ಬಿಜೆಪಿ ಶಾಸಕರು ಪಕ್ಷ ತ್ಯಜಿಸಲು ತಯಾರು: ಸಿದ್ದರಾಮಯ್ಯ
ಕಲಬುರಗಿ, ಫೆಬ್ರವರಿ 24: 'ಬಿಜೆಪಿಯಲ್ಲಿನ ಅನೇಕರು ಪಕ್ಷ ತೊರೆಯಲು ಸಜ್ಜಾಗಿದ್ದಾರೆ, ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಪ್ರಾರಂಭವಾಗಿದೆ, ಅಧಿಕಾರಕ್ಕಾಗಿ ಪರಸ್ಪರರ ವಿರುದ್ಧ ಕತ್ತಿಮಸೆಯುತ್ತಿದ್ದಾರೆ, ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 'ಯಡಿಯೂರಪ್ಪ ಬಲಹೀನ ಮುಖ್ಯಮಂತ್ರಿ, ಅವರಿಂದ ಗಟ್ಟಿ ನಿರ್ಧಾರಗಳು ಸಾಧ್ಯವಾಗುತ್ತಿಲ್ಲ' ಎಂದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಭೇಟಿ ಹಾಗೂ ಅದಕ್ಕೆ ನೀಡಲಾಗುತ್ತಿರುವ ಅತಿಯಾದ ಮಹತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, 'ಡೊನಾಲ್ಡ್ ಟ್ರಂಪ್ ಭಾರತದ ಭೇಟಿಯಿಂದ ಭಾರತಕ್ಕೆ ಯಾವ ಲಾಭವೂ ಇಲ್ಲ' ಎಂದರು.
'ಡೊನಾಲ್ಡ್ ಟ್ರಂಪ್ ಭಾರತ ಭೇಟಿಯಿಂದ ಯಾವ ಪ್ರಯೋಜನವೂ ಇಲ್ಲ, ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದರು, ಏನಾದರೂ ಲಾಭವಾಯಿತೆ?'' ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ, 'ಕೆಪಿಸಿಸಿ ಅಧ್ಯಕ್ಷ ನೇಮಕ ಶೀಘ್ರವಾಗಿ ಆಗಬೇಕು, ಜೊತೆಗೆ ರಾಹುಲ್ ಗಾಂಧಿ ಅವರೇ ಎಐಸಿಸಿ ಅಧ್ಯಕ್ಷರಾಗಬೇಕು' ಎಂದರು.
ಮೋದಿ ಅವರ ನಡೆಯನ್ನು ಟೀಕಿಸಿ ಸರಣಿ ಟ್ವೀಟ್ ಸಹ ಮಾಡಿರುವ ಸಿದ್ದರಾಮಯ್ಯ, 'ದೇಶದಲ್ಲಿ ಪ್ರತಿ 2 ಗಂಟೆಗೊಂದರಂತೆ ದಲಿತ ವ್ಯಕ್ತಿಯ ಕೊಲೆಯಾಗುತ್ತಿದೆ, ಪ್ರತಿ 3 ಗಂಟೆಗೊಂದರಂತೆ ದಲಿತ ಮಹಿಳೆಯ ಮೇಲೆ ಅತ್ಯಾಚಾರವಾಗುತ್ತಿದೆ. ದೇಶದ ದಲಿತರ ದುಸ್ಥಿತಿ-ದೌರ್ಜನ್ಯದ ಬಗ್ಗೆ ಮಾತನಾಡದ ಪ್ರಧಾನಿ ಮೋದಿ, ಪಾಕಿಸ್ತಾನದ ದಲಿತರ ಬಗ್ಗೆ ಕಣ್ಣೀರು ಸುರಿಸುತ್ತಿರುವುದು ಬರೀ ನಾಟಕ'' ಎಂದಿದ್ದಾರೆ.