'ಅನಂತ್ ಕುಮಾರ್ ಹೆಗಡೆ ಮತ್ತೆ ಹುಟ್ಟಿ ಬಂದರೂ ಸಂವಿಧಾನ ಬದಲಾಗಲ್ಲ'
ಕಲಬುರಗಿ, ಡಿಸೆಂಬರ್ 26 : ಅನಂತ್ ಕುಮಾರ್ ಹೆಗಡೆ ಮತ್ತೊಮ್ಮೆ ಹುಟ್ಟಿಬಂದರೂ ಸಂವಿಧಾನ ಬದಲಾವಣೆ ಅಸಾಧ್ಯ ಎಂದು ಕಲಬುರಗಿ ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ಜಾತ್ಯಾತೀತರು ಅಪ್ಪ- ಅಮ್ಮನ ರಕ್ತದ ಗುರುತಿಲ್ಲದವರು: ಅನಂತಕುಮಾರ್ ಹೆಗಡೆ
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂತ್ವದ ಹೆಸರಿನ ಮೇಲೆ ಬಿಜೆಪಿ ವಿಷ ಬೀಜ ಬಿತ್ತಲು ಹೊರಟಿದೆ. ಜಾತ್ಯಾತೀತರಿಗೆ ಅಪ್ಪ-ಅಮ್ಮ ಯಾರೆಂಬುದು ಗೊತ್ತಿಲ್ಲ. ಈ ಹೇಳಿಕೆ ಪ್ರಧಾನಿ ಮೋದಿಯಿಂದ ಹಿಡಿದು ರಾಷ್ಟ್ರಪತಿಯವರೆಗೂ ಅವಮಾನ ಮಾಡಿದ ಹಾಗೆ ಎಂದರು.
ಅನಂತ್ ಕುಮಾರ್ ಹೆಗಡೆ ಹೇಳಿಕೆಯು ಅಸಂವಿಧಾನಿಕವಾದ್ದು, ಆರ್ ಎಸ್ ಎಸ್ ಮತ್ತು ಬಿಜೆಪಿಗೆ ಸಂವಾಧನ ಮೇಲೆ ನಂಬಿಕೆಯಿಲ್ಲ. ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಣಿಶಂಕರ್ ಅಯ್ಯರ್ ಅನ್ನು ಪಕ್ಷದಿಂದ ಅಮಾನತು ಮಾಡಿತ್ತು. ತಾಕತ್ ಇದ್ದರೆ ಹೆಗಡೆಯವರನ್ನು ಬಿಜೆಪಿ ಪಕ್ಷ ಮಂತ್ರಿ ಸ್ಥಾನದಿಂದ ವಜಾ ಮಾಡಲಿ ಎಂದು ಸವಾಲೆಸೆದರು.
ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಚಿಂತನೆ ಮಾಡಲಾಗುತ್ತಿದೆ. ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.