ಅನಂತಕುಮಾರ್ ಹೆಗಡೆ ಜೀವಂತ ವಾಪಸ್ ಹೋಗಲ್ಲ: ದಲಿತ ಸಂಘಟನೆ ಆಕ್ರೋಶ
ಕಲಬುರಗಿ, ಜನವರಿ 17 : "ಪೊಲೀಸರ ಬ್ಯಾರಿಕೇಡ್ ಮುರಿದು ಅನಂತಕುಮಾರ್ ಹೆಗಡೆ ಮುಖಕ್ಕೆ ಮಸಿ ಬಳಿಯುವುದು ಖಚಿತ. ಸಂವಿಧಾನ ಬದಲಾವಣೆ ಮಾಡುವ ಸಲುವಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂಬ ಹೇಳಿಕೆ ನೀಡಿದ್ದ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ದಲಿತ ಮುಖಂಡ ಹಣಮಂತ ಯಳಸಂಗಿ ಬುಧವಾರ ಇಲ್ಲಿ ಆಗ್ರಹಿಸಿದರು.
ಇಲ್ಲಿಗೆ ಬಂದ ಅನಂತಕುಮಾರ್ ಹೆಗಡೆ ವಿರುದ್ಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು. ದಲಿತ ಸಂಘಟನೆಗಳಿಗೆ ಸವಾಲೊಡ್ಡಿ ಅನಂತಕುಮಾರ್ ಹೆಗಡೆ ಇಲ್ಲಿಗೆ ಬಂದರೆ ಅವರ ಹೆಣ ಕೂಡ ವಾಪಸ್ ಹೋಗುವುದಿಲ್ಲ ಎಂದು ದಲಿತ ಮುಖಂಡರು ಬೆದರಿಕೆಯೊಡ್ಡಿದರು.
ಮತ್ತೆ ಜಾತ್ಯಾತೀತರ ಬಗ್ಗೆ ಕುಹುಕವಾಡಿದ ಅನಂತ್ಕುಮಾರ್ ಹೆಗಡೆ
ಇಲ್ಲಿನ ಐವಾನ್ ಶಾಹಿ ಅತಿಥಿ ಗೃಹದ ಮುಂದೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 'ಅನಂತಕುಮಾರ್ ಗೋ ಬ್ಯಾಕ್ ಗೋ ಬ್ಯಾಕ್' ಎಂದು ದಲಿತ ಮುಖಂಡರು ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ನಿರತವಾಗಿದ್ದ ಐವತ್ತಕ್ಕೂ ಹೆಚ್ಚು ದಲಿತ ಪರ ಸಂಘಟನೆಗಳು, ಜನವಾದಿ ಮಹಿಳಾ ಸಂಘಟನೆಯ ಕೆ.ನೀಲಾ ಸೇರಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರ ಬಂಧನ ಮಾಡಲಾಯಿತು.
ಕಲಬುರಗಿಯ ಐವಾನ್ ಶಾಹಿ ಅತಿಥಿ ಗೃಹದ ಮುಂದೆ ಬ್ಯಾರಿಕೇಡ್ ಮುರಿದು ಒಳನುಗ್ಗಲು ಯತ್ನಿಸಿದ್ದರಿಂದ ದಲಿತ ಸಂಘಟನೆಗಳ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ತಿಕ್ಕಾಟವಾಯಿತು. ಪ್ರತಿಭಟನೆಯ ಕಾರಣಕ್ಕೆ ಐವಾನ್ ಎ ಶಾಹಿ ವಸತಿ ಗೃಹದ ಹಿಂಬಾಗಿಲಿನಿಂದ ಪಿಡಿಎ ಇಂಜಿನಿಯರಿಂಗ್ ಕಾಲೇಜಿಗೆ ಬಿಗಿ ಭದ್ರತೆಯಲ್ಲಿ ಅನಂತಕುಮಾರ್ ಹೆಗಡೆ ತೆರಳಿದರು.