗಿ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದುವರೆಗೂ 73 ಗ್ರಾಮಗಳ 27,278 ಜನರನ್ನು ರಕ್ಷಣೆ ಮಾಡಲಾಗಿದೆ.
"ಜಿಲ್ಲೆಯಲ್ಲಿ ಸೋಮವಾರ ಸಾಯಂಕಾಲದ ವರೆಗೆ 27,278 ಜನರನ್ನು ರಕ್ಷಿಸಲಾಗಿದೆ. 162 ಕಾಳಜಿ ಕೇಂದ್ರಗಳನ್ನು ತೆರೆದು ಅಲ್ಲಿ ಆಶ್ರಯ ಕಲ್ಪಿಸಿ ಊಟದ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ" ಎಂದು ಜಿಲ್ಲಾಧಿಕಾರಿ ವಿ. ವಿ. ಜೋತ್ಸ್ನಾ ಹೇಳಿದ್ದಾರೆ.
ಕಲಬುರಗಿ ಪ್ರವಾಹ; ರಕ್ಷಣಾ ಕಾರ್ಯಕ್ಕೆ ಸೇನೆ ನಿಯೋಜನೆ
ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪ್ರವಾಹ ಸಂತ್ರಸ್ತರ ರಕ್ಷಣೆಗೆ 98 ಯೋಧರು, 57 ಸದಸ್ಯರ 3 ಎನ್. ಡಿ. ಆರ್. ಎಫ್ ಪಡೆ, 80 ಸದಸ್ಯರ ಅಗ್ನಿಶಾಮಕ ದಳದ ತಂಡ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಮತ್ತು ಸ್ವಯಂ ಸೇವಕರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದರು.
ಕಲಬುರಗಿ; ಮಳೆ, ಪ್ರವಾಹ, ಸಹಾಯವಾಣಿ ಸಂಖ್ಯೆಗಳು
ಇದುವರೆಗೂ ಪ್ರವಾಹದಿಂದಾಗಿ 573 ಜಾನುವಾರಗಳ ಜೀವ ಹಾನಿಯಾಗಿದೆ. 1,266 ಮನೆಗಳಿಗೆ ಭಾಗಶ: ಹಾನಿಯಾಗಿದೆ. 10150 ಮನೆಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಬಟ್ಟೆ ಮತ್ತು ಪಾತ್ರೆಗಳಿಗೆ ಹಾನಿಯಾಗಿವೆ.
ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರ ವಿಡಿಯೋ ವೈರಲ್!
"ಪ್ರವಾಹದಿಂದ ಹಾನಿಗೊಳಗಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಸಂತ್ರಸ್ತರ ನೆರವಿಗಾಗಿಯೇ ಅಂಬುಲೆನ್ಸ್ ಮೀಸಲಿಡಲಾಗಿದೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕಾಳಜಿ ಕೇಂದ್ರಕ್ಕೆ ಭೇಟಿ : ಕಲಬುರಗಿ ಜಿಲ್ಲಾಧಿಕಾರಿ ವಿ. ವಿ. ಜೋತ್ಸ್ನಾ ಸೋಮವಾರ ಅಫಜಲಪೂರ ತಾಲೂಕಿನ ಬಂದರವಾಡ, ಗಾಣಗಾಪೂರ, ಕರಜಗಿ ಗ್ರಾಮಗಳಲ್ಲಿನ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದರು. ಅಲ್ಲಿ ವಾಸ್ತವ್ಯ ಹೂಡಿರುವ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದರು.
"ಪ್ರವಾಹದ ನೀರು ಇಳಿಮುಖವಾಗುವವರೆಗೂ ಕಾಳಜಿ ಕೇಂದ್ರದಲ್ಲಿಯೇ ಇರಬೇಕು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಯಾರೂ ಸಹ ಆತಂಕ ಪಡುವ ಅಗತ್ಯವಿಲ್ಲ" ಎಂದು ಜನರಿಗೆ ಜಿಲ್ಲಾಧಿಕಾರಿಗಳು ಧೈರ್ಯ ತುಂಬಿದರು.
ಜಿಲ್ಲಾಧಿಕಾರಿಗಳ ಭೇಟಿ ವೇಳೆ ಸಂತ್ರಸ್ತರು ಮನೆ ಕಳೆದುಕೊಂಡ ಬಗ್ಗೆ ಸಮಸ್ಯೆ ಹೇಳಿಕೊಂಡರು. "ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಪಂಚಾಯತ್ ಸಿಇಒ ಅವರೊಂದಿಗೆ ಚರ್ಚಿಸಿ ಶಾಸ್ವತ ಪರಿಹಾರ ಕಲ್ಪಿಸಲಾಗುವುದು" ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳು ಸೊನ್ನ ಬ್ಯಾರೇಜಿಗೆ ಭೇಟಿ ನೀಡಿದರು. ಬ್ಯಾರೇಜ್ನ ಕಾರ್ಯನಿರ್ವಾಹಕ ಅಭಿಯಂತ ಅಶೋಕ ಕಲಾಲ್ ಅವರು ಬ್ಯಾರೇಜ್ನ ಒಳಹರಿವು, ಹೊರ ಹರಿವಿನ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.