ಕಲಬುರಗಿಯಲ್ಲಿ ಚಿಕಿತ್ಸೆ ಸಿಗದೇ ಸಾವು; ಡಿಸಿ ಕಚೇರಿಗೆ ಶವ ತಂದ ಕುಟುಂಬಸ್ಥರು
ಕಲಬುರಗಿ, ಜುಲೈ 31: ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಈ ನಡುವೆ ಸಾಮಾನ್ಯ ಆರೋಗ್ಯ ಸಮಸ್ಯೆಗಳುಳ್ಳ ರೋಗಿಗಳಿಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ.
ನಿನ್ನೆಯೂ ಇಂಥದ್ದೇ ಒಂದು ಘಟನೆ ನಡೆದಿದೆ. ಗುರುವಾರ, ಜುಲೈ 30ರಂದು ಬೆಡ್ ಇಲ್ಲವೆಂದು ಆಸ್ಪತ್ರೆಗಳು ರೋಗಿಯನ್ನು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೇ ರೋಗಿಯನ್ನು ಕುಟುಂಬಸ್ಥರು ಸಾಗಿಸಿದ್ದು, ಕಚೇರಿ ಮುಟ್ಟುವಷ್ಟರಲ್ಲಿ ಆ ವ್ಯಕ್ತಿ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.
ಕೊರೊನಾ ಅಲ್ಲ; ಕೊರೊನೇತರ ಸಮಸ್ಯೆಗೆ ಚಿಕಿತ್ಸೆ ಸಿಗದೇ ಹೆಚ್ಚಿದೆ ಸಾವು
ಕಲಬುರಗಿಯ ಮೋಮಿನಪುರದ ನಿವಾಸಿ, 38 ವರ್ಷದ ವ್ಯಕ್ತಿ ಮೊಹಮ್ಮದ್ ಆಯುಬ್ ಎಂಬುವರಿಗೆ ಇದೇ ಬುಧವಾರ ಜುಲೈ 29ರ ರಾತ್ರಿ ಜ್ವರ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಜಿಮ್ಸ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಆದರೆ ನಮ್ಮಲ್ಲಿ ಬೆಡ್ ಖಾಲಿಯಿಲ್ಲ ಎಂದು ರಸೀದಿ ಬರೆದು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಿಲ್ಲ.
ಜಿಮ್ಸ್ ಆಸ್ಪತ್ರೆಯಲ್ಲೇ ಹಾಸಿಗೆ ಇಲ್ಲವೆಂದು ಹೇಳಿದ್ದರಿಂದ ರೋಗಿಯನ್ನು ಆಟೋದಲ್ಲಿ ಇಎಸ್ಐ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಒಟ್ಟು ಐದು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೂ ಯಾರೂ ದಾಖಲಿಸಿಕೊಳ್ಳದ ಕಾರಣ ಕೊನೆಗೆ ಜಿಲ್ಲಾಧಿಕಾರಿ ಕಚೇರಿಯತ್ತ ರೋಗಿಯನ್ನು ಆಟೋದಲ್ಲಿ ಕರೆದುಕೊಂಡು ಬಂದಿದ್ದಾರೆ. ಆದರೆ ಜಿಲ್ಲಾಧಿಕಾರಿ ಕಚೇರಿಗೆ ಬರುವಷ್ಟರಲ್ಲೇ ಆಯುಬ್ ಮೃತಪಟ್ಟಿದ್ದಾರೆ.
ನಂತರ ಮೃತ ದೇಹವನ್ನು ವಾಪಸ್ ಆಟೋದಲ್ಲೇ ಆಸ್ಪತ್ರೆಗೆ ತೆಗೆದುಕೊಂಡು ಬಂದ ಕುಟುಂಬಸ್ಥರು, ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಎಂದು ಕೇಳಿಕೊಂಡರೆ ಸ್ಪಂದಿಸಲಿಲ್ಲ. ಈ ಸಾವಿಗೆ ಜಿಲ್ಲಾಧಿಕಾರಿಗಳು ಉತ್ತರ ಕೊಡಬೇಕೆಂದು ಮೃತನ ಸಹೋದರ ಆಗ್ರಹಿಸಿದರು. "ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿ ಶರತ್ ಬಿ ಪ್ರತಿಕ್ರಿಯಿಸಿದ್ದಾರೆ.