ಚಿತ್ರಗಳು; ಕರ್ನಾಟಕದ ಮೊದಲ ಕೋವಿಡ್ ಲಸಿಕೆ ಸಂಚಾರಿ ವಾಹನ
ಕಲಬುರಗಿ, ಜೂನ್ 16; ಗ್ರಾಮೀಣ ಭಾಗದ ಜನರಿಗೆ ಮನೆ ಬಾಗಿಲಿನಲ್ಲಿಯೇ ಕೋವಿಡ್ ಲಸಿಕೆ ನೀಡಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದಲ್ಲಿಯೇ ಪ್ರಪ್ರಥಮ ಕೋವಿಡ್ ಸಂಚಾರಿ ಲಸಿಕಾ ವಾಹನ ವಿನ್ಯಾಸಗೊಳಿಸಿದೆ. ವಾಹನಕ್ಕೆ ಬುಧವಾರ ಕಲಬುರಗಿಯಲ್ಲಿ ಚಾಲನೆ ನೀಡಲಾಗಿದೆ.
ಬುಧವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ವಾಹನಕ್ಕೆ ಚಾಲನೆ ನೀಡಿದರು. ಕಲಬುರಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಕೋರಿಕೆ ಮೇರೆಗೆ ಈ ವಿಶೇಷ ವಿನ್ಯಾಸದ ಬಸ್ ಸಿದ್ಧಪಡಿಸಲಾಗಿದೆ.
ಕೊವಿಶೀಲ್ಡ್ ಎರಡು ಡೋಸ್ ಲಸಿಕೆ ನಡುವಿನ ಅಂತರ ಎಷ್ಟಿರಬೇಕು?
ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗೆ ಬಂದು ಕೋವಿಡ್ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಜನರ ಮನೆ ಬಾಗಿಲಿಗೆ ಹೋಗಿ ಕೋವಿಡ್ ಲಸಿಕೆ ನೀಡಲು ವಿಶೇಷ ವಿನ್ಯಾಸದ ಬಸ್ ಸಹಾಯಕವಾಗಲಿದೆ.
'ಡೆಲ್ಟಾ' ರೂಪಾಂತರಿ ತಡೆಗೆ 2 ಡೋಸ್ ಕೊರೊನಾ ಲಸಿಕೆ ಸಾಕು
ಆರಂಭದಲ್ಲಿ ಸೇಡಂ ಹಾಗೂ ಚಿಂಚೋಳಿ ತಾಲೂಕಿನಲ್ಲಿ ಮೂರು ದಿನಗಳ ಕಾಲ ಈ ಲಸಿಕೆ ಬಸ್ ಸಂಚಾರ ನಡೆಸಲಿದೆ. ಆಸ್ಪತ್ರೆಯಲ್ಲಿ ಲಸಿಕೆ ನೀಡುವಂತೆಯೇ ಬಸ್ನಲ್ಲಿ ಲಸಿಕೆ ನೀಡಲಾಗುತ್ತದೆ. ಅದಕ್ಕಾಗಿ ಅಗತ್ಯ ವಿನ್ಯಾಸ ಮಾಡಲಾಗಿದೆ.
ಭಾರತದಲ್ಲಿ 1 ಗಂಟೆಗೆ 1 ಲಕ್ಷಕ್ಕಿಂತ ಹೆಚ್ಚು ಮಂದಿಗೆ ಕೊರೊನಾವೈರಸ್ ಲಸಿಕೆ!
ಜನರು ಉಪಯೋಗ ಮಾಡಿಕೊಳ್ಳಬೇಕು
ಮಾಧ್ಯಮಗಳ ಜೊತೆ ಮಾತನಾಡಿದ ರಾಜಕುಮಾರ ತೇಲ್ಕೂರ್, "ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಚುರುಕುಗೊಂಡ ಪರಿಣಾಮ ಹಳ್ಳಿ ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಇಂತವರಿಗೆ ಸಂಚಾರಿ ಲಸಿಕಾ ಬಸ್ ಉಪಯೋಗವಾಗಲಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದು ಮನವಿ ಮಾಡಿದರು.
ಬಸ್ನಲ್ಲಿ 3 ವಿಭಾಗಗಳಿವೆ
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷವಾಗಿ ವಿನ್ಯಾಸಗೊಳಿಸಿದ ಬಸ್ನಲ್ಲಿ ಮೂರು ವಿಭಾಗಗಳಿವೆ. ಮೊದಲನೇ ವಿಭಾಗದಲ್ಲಿ ನೋಂದಣಿ, ಎರಡನೇ ವಿಭಾಗ ಲಸಿಕೆ ನೀಡುವುದು ಮತ್ತು ಮೂರನೇ ವಿಭಾಗದಲ್ಲಿ ಲಸಿಕೆ ಪಡೆದ ನಂತರ ವಿಶ್ರಾಂತಿ ಮತ್ತು ನಿಗಾ ಇಡಲು ವ್ಯವಸ್ಥೆ ಮಾಡಲಾಗಿದೆ.
2 ಬಸ್ಗಳನ್ನು ಸಿದ್ಧಗೊಳಿಸಲಾಗಿದೆ
ಲಸಿಕೆ ಬಸ್ ಒಂದು ತಾಲೂಕಿನಲ್ಲಿ 3 ದಿನಗಳ ಕಾಲ ಸಂಚಾರ ನಡೆಸಲಿದೆ. ಬಸ್ ಸಂಚರಿಸುವ ಕುರಿತು ಆಯಾ ತಾಲೂಕಿನ ಜನರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ಸ್ಥಳೀಯ ಆಶಾ ಕಾರ್ಯಕರ್ತೆಯರು ಜನಸಾಮಾನ್ಯರಲ್ಲಿ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲಿದ್ದಾರೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಸ್ತುತ ಎರಡು ಲಸಿಕೆ ಬಸ್ಗಳನ್ನು ವಿನ್ಯಾಸಗೊಳಿಸಿದೆ. ಯೋಜನೆ ಯಶ್ವಸಿಯಾದರೆ ಇನ್ನೂ ಹೆಚ್ಚಿನ ಬಸ್ ವಿನ್ಯಾಸಗೊಳಿಸಲಾಗುತ್ತದೆ.
ಭಯಪಡದೇ ಲಸಿಕೆ ಪಡೆಯಿರಿ
ಕಲಬುರಗಿ ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ಮಾತನಾಡಿ, "ಲಸಿಕೆಯ ಭಯ ಮತ್ತು ಲಸಿಕಾ ಕೇಂದ್ರಗಳು ಗ್ರಾಮದಿಂದ ದೂರವಿರುವ ಕಾರಣ ಅನೇಕರು ಗ್ರಾಮೀಣ ಭಾಗದಲ್ಲಿ ಹಾಗೂ ತಾಂಡಾಗಳಲ್ಲಿ ಲಸಿಕೆ ಪಡೆದಿಲ್ಲ. ಇದೀಗ ಬಿತ್ತನೆ ಕಾರ್ಯ ಸಹ ನಡೆಯುತ್ತಿರುವುದರಿಂದ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮ ಮತ್ತು ತಾಂಡಾಗಳಲ್ಲಿ ವಾಹನ ಸಂಚಾರ ನಡೆಸಲಿದ್ದು, ಜನರು ಯಾವುದೇ ಭಯಕ್ಕೆ ಒಳಗಾಗದೆ ಲಸಿಕೆ ಪಡೆದುಕೊಳ್ಳಬೇಕು" ಎಂದು ಕರೆ ನೀಡಿದರು.