ಎಚ್ಡಿಕೆ-ಸುಮಲತಾ ವಾಕ್ಸಮರ; ಸಿಎಂ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ
ಕಲಬುರಗಿ, ಜುಲೈ 10: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ವಾಗ್ಯುದ್ಧದ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಬಾರಿಗೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
"ಸುಮಲತಾ ಹಾಗೂ ಕುಮಾರಸ್ವಾಮಿ ಪರಸ್ಪರ ಕಚ್ಚಾಟ ಮಾಡುವ ಅವಶ್ಯಕತೆಯಿಲ್ಲ. ಎಲ್ಲರೂ ಸಹೋದರರಂತೆ ಬದುಕಲು ಕಲಿಯಬೇಕಿದೆ. ಮಂಡ್ಯ ಜಿಲ್ಲೆ ರಾಜ್ಯದ ಒಂದು ಭಾಗ. ಹಾಗಾಗಿ ಅಲ್ಲಿಯ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು" ಎಂದು ಸಲಹೆ ನೀಡಿದ್ದಾರೆ.
ಕದನ ವಿರಾಮ ಘೋಷಿಸಿದ ಎಚ್ಡಿಕೆ: ಸಾ.ರಾ ಮಹೇಶ್ ಪ್ರಯತ್ನ ಫಲಕೊಟ್ಟಿತಾ?
"ದಿವಂಗತ ಅಂಬರೀಶ್ ಅವರ ಸ್ಮಾರಕ ನಿರ್ಮಾಣ ಸಮಯ ನನ್ನ ಕರ್ತವ್ಯವನ್ನು ನಾನು ಪೂರೈಸಿದ್ದೇನೆ. ಆ ಕಾರ್ಯ ನನಗೆ ಸಮಾಧಾನ ತಂದಿದೆ" ಎಂದು ಹೇಳಿದ್ದಾರೆ.
ಕೆಆರ್ಎಸ್ ಜಲಾಶಯದಿಂದ ಆರಂಭವಾದ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡುವಿನ ರಾಜಕೀಯ ಕದನ ಕ್ರಮೇಣ ವೈಯಕ್ತಿಕ ವಿಚಾರಕ್ಕೆ ಇಳಿದಿತ್ತು. ಕಳೆದ ಎರಡು ದಿನಗಳಿಂದಲೂ ಇಬ್ಬರ ನಡುವೆ ವಾಕ್ಸಮರ ಮುಂದುವರೆದಿತ್ತು.
ಶನಿವಾರ ಈ ವಾಕ್ಸಮರಕ್ಕೆ ಇತಿಶ್ರೀ ಹಾಡುವಂತೆ ಮಾಜಿ ಸಿಎಂ ಕುಮಾರಸ್ವಾಮಿ, "ನಾವು ಸಿಡಿಯಬೇಕಾದ ಪರಿಸ್ಥಿತಿ ಇದೆ, ಸಿಡಿಯೋಣ. ಕಾವೇರಿ ಜಲದ ಯೋಜನೆಗಳಿಗೆ ತಡೆಯೊಡ್ಡುತ್ತಿರುವವರ ವಿರುದ್ಧ ಸಿಡಿಯೋಣ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಧ್ವಜವನ್ನು ಹಾರಿಸಲು ಬಿಡಲೊಲ್ಲದ ಪಟ್ಟಭದ್ರರ ವಿರುದ್ಧ ಸಿಡಿಯೋಣ. ನಮಗೆ ನೀಡಬೇಕಾದ ಪರಿಹಾರ, ಅನುದಾನ ನೀಡದ ವ್ಯವಸ್ಥೆಯ ವಿರುದ್ಧ ಸಿಡಿಯಬೇಕಾಗಿದೆ ಸಿಡಿಯೋಣ. ಇದು ನಮ್ಮ ಆಯ್ಕೆಯಾಗಲಿ" ಎಂದು ಟ್ವೀಟ್ ಮಾಡಿದ್ದಾರೆ.
Recommended Video