ಕಲಬುರಗಿ: ಹುತಾತ್ಮ ಯೋಧ ಮಹದೇವ ಪಾಟೀಲ್ ಅಂತ್ಯಕ್ರಿಯೆ
ಕಲಬುರಗಿ, ಜೂನ್ 29: ಛತ್ತೀಸ್ಗಡ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸಕ್ಕೆ ಬಲಿಯಾಗಿದ್ದ ಕಲಬುರಗಿಯ ಹುತಾತ್ಮ ಯೋಧ ಮಹದೇವ ಪಾಟೀಲ ಅವರ ಅಂತ್ಯಕ್ರಿಯೆಯನ್ನು ಶನಿವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.
ಮಹದೇವ ಪಾಟೀಲ ಅವರ ಸ್ವಂತ ಊರಾದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.
ನಕ್ಸಲರ ಗುಂಡಿಗೆ ಕಲಬುರಗಿ ಯೋಧ ಹುತಾತ್ಮ: ಸೀಮಂತ ನಡೆಯಬೇಕಿದ್ದ ಮನೆಯಲ್ಲೀಗ ಸೂತಕ
ಛತ್ತೀಸಗಡದಿಂದ ತರಲಾದ ಅವರ ಪಾರ್ಥಿವ ಶರೀರವನ್ನು ತರುವ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಅವರ ಮೃತದೇಹವಿದ್ದ ವಾಹನ ಬರುವ ಸಂದರ್ಭದಲ್ಲಿ ನೂರಾರು ಮಂದಿ ದೇಶದ ಧ್ವಜ ಹಿಡಿದು ಬೈಕ್ನಲ್ಲಿ ಮೆರವಣಿಗೆ ಸಾಗಿ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದರು.
ಮಹದೇವ ಪಾಟೀಲ್ (50) ಅವರು ಜುಲೈ 1ರಂದು ನಡೆಯಬೇಕಿದ್ದ ಮಗಳ ಸೀಮಂತ ಸಮಾರಂಭದಲ್ಲಿ ಭಾಗವಹಿಸಲು ಶನಿವಾರ ಸ್ವಗ್ರಾಮಕ್ಕೆ ಬರಬೇಕಿತ್ತು. ಆದರೆ, ಅವರು ಹುತಾತ್ಮರಾಗಿ ಬಂದಿದ್ದಾರೆ.
ಶುಕ್ರವಾರ ಬೆಳಿಗ್ಗೆ ಛತ್ತೀಡಗಡದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರೊಂದಿಗೆ ನಡೆದ ಕಾದಾಟದಲ್ಲಿ ಮಹದೇವ ಪಾಟೀಲ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಹೈದರಾಬಾದ್ನ ಸಿಆರ್ಪಿಎಫ್ನಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಅವರನ್ನು ಕಳೆದ ಮೂರು ವರ್ಷದ ಹಿಂದಷ್ಟೇ ಛತ್ತೀಸಗಡಕ್ಕೆ ವರ್ಗಾವಣೆ ಮಾಡಲಾಗಿತ್ತು.
ಅವರಿಗೆ ಮೂವರು ಮಕ್ಕಳಿದ್ದು, ಒಬ್ಬ ಮಗಳ ಮದುವೆಯಾಗಿದೆ. ಇನ್ನಿಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.