ಕೊರೊನಾಕ್ಕೆ ಹೆದರಿ ಓಡಿ ಹೋಗಿರುವ ಜಿಲ್ಲಾ ಉಸ್ತುವಾರಿ ಸಚಿವ!
ಕಲಬುರಗಿ, ಮಾರ್ಚ್ 19: ಕೊರೊನಾ ವೈರಸ್ ಸೋಂಕು ಕಲಬುರಗಿ ಜಿಲ್ಲೆಯ ಜನರನ್ನು ಕಂಗೆಡಿಸಿದ್ದರೆ, ಕಲಬುರಗಿ ಜಿಲ್ಲಾಉಸ್ತುವಾರಿ ಸಚಿವ ಮತ್ತು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಹುಡುಕಿ ಕೊಡಬೇಕು ಎಂದು ಕಲಬುರಗಿ ಆಂದೋಲಾ ಮಠದ ಸಿದ್ದಲಿಂಗ ಸ್ವಾಮಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಭಯದಿಂದ ಕಲಬುರಗಿಗೆ ಬರಲು ಗೋವಿಂದ ಕಾರಜೋಳ ಅವರಿಗೆ ಭಯವಾಗುತ್ತಿದೆ ಎಂದರು ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು
ಕೊರೊನಾ ಬಗ್ಗೆ ಕಾಂಗ್ರೆಸ್ನಿಂದ ಜಾಗೃತಿ ಕಾರ್ಯಕ್ರಮ
ವೈರಸ್ ಹೆಚ್ಚು ಹರಡಿ ಕೊಂಡಿರುವುದು ಕಲಬುರಗಿ ಉತ್ತರ ಕ್ಷೇತ್ರದಲ್ಲಿ. ಆದರೆ, ಅಲ್ಲಿನ ಶಾಸಕಿ ಕನೀಜ್ ಫಾತಿಮಾ ಅವರು ಭಯದಲ್ಲಿರುವ ಜನರೊಂದಿಗೆ, ಕ್ಷೇತ್ರದ ಮತದಾರರೊಂದಿಗೆ ಮಾತನಾಡಿ ಅವರಲ್ಲಿ ಜಾಗೃತಿ ಉಂಟು ಮಾಡುವುದನ್ನು ಬಿಟ್ಟು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಇದೆಂತಹ ರಾಜಕಾರಣ. ಸದನ ನಡೆಯುತ್ತಿರಬಹುದು. ಆದರೆ, ಜನರು ಆಪತ್ತಿನಲ್ಲಿರುವಾಗ ಸದನದಲ್ಲಿ ಜನರಿಗಾಗಿ ನೀವೇನು ಕೇಳುತ್ತೀರಿ ಎಂದು ಪ್ರಶ್ನಿಸಿದರು.
ನಗರಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿ ವೈರಸ್ ಹರಡದಂತೆ ಜಿಲ್ಲಾಧಿಕಾರಿ ಬಿ.ಶರತ್ ಮತ್ತು ಆರೋಗ್ಯ ಇಲಾಖೆ, ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜನರ ಸಹಕಾರವೂ ಬೇಕು. ಅದಿಲ್ಲದೆ ಮಹಾಮಾರಿ ದಾಂಗುಡಿ ತಡೆಯಲು ಸಾಧ್ಯವಿಲ್ಲ. ಜನರು ಜಿಲ್ಲಾಡಳಿತದ ಮಾತು ಕೇಳಿ ಸಹಕಾರ ನೀಡಬೇಕು. ಅಲ್ಲದೆ, ನಾಪತ್ತೆಯಾಗಿರುವ ಸಚಿವ ಗೋವಿಂದ ಕಾರಜೋಳ ಅವರನ್ನು ಸರಕಾರ ಹುಡುಕಿ ಕೊಡಬೇಕು.
ಕಲಬುರಗಿ ಶಾಸಕ ಸಚಿವರಿಗೆ ಸಚಿವರಿಗೆ ಬೆಂಗಳೂರಿನಲ್ಲಿ ಸಿನಿಮಾ ನಟ, ನಟಿಯರೊಂದಿಗೆ ಫೋಟೋ ತೆಗೆಸಿಕೊಂಡು ಫೇಸ್ಬುಕ್ ಹಾಕಲಿಕ್ಕೆ ಪುರುಸೊತ್ತಿದೆ ಎಂದು ಆರೋಪಿಸಿದರು. ಈ ವೇಳೆಯಲ್ಲಿ ಶ್ರೀರಾಮ ಸೇನೆಯ ಮಹೇಶ ಪಾಟೀಲ, ಎಂ.ಎಸ್.ಪಾಟೀಲ ನರಿಬೋಳ ಇತರರು ಇದ್ದರು.