ಕಲಬುರಗಿ ಪ್ರವಾಹ; ಕಾಳಜಿ ಕೇಂದ್ರದಲ್ಲಿ ಊಟದೊಂದಿಗೆ ಹಣ್ಣು-ಹಾಲು ಪೂರೈಕೆ
ಕಲಬುರಗಿ, ಅಕ್ಟೋಬರ್ 19: ಭೀಮಾ ನದಿ ಪ್ರವಾಹದಿಂದ ತ್ತತರಿಸಿರುವ ಸಂತ್ರಸ್ತರಿಗೆ ಆಶ್ರಯ ನೀಡಲು ತೆರೆದಿರುವ ಕಾಳಜಿ ಕೇಂದ್ರದಲ್ಲಿ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನ, ರಾತ್ರಿ ಊಟದ ಜೊತೆಗೆ ಹಣ್ಣು, ಹಾಲು ನೀಡುವ ಮೂಲಕ ಜಿಲ್ಲಾಡಳಿತ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ.
ಭೀಮಾ ನದಿಗೆ ಹೆಚ್ಚಿನ ನೀರು ಹರಿಸಿದ ಪರಿಣಾಮ ಪ್ರವಾಹ ಪೀಡಿತ ಪ್ರದೇಶವಾಗಿ ಮಾರ್ಪಟ್ಟಿರುವ ಅಫಜಲಪುರ ತಾಲೂಕಿನ ಸೊನ್ನ, ಶಿರವಾಳ ಗ್ರಾಮಗಳ ಕಾಳಜಿ ಕೇಂದ್ರಗಳಲ್ಲಿ ಜನರಿಗೆ ಉತ್ತಮ ಆಹಾರವನ್ನೂ ನೀಡಲಾಗುತ್ತಿದೆ. ಸದ್ಯಕ್ಕೆ ಭೀಮಾ ನದಿಯ ಹಿನ್ನೀರಿನಿಂದ ಅಫಜಲಪುರ ತಾಲೂಕಿನ ಶಿರವಾಳ-ಭಂಕಲಗಾ ಮಧ್ಯೆ ರಸ್ತೆ ಮೇಲೆ ಮೂರಡಿ ನೀರು ಬಂದ ಪರಿಣಾಮ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸ್ಥಳೀಯರು ಗ್ರಾಮಗಳ ನಡುವಿನ ಪ್ರಯಾಣಕ್ಕೆ ಟ್ರ್ಯಾಕ್ಟರ್ ಮೊರೆ ಹೋಗಿದ್ದಾರೆ. ಮುಂದೆ ಓದಿ...
ಕಾಳಜಿ ಕೇಂದ್ರದಲ್ಲಿ ಉತ್ತಮ ಆಹಾರ ವ್ಯವಸ್ಥೆ
ಶಿರವಾಳ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮನೆಗಳು ಹಿನ್ನೀರಿನಿಂದ ಬಾಧಿತವಾಗಿದ್ದು, ಸುಮಾರು 70 ಜನರಿಗೆ ಗ್ರಾಮದ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಊಟೋಪಚಾರ ಮಾಡಲಾಗುತ್ತಿದೆ. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತಿದೆ. ಮೂರು ಹೊತ್ತು ಬಾಳೆ ಹಣ್ಣು, ಮಕ್ಕಳಿಗೆ ಬಿಸ್ಕಿಟ್ ನೀಡಲಾಗುತ್ತಿದೆ ಎಂದು ಗೌರ (ಬಿ) ಗ್ರಾಮ ಪಂಚಾಯತಿಯ ಪಿ.ಡಿ.ಓ ಶಂಕರ ಧಾಮಣ್ಣ ತಿಳಿಸಿದರು.
ಕಲಬುರಗಿ ಪ್ರವಾಹ; ಸೈಯದ್ ಚಿಂಚೋಳಿ ಗ್ರಾಮ ಸ್ಥಳಾಂತರಕ್ಕೆ ಸೂಚನೆ
ಅಫಜಲಪುರ ಕಾಳಜಿ ಕೇಂದ್ರದಲ್ಲಿ ನೂರಾರು ನಿರಾಶ್ರಿತರು
ಸೊನ್ನ, ಅಳ್ಳಗಿ(ಬಿ), ಇಂಚಗೇರಾ, ಕೆಲ್ಲೂರ, ಬನ್ನಟ್ಟಿ ಹಾಗೂ ಶಿರೂರ ಗ್ರಾಮಗಳಿಂದ ರಕ್ಷಣೆ ಮಾಡಿರುವ ಸಂತ್ರಸ್ತರನ್ನು ಅಫಜಲಪುರ ಪಟ್ಟಣದ ಹೊರವಲಯದ ಪದವಿ ಕಾಲೇಜಿನಲ್ಲಿ ಇರಿಸಲಾಗಿದ್ದು, ಅಳ್ಳಗಿ (ಬಿ) ಮತ್ತು ಸೊನ್ನ ಗ್ರಾಮದ 261 ಜನರು ಅಲ್ಲಿ ಆಶ್ರಯ ಪಡೆದಿದ್ದಾರೆ. ಇಂಚಗೇರಾ, ಕೆಲ್ಲೂರ, ಬನ್ನಟ್ಟಿ ಹಾಗೂ ಶಿರೂರ ಗ್ರಾಮಗಳ 500ಕ್ಕೂ ಹೆಚ್ಚು ಸಂತ್ರಸ್ತರಿಗೆ ಇಲ್ಲಿ ಆಶ್ರಯ ನೀಡಲಾಗಿದೆ.
ಸೊನ್ನ ಬ್ಯಾರೇಜಿನಿಂದ 8 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಕೆಳ ಹಂತದಲ್ಲಿ ಬರುವ ದೇವಣಗಾಂವ ಬ್ರಿಡ್ಜ್ ತುಂಬಿ ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಉತ್ತಮ ಆಹಾರ ವ್ಯವಸ್ಥೆಗೆ ಡಿಸಿ ನಿರ್ದೇಶನ
ಅಫಜಲಪುರ ಕಾಳಜಿ ಕೇಂದ್ರಕ್ಕೆ ಅ.18ರಂದು ಭೇಟಿ ನೀಡಿದ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಬಿ ಮಾತನಾಡಿ, ಭೀಮಾ ಪ್ರವಾಹದಿಂದ ನಿರಾಶ್ರಿತಗೊಂಡ 8603 ಜನರಿಗೆ ರಕ್ಷಣೆ ಮಾಡಿದ್ದು, ತಾಲೂಕಿನ ವಿವಿಧೆಡೆ ಸ್ಥಾಪಿಸಲಾದ 11 ಕಾಳಜಿ ಕೇಂದ್ರಗಳಲ್ಲಿ ಇವರಿಗೆ ಆಶ್ರಯ ನೀಡಿ ಬೆಳಿಗ್ಗೆ ಉಪಾಹಾರ, ಹಣ್ಣು, ಚಹಾ, ಮಧ್ಯಾಹ್ನ ಮತ್ತು ರಾತ್ರಿ ಚಪಾತಿ, ಪಲ್ಯ, ಅನ್ನ, ಸಾರು ಊಟದ ಜೊತೆಗೆ ಹಣ್ಣು, ಹಾಲು ನೀಡಲಾಗುತ್ತಿದೆ. ಇದಲ್ಲದೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಸಹ ಪೂರೈಸಲಾಗುತ್ತಿದೆ ಎಂದರು.
ಈ ಸಮಯವೇ ಸರ್ಕಾರಕ್ಕೆ ಸವಾಲಿನ ಪ್ರಶ್ನೆ; ಆರ್ ಅಶೋಕ್
ಎಸ್ ಡಿಆರ್ ಎಫ್, ಅಗ್ನಿಶಾಮಕ ದಳದಿಂದ 600 ಜನರ ರಕ್ಷಣೆ
ಭೀಮಾ ನದಿ ಪ್ರವಾಹದ ಹಿನ್ನೀರಿನಿಂದ ಸುತ್ತುವರಿದಿರುವ ಅಫಜಲಪುರ ತಾಲೂಕಿನ ಉಡಚಣದಲ್ಲಿ ಎಸ್ ಡಿ ಆರ್ ಎಫ್ ತಂಡ ಹಾಗೂ ಅಗ್ನಿಶಾಮಕ ದಳದ ತಂಡ ಸುಮಾರು 600 ಜನರನ್ನು ರಕ್ಷಿಸಿ ಕಾಳಜಿ ಕಂದ್ರಕ್ಕೆ ಸ್ಥಳಾಂತರಿಸಿದೆ. ಗ್ರಾಮದಲ್ಲಿ 9 ರಿಂದ 10 ಸಾವಿರ ಜನಸಂಖ್ಯೆ ಇದ್ದು, ನಿನ್ನೆ 6 ದಿಂದ 7 ಸಾವಿರ ಜನರನ್ನು ರಕ್ಷಿಸಲಾಗಿದೆ. ಸಾಯಂಕಾಲದ ಹೊತ್ತಿಗೆ ನೀರು ಇಳಿಕೆ ಕಂಡಿದ್ದರಿಂದ ಗ್ರಾಮದ ಎತ್ತರದ ಪ್ರದೇಶದಲ್ಲಿದ್ದ ಜನರು ಅಲ್ಲಿಯೇ ಉಳಿದುಕೊಂಡಿದ್ದಾರೆ. ಅವರನ್ನು ಮನವೊಲಿಸಿ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ.