ಮುಳ್ಳನ್ನು ಮುಳ್ಳಿನಿಂದಲೇ ತೆಗೀಬೇಕು ಎಂದು ಸಿದ್ದುಗೆ ಚಾಟಿ ಬೀಸಿದ ಸಿ.ಟಿ.ರವಿ
ಕಲಬುರಗಿ, ನವೆಂಬರ್ 16: "ಉಪಚುನಾವಣೆ ಯಾವಾಗ ಗೆಲ್ಲುವ ಅವಕಾಶ ಹೆಚ್ಚಿರುತ್ತದೋ ಸ್ಪರ್ಧಾ ಆಕಾಂಕ್ಷಿಗಳೂ ಹೆಚ್ಚಾಗುತ್ತಾರೆ. ಅನರ್ಹರು ರಾಜೀನಾಮೆ ಕೊಟ್ಟಿದ್ದಕ್ಕಾಗಿಯೇ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ" ಎಂದು ಹೇಳಿದ್ದಾರೆ ಪ್ರವಾಸೋದ್ಯಮ ಸಚಿವ ಸಿಟಿ ರವಿ.
ಸಿದ್ದರಾಮಯ್ಯನವರನ್ನು ನಾನು ಎಲ್ಲೂ 'ಕುಡುಕ' ಎಂದಿಲ್ಲ, ನನ್ನ ತಪ್ಪೇನಿದೆ? ಸಿ.ಟಿ.ರವಿ
ಕಲಬುರಗಿಯಲ್ಲಿ ಮಾತನಾಡಿದ ಅವರು, "ಇದು ವಿಶೇಷ ಸಂದರ್ಭ. ಇದನ್ನು ಸಾಮಾನ್ಯ ಸಂದರ್ಭದಂತೆ ಪತಿಗಣಿಸುವಂತಿಲ್ಲ. ಅನರ್ಹ ಶಾಸಕರು ರಾಜೀನಾಮೆ ಕೊಟ್ಟು, ಪಡಬಾರದ ಕಷ್ಟ ಪಟ್ಟು ಇದೀಗ ಬಿಜೆಪಿ ಸೇರಿದ್ದಾರೆ. ಅವರಿಗೆ ಟಿಕೆಟ್ ಕೊಡುವುದು ಮತ್ತು ಗೆಲ್ಲಿಸುವುದು ನಮ್ಮ ಕರ್ತವ್ಯ. ಬಂಡಾಯಗಾರರು ಈ ಹಿಂದೆ ಗೆದ್ದಿದ್ದರೆ ಈ ಸನ್ನಿವೇಶವೇ ಬರುತ್ತಿರಲಿಲ್ಲ.
ರಾಜ್ಯದ ಜನರಿಗೆ ಕಾಂಗ್ರೆಸ್ ಜೆಡಿಎಸ್ ಅಧಿಕಾರಕ್ಕೆ ಬರುವುದು ಇಷ್ಟ ಇಲ್ಲ. ಹಾಗಾಗಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸ್ತಾರೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಆಪರೇಷನ್ ಜಗಜ್ಜಾಹೀರು ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, "ಸಿದ್ದರಾಮಯ್ಯ ಅವರು ಈ ಹಿಂದೆ ಜಮೀರ್ ಅಹ್ಮದ್, ಚಲುವರಾಯಸ್ವಾಮಿ ಇತರರನ್ನು ಕರೆತಂದಾಗ ನೈತಿಕತೆ ಎಲ್ಲಿ ಹೋಗಿತ್ತು? ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ನಾವೂ ಅಂಥದ್ದೇ ರಾಜಕಾರಣ ಮಾಡುವುದು ಅನಿವಾರ್ಯವಾಗಿದೆ" ಎಂದು ಉತ್ತರಿಸಿದ್ದಾರೆ.