ಯತ್ನಾಳ್ ಜೋಕರ್, ಜಾಧವ್ ಗೋಮುಖವ್ಯಾಘ್ರ:ದಿನೇಶ್ ಗುಂಡೂರಾವ್ ವಾಗ್ದಾಳಿ
ಕಲಬುರ್ಗಿ, ಮೇ.07:ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಒಬ್ಬ ಜೋಕರ್. ಅವರ ವಯಸ್ಸಿಗೆ ತಕ್ಕಂತೆ ವರ್ತಿಸಲ್ಲ. ಬಾಯಿಗೆ ಬಂದಂತೆ ಮಾತಾಡೋದು ಬಿಟ್ರೆ ಬೇರೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಚಿಂಚೋಳಿ ಪ್ರಚಾರ ಸಭೆ ಬಳಿಕ ರಟಕಲ್ ನಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ನಲ್ಲಿಯೇ ಷಡ್ಯಂತ್ರ ನಡೆದಿದೆ. ಅದಕ್ಕಾಗಿಯೇ ಸಮ್ಮಿಶ್ರ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ನಡೆದಿದೆ ಎಂಬ ಯತ್ನಾಳ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ತಮ್ಮ ಪಕ್ಷದಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ಯತ್ನಾಳ ಗಮನಹರಿಸಲಿ. ಅದನ್ನು ಬಿಟ್ಟು ಬೇರೆ ಪಕ್ಷದ ಬಗ್ಗೆ ಬಾಯಿಗೆ ಬಂದಂತೆ ಮಾತಾಡೋದನ್ನು ಬಿಡಲಿ ಎಂದು ತಿಳಿಸಿದರು.
ದೇವೇಗೌಡರ ಗೆಲುವಿನ ಬಗ್ಗೆ ಡಿಸಿಎಂ ಪರಮೇಶ್ವರ್ ಹೇಳೋದೇನು?
ಯತ್ನಾಳ ಒಮ್ಮೆ ಸಂವಿಧಾನ ಬದಲಾಯಿಸೋದಾಗಿ ಹೇಳ್ತಾರೆ. ಮತ್ತೊಮ್ಮೆ ಎಂ.ಬಿ.ಪಾಟೀಲರನ್ನು ಉಪ ಮುಖ್ಯಮಂತ್ರಿ ಮಾಡೋದಾಗಿ ಹೇಳ್ತಾರೆ.ಸದ್ಯ ಉಪ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ ಎಂದು ಹೇಳಿದರು.
ರಾಜಕೀಯ ನೈತಿಕತೆಯ ದಿವಾಳಿತನಕ್ಕೆ ಉಪಚುನಾವಣೆ ಸಾಕ್ಷಿಯಾಗಿದೆ. ಜಾಧವ್ ಮೊದಲು ಯಾರೂ ಎಂದೇ ಗೊತ್ತಿರಲಿಲ್ಲ. ವೈದ್ಯರು ಹಾಗೂ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿದ್ದರಿಂದ ಜಾಧವ್ ಅವರಿಗೆ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರಂ ಸಿಂಗ್ ಅವಕಾಶ ನೀಡಿದ್ದರು.ಕಾಂಗ್ರೆಸ್ ಅವಕಾಶ ನೀಡಿತ್ತು. ಮತದಾರರು ಎರಡು ಸಲ ಆಶೀರ್ವಾದ ಮಾಡಿದ್ದರು. ಹಾಗಾಗಿ ಅವರು ರಾಜಕೀಯದಲ್ಲಿ ಬೆಳೆದರು. ಅವರ ಕ್ಷೇತ್ರದ ಬೇಡಿಕೆಗಳನ್ನು ಈಡೇರಿಸಲಾಗಿತ್ತು. ಉಮೇಶ್ ಜಾಧವ್ ಗೆ ಎಲ್ಲ ಕೊಟ್ಟ ಮೇಲೂ ಬೆನ್ನಿಗೆ ಚೂರಿ ಹಾಕಿದರು. ಅವರೊಬ್ಬ ಗೋಮುಖವ್ಯಾಘ್ರ. ಪ್ರಿಯಾಂಕ್ ಖರ್ಗೆ ಬಗ್ಗೆ ಟೀಕೆ ಮಾಡಿದ ಅವರು ತಮ್ಮ ಮಗನಿಗೆ ಏಕೆ ಟಿಕೆಟ್ ಕೊಡಿಸಿದರು ಎಂದು ದಿನೇಶ್ ಪ್ರಶ್ನಿಸಿದರು.
ಜಾಧವ್ ರಂತ ಸಮಯಸಾಧಕರಿಗೆ ತಕ್ಕ ಪಾಠ ಕಲಿಸಬೇಕು. ಎಷ್ಟು ಹಣ ತೆಗೆದುಕೊಂಡು ಬಿಜೆಪಿಗೆ ಮಾರಾಟವಾಗಿದ್ದಾರೋ ಗೊತ್ತಿಲ್ಲ ಎಂದ ಗುಂಡೂರಾವ್, ಜನರ ಪ್ರಕಾರ 20 ಕೋಟಿ, 30 ಕೋಟಿ 40 ಕೋಟಿ ಹೇಗೆ ತೆಗೆದುಕೊಂಡು ಹೋಗಿದ್ದಾರೋ ಗೊತ್ತಿಲ್ಲ ಎಂದರು.
ಸುಭಾಷ್ ರಾಠೋಡ್ ಬಿಜೆಪಿಯಿಂದ ಅನ್ಯಾಯವಾಗಿದ್ದಕ್ಕೆ ಕಾಂಗ್ರೇಸ್ ಗೆ ಬಂದಿದ್ದಾರೆ. ಜಾಧವ್ ಅವರಂತೆ ಅವರು ಪಕ್ಷಕ್ಕೆ ದ್ರೋಹ ಮಾಡಿಲ್ಲ. ರಾಜಕೀಯ ಹಾಗೂ ಹೋರಾಟದ ಹಿನ್ನೆಲೆಯ ರಾಠೋಡ್ ಅವರು ಚಿಂಚೋಳಿ ಅಭಿವೃದ್ದಿ ಮಾಡಲಿದ್ದಾರೆ ನೀವು ಆಶೀರ್ವದಿಸಿ ಎಂದು ದಿನೇಶ್ ಕೋರಿದರು.