ಕಲಬುರಗಿ ಮೇಯರ್: ಬಿಜೆಪಿಯ 'ಪ್ಲ್ಯಾನ್ ಬಿ'ಗೆ ಕಾಂಗ್ರೆಸ್, ಜೆಡಿಎಸ್ ಬೇಸ್ತು!
ಕಲಬುರಗಿ ಮಹಾ ನಗರಪಾಲಿಕೆಯ ಅತಂತ್ರ ಜನಾದೇಶದಿಂದಾಗಿ ಮೇಯರ್ ಯಾವ ಪಕ್ಷದವರಾಗಬೇಕು ಎನ್ನುವ ಗೊಂದಲ ಮುಂದುವರಿದಿದೆ. ಕಾರಣ, ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್ ಯಾರಿಗೆ ಬೆಂಬಲ ನೀಡಬೇಕು ಎನ್ನುವ ವಿಚಾರದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರದೇ ಇರುವುದರಿಂದ.
ನಮ್ಮವರೇ ಮೇಯರ್ ಆಗುತ್ತಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿಯವರು ಹೇಳುತ್ತಿದ್ದರು. ಆದರೆ, ನಾಲ್ಕು ಸ್ಥಾನವನ್ನು ಹೊಂದಿದರೂ ನಮ್ಮ ಕಾರ್ಪೋರೇಟರ್ ಮೇಯರ್ ಆಗಬೇಕು ಎನ್ನುವ ಷರತ್ತನ್ನು ಜೆಡಿಎಸ್ ಹಾಕಿದ ನಂತರ, ಮೇಯರ್ ವಿಚಾರ ಗೊಂದಲದ ಗೂಡಾಗಿ ಕೂತಿದೆ.
ಕಾಂಗ್ರೆಸ್ಸಿಗೆ ಅಧಿಕಾರ ಬೇಕಾದರೆ ಹಳೇ ಗಂಡನ ಪಾದವೇ ಗತಿ!
ಈಗಾಗಲೇ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಜೆಡಿಎಸ್ ವರಿಷ್ಠ ದೇವೇಗೌಡ್ರ ಬಳಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಬಳಿ ಬೆಂಬಲ ನೀಡುವಂತೆ ಮಾತುಕತೆ ನಡೆಸಿದ್ದಾರೆ.
ಆದರೆ, ಯಾರಿಗೆ ಬೆಂಬಲ ನೀಡಬೇಕು ಎನ್ನುವ ವಿಚಾರದಲ್ಲಿ ಗೌಡ್ರು ಮತ್ತು ಕುಮಾರಸ್ವಾಮಿಯವರ ನಡುವೆ ಗೊಂದಲವಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ, ಜೆಡಿಎಸ್ ಬೆಂಬಲ ದೊರೆಯದೇ ಇದ್ದ ಪಕ್ಷದಲ್ಲಿ ಮೇಯರ್ ಸ್ಥಾನದಲ್ಲಿ ರಾರಾಜಿಸಲು ಬಿಜೆಪಿ ಪ್ಲ್ಯಾನ್ ಬಿ ಸಿದ್ದತೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನಕ್ಕೆ ಬೇಡಿಕೆಯಿಟ್ಟ ಜೆಡಿಎಸ್
ಕಲಬುರಗಿ ಮಹಾನಗರ ಪಾಲಿಕೆಯ 55 ಸ್ಥಾನಗಳ ಪೈಕಿ, ಬಿಜೆಪಿ 23, ಕಾಂಗ್ರೆಸ್ 27, ಜೆಡಿಎಸ್ 4
ಕಲಬುರಗಿ ಮಹಾನಗರ ಪಾಲಿಕೆಯ 55 ಸ್ಥಾನಗಳ ಪೈಕಿ ಬಿಜೆಪಿ 23, ಕಾಂಗ್ರೆಸ್ 27, ಜೆಡಿಎಸ್ 4, ಇತರರು 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಹಾಗಾಗಿ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಬೆಂಬಲ ಅತ್ಯಗತ್ಯ. ನಾವು ಹೆಚ್ಚು ಸೀಟು ಗೆದ್ದಿದ್ದು ಎಂದು ಕಾಂಗ್ರೆಸ್ಸಿನವರು ಬೀಗುವಂತಹ ಪರಿಸ್ಥಿತಿಯಲ್ಲಿಲ್ಲ. ಕಾರಣ, ಸಿಂಪಲ್ ಮೆಜಾರಿಟಿಗೆ ಬೇಕಾದಷ್ಟು ಸಂಖ್ಯಾಬಲವಿಲ್ಲ. ಹಾಗಾಗಿ, ಜೆಡಿಎಸ್ ಬೆಂಬಲ ಇಲ್ಲಿ ಅತ್ಯವಶ್ಯಕ. ಆದರೆ, ಜೆಡಿಎಸ್ ಇದ್ದಕ್ಕಿದ್ದಂತೆಯೇ ಮೇಯರ್ ಸ್ಥಾನಕ್ಕೆ ಡಿಮಾಂಡ್ ಮಾಡುತ್ತಿರುವುದು ಎರಡೂ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಜೆಡಿಎಸ್ಸಿನ ನಾಲ್ವರು ಕಾರ್ಪೋರೇಟರುಗಳಿಂದ ಗೌಡ್ರು ಮತ್ತು ಕುಮಾರಸ್ವಾಮಿ ಭೇಟಿ
ಜೆಡಿಎಸ್ಸಿನ ನಾಲ್ವರು ಕಾರ್ಪೋರೇಟರುಗಳು ಈಗಾಗಲೇ ಗೌಡ್ರು ಮತ್ತು ಕುಮಾರಸ್ವಾಮಿಯವರ ಬಳಿ ಮಾತುಕತೆ ನಡೆಸಿದ್ದಾರೆ. ಇನ್ನು, ಕಾಂಗ್ರೆಸ್ಸಿನವರು ಶನಿವಾರದಂದು (ಸೆ 11) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಮೇಯರ್ ಸ್ಥಾನ ಹೇಗಾದರೂ ಮಾಡಿ ತಮಗೇ ಸಿಗಬೇಕು ಎನ್ನುವ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿಯವರು ಒಂದು ವೇಳೆ, ಜೆಡಿಎಸ್ ಬೆಂಬಲ ನೀಡದೇ ಇದ್ದಲ್ಲಿ, ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಪೋರೇಟರುಗಳನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯವರು ಆಪರೇಶನ್ ಕಮಲ ಪ್ಲ್ಯಾನ್ ಬಿ ಅಸ್ತ್ರವನ್ನಾಗಿ ಪ್ರಯೋಗ
ಅಧಿಕಾರಕ್ಕಾಗಿ ಬಿಜೆಪಿಯವರು ಆಪರೇಶನ್ ಕಮಲವನ್ನು ಪ್ಲ್ಯಾನ್ ಬಿ ಅಸ್ತ್ರವನ್ನಾಗಿ ಪ್ರಯೋಗಿಸಲು ತೆರೆಯ ಹಿಂದೆ ಪ್ಲ್ಯಾನ್ ರೂಪಿಸುತ್ತಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಇದು ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ನಿದ್ದೆಗೆಡಿಸಿದೆ. ಜೆಡಿಎಸ್ ಬೆಂಬಲ ನೀಡದೇ ಇದ್ದಲ್ಲಿ ಬಿಜೆಪಿ, ಕಾರ್ಪೋರೇಟರುಗಳನ್ನು ಸೆಳೆದು ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನ ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಎರಡೂ ಪಕ್ಷದವರು ಅಲರ್ಟ್ ಆಗಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಕಾರ್ಪೋರೇಟರುಗಳು ಅಜ್ಞಾತ ಸ್ಥಳಕ್ಕೆ
ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ರಾಜ್ಯ ಮಟ್ಟದ ನಾಯಕರು ತಮ್ಮ ಕಾರ್ಪೋರೇಟರುಗಳನ್ನು ಸಂಪರ್ಕಿಸಿ ಆಮಿಷಕ್ಕೆ ಒಳಗಾಗದಂತೆ ಇರುವ ಎಚ್ಚರಿಕೆಯನ್ನು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರು, ಮಲ್ಲಿಕಾರ್ಜುನ ಖರ್ಗೆಯವರೂ ತಮ್ಮ ಜನ ಪ್ರತಿನಿಧಿಗಳಿಗೆ ಇದೇ ಸೂಚನೆಯನ್ನು ನೀಡಿದ್ದಾರೆ. ಆದರೆ, ಬಿಜೆಪಿಯವರು ಕೊನೆಯ ಕ್ಷಣದಲ್ಲಿ ಆಪರೇಶನ್ ಕಮಲದ ತಂತ್ರಗಾರಿಕೆ ಹೂಡುವ ಸಾಧ್ಯತೆಯಿರುವುದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಕಾರ್ಪೋರೇಟರುಗಳನ್ನು ಅಜ್ಞಾತ ಸ್ಥಳಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.