ನಕ್ಸಲರ ಗುಂಡಿಗೆ ಕಲಬುರಗಿ ಯೋಧ ಹುತಾತ್ಮ: ಸೀಮಂತ ನಡೆಯಬೇಕಿದ್ದ ಮನೆಯಲ್ಲೀಗ ಸೂತಕ
ಕಲಬುರಗಿ, ಜೂನ್ 29: ಪುಟಾಣಿ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ಆ ಮನೆಯಲ್ಲೀಗ ಸೂತಕದ ಛಾಯೆ. ಸೀಮಂತದ ಸಂಭ್ರಮ ನಡೆಯಬೇಕಿದ್ದ ಸ್ಥಳದಲ್ಲಿ ಕಣ್ಣೀರ ಕೋಡಿ ಹರಿಯುತ್ತಿದೆ. ಹೊಸ ಜೀವವೊಂದು ಮನೆಯೊಳಗೆ ಕಾಲಿರಿಸಲಿದೆ ಎಂಬ ಖುಷಿಯೊಂದಿಗೆ ಕಾದಿದ್ದ ಕುಟುಂಬಕ್ಕೆ ಸಿಕ್ಕಿದ್ದು, ಆ ಕುಟುಂಬದ ಆಧಾರವಾಗಿದ್ದ ಹಿರಿಯ ಜೀವ ಇನ್ನಿಲ್ಲ ಎಂಬ ಆಘಾತಕಾರಿ ಸುದ್ದಿ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದ ಮೂಲದವರಾದ ಎಎಸ್ಐ ಮಹದೇವ ಪಾಟೀಲ್ ಅವರು ಛತ್ತೀಸ್ಗಡದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ನಕ್ಸಲರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರೊಂದಿಗೆ ಸಿಆರ್ಪಿಎಫ್ನ ಇನ್ನೂ ಇಬ್ಬರು ಸಿಬ್ಬಂದಿ ಹಾಗೂ 14 ವರ್ಷದ ಬಾಲಕಿಯೊಬ್ಬಳು ಬಲಿಯಾಗಿದ್ದಾರೆ.
ಭೈರಮ್ಗಢ ಪಟ್ಟಣದ ಸಮೀಪದ ಕೇಶ್ಕುಟುಲ್ ಗ್ರಾಮದ ಬಳಿ ಅಡಗಿ ಕುಳಿತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಸಿಆರ್ಪಿಎಫ್ನ ಹಿರಿಯ ಅಧಿಕಾರಿಗಳು ಮತ್ತು 199 ಬಟಾಲಿಯನ್ನ ಒಂದು ಗುಂಪು ಕೇಶ್ಕುಟುಲ್ ಕಡೆಗೆ ಶುಕ್ರವಾರ ಬೆಳಿಗ್ಗೆ ಹೊರಟಿದ್ದರು.
ನಕ್ಸಲ್ ನೆಲೆಯ ಮೊದಲ ಸುಳಿವು ನೀಡಿದ್ದ ಚೀರಮ್ಮ ನಿಧನ
ಮೋಟಾರ್ ಸೈಕಲ್ನಲ್ಲಿ ತೆರಳುತ್ತಿದ್ದ ಅವರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದರು. ಘಟನೆಯಲ್ಲಿ ಮಹದೇವ ಪಾಟೀಲ್ ಅವರು ಸ್ಥಳದಲ್ಲಿಯೇ ಮೃತಪಟ್ಟರೆ, ಎಎಸ್ಐ ಮದನ್ಪಾಲ್ ಮತ್ತು ಹೆಡ್ ಕಾನ್ಸ್ಟೇಬಲ್ ಶಾಜಿ ತೀವ್ರವಾಗಿ ಗಾಯಗೊಂಡಿದ್ದರು. ಸುಮಾರು ಹದಿನೈದು ನಿಮಿಷ ಈ ಗುಂಡಿನ ಚಕಮಕಿ ನಡೆಯಿತು. ಗಾಯಗೊಂಡಿದ್ದ ಇಬ್ಬರು ಸಿಬ್ಬಂದಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು.
14 ವರ್ಷದ ಬಾಲಕಿ ಬಲಿ
ಈ ದಾಳಿ ವೇಳೆ ನಾಗರಿಕರಿದ್ದ ವಾಹನವೊಂದು ಕೂಡ ಸಿಲುಕಿಕೊಂಡಿತ್ತು. ಪಿಕ್ಅಪ್ ಟ್ರಕ್ನಲ್ಲಿ ಐದು ಮಂದಿ ಇದ್ದರು. ಅವರಿಗೂ ಗುಂಡು ತಗುಲಿದ್ದು, 14 ವರ್ಷದ ತೇಲಂ ಎಂಬ ಬಾಲಕಿ ಮೃತಪಟ್ಟಿದ್ದಾಳೆ. 14 ವರ್ಷದ ರಿಂಕಿ ಹೇಮ್ಲಾ ಗಾಯಗೊಂಡಿದ್ದಾಳೆ.
ಅನಂತ್ ನಾಗ್ ಸ್ಫೋಟದಲ್ಲಿ ಬಳಸಿದ್ದು ಮೇಡ್ ಇನ್ ಚೀನಾ ಸ್ಟೀಲ್ ಬುಲೆಟ್!
ಮುಗಿಲು ಮುಟ್ಟಿದ ಆಕ್ರಂದನ
ಮಹದೇವ ಪಾಟೀಲ್ (50) ಅವರು ಸುಮಾರು 29 ವರ್ಷಗಳಿಂದ ಸಿಆರ್ಪಿಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಮಗಳ ಸೀಮಂತಕ್ಕೆಂದು ಶನಿವಾರ ಬೆಳಿಗ್ಗೆ ಊರಿಗೆ ಬರಬೇಕಿತ್ತು. ಆದರೆ, ಆ ಸಂಭ್ರಮದ ಹಬ್ಬ ನಡೆಯಬೇಕಿದ್ದ ಮನೆಯಲ್ಲಿ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
ಹತ್ತು ದಿನ ರಜೆ ಹಾಕಿ ಬರುವುದಾಗಿ ಹೇಳಿದ್ದರು
ಮರಗುತ್ತಿಯಲ್ಲಿರುವ ಅವರ ನಿವಾಸದಲ್ಲಿ ಸಂಬಂಧಿಕರು, ಸ್ನೇಹಿತರು ಮತ್ತು ಗ್ರಾಮಸ್ಥರು ಸೇರಿಕೊಂಡಿದ್ದಾರೆ. 'ಮೊನ್ನೆಯಷ್ಟೇ ತಂದೆಯ ಜೊತೆ ಮಾತನಾಡಿದ್ದೆ. ಮನೆಯಲ್ಲಿನ ಕಾರ್ಯಕ್ರಮಕ್ಕಾಗಿ ಹತ್ತು ದಿನ ರಜೆ ಹಾಕಿ ಬರುತ್ತಿರುವುದಾಗಿ ಅವರು ತಿಳಿಸಿದ್ದರು. ಆದರೆ, ಈಗ ಈ ರೀತಿಯಾಗಿದೆ' ಎಂದು ಮಹದೇವ್ ಪಾಟೀಲ್ ಅವರ ಮಗ ಕಣ್ಣೀರಿಟ್ಟರು.
ಯೋಧರ ಓಡಾಟದ ಮಾಹಿತಿಯನ್ನು ಸ್ಥಳೀಯರೇ ನಕ್ಸಲರಿಗೆ ನೀಡಿದ್ರಾ?
ಅಂತಿಮ ನಮನ ಸಲ್ಲಿಸಿದ ಭೂಪೇಶ್
ಹುತಾತ್ಮ ಯೋಧ ಮಹದೇವ ಪಾಟೀಲ್ ಅವರ ಪಾರ್ಥಿವ ಶರೀರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮರಗುತ್ತಿ ಗ್ರಾಮಕ್ಕೆ ತಲುಪುವ ನಿರೀಕ್ಷೆಯಿದೆ. ಬಳಿಕ ಅಂತ್ಯಕ್ರಿಯೆ ನಡೆಯಲಿದೆ.
ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ಶನಿವಾರ ಬೆಳಿಗ್ಗೆ ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದರು.