ಪ್ರಚಾರ ಬಿಟ್ಟು ಪರೀಕ್ಷೆಗೆ ಹಾಜರಾದ ಡಾ.ಅವಿನಾಶ್ ಜಾಧವ್!
ಕಲಬುರಗಿ, ಮೇ 08 : ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ ಎಂಡಿ ಪರೀಕ್ಷೆ ಬರೆಯುತ್ತಿದ್ದಾರೆ. ಮೇ 19ರಂದು ಉಪ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಬುಧವಾರ ಪ್ರಚಾರದಿಂದ ಬಿಡುವು ಪಡೆದಿರುವ ಡಾ.ಅವಿನಾಶ್ ಜಾಧವ್ ಕಲಬುರಗಿ ನಗರದ ಎಂಆರ್ಎಂಸಿ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪರೀಕ್ಷೆ ಬರೆಯುತ್ತಿದ್ದಾರೆ. ಕೆಬಿಎನ್ ಮೆಡಿಕಲ್ ಕಾಲೇಜಿನಲ್ಲಿ ಅವರು ಪ್ರಥಮ ವರ್ಷದ ಎಂಡಿ ವ್ಯಾಸಂಗ ಮಾಡುತ್ತಿದ್ದಾರೆ.
ಚಿಂಚೋಳಿ ಉಪ ಚುನಾವಣಾ ಕಣ : ಪಕ್ಷಗಳ ಬಲಾಬಲ
ಡಾ.ಉಮೇಶ್ ಜಾಧವ್ ರಾಜೀನಾಮೆಯಿಂದಾಗಿ ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಬಿಜೆಪಿ ಡಾ.ಉಮೇಶ್ ಜಾಧವ್ ಅವರ ಪುತ್ರ ಡಾ.ಅವಿನಾಶ್ ಜಾಧವ್ ಅವರಿಗೆ ಟಿಕೆಟ್ ನೀಡಿದೆ. ಸುಭಾಷ್ ರಾಥೋಡ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ.
ವೈದ್ಯಕೀಯ ಕ್ಷೇತ್ರ ಬಿಟ್ಟು ಚುನಾವಣಾ ಅಖಾಡಕ್ಕಿಳಿದ ಡಾ.ಅವಿನಾಶ್ ಜಾಧವ್
'ಡಾ. ಅವಿನಾಶ್ ಜಾಧವ್ ಉಪ ಚುನಾವಣೆಯಲ್ಲಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ' ಎಂದು ಡಾ.ಉಮೇಶ್ ಜಾಧವ್ ಹೇಳಿದ್ದಾರೆ. ಬಿಜೆಪಿಯ ಹಲವು ನಾಯಕರು ಚಿಂಚೋಳಿ ಕ್ಷೇತ್ರದಲ್ಲಿ ಅವಿನಾಶ್ ಜಾಧವ್ ಪರವಾಗಿ ಪ್ರಚಾರವನ್ನು ನಡೆಸುತ್ತಿದ್ದಾರೆ.
ಚಿಂಚೋಳಿ ಉಪ ಚುನಾವಣೆ : ಖರ್ಗೆ ಪ್ರತಿಷ್ಠೆ
ಡಾ.ಅವಿನಾಶ್ ಜಾಧವ್ ಯಾರು?
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಡಾ.ಉಮೇಶ್ ಜಾಧವ್ ಪುತ್ರ ಡಾ.ಅವಿನಾಶ್ ಜಾಧವ್. ಚಿಂಚೋಳಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿ. ಮೇ 19ರಂದು ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಎಂಡಿ ಪರೀಕ್ಷೆಗೆ ಹಾಜರು
ಡಾ.ಅವಿನಾಶ್ ಜಾಧವ್ ಅವರು ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಎಂಡಿ ಜನರಲ್ ಮೆಡಿಸಿನ್ ಕೋರ್ಸ್ ಅನ್ನು ಕಲಬುರಗಿಯ ಕೆಬಿಎನ್ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬುಧವಾರ ಅವರು ಪ್ರಚಾರದಿಂದ ಹಿಂದೆ ಸರಿದು ಪರೀಕ್ಷೆ ಬರೆಯುತ್ತಿದ್ದಾರೆ.
ಮಾವನ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ
ಡಾ.ಅವಿನಾಶ್ ಜಾಧವ್ ಆರು ತಿಂಗಳ ಹಿಂದೆ ವಿವಾಹವಾಗಿದ್ದಾರೆ. ಅವರು ರಾಜಕೀಯಕ್ಕೆ ಬರುವುದಕ್ಕೆ ಮಾವನ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಆದರೆ, ಪಕ್ಷ ಟಿಕೆಟ್ ನೀಡಿದ ಮೇಲೆ ಅನಿವಾರ್ಯವಾಗಿ ಅವರು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮೊದಲ ಬಾರಿಗೆ ವಿಧಾನಸಭೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಸಹೋದರನಿಗೆ ಟಿಕೆಟ್ ಶಿಫಾರಸು
ಕರ್ನಾಟಕ ಬಿಜೆಪಿ ಡಾ.ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ ಅವರಿಗೆ ಟಿಕೆಟ್ ನೀಡುವಂತೆ ಮೊದಲು ಶಿಫಾರಸು ಮಾಡಿತ್ತು. ಆದರೆ, ಡಾ.ಉಮೇಶ್ ಜಾಧವ್ ಅವರು ಪುತ್ರನಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರಿಂದ ಡಾ.ಅವಿನಾಶ್ ಜಾಧವ್ಗೆ ಟಿಕೆಟ್ ನೀಡಲಾಗಿದೆ.
ಸುಭಾಷ್ ರಾಥೋಡ್
ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಅವಿನಾಶ್ ಜಾಧವ್ ಅವರಿಗೆ ಸುಭಾಷ್ ರಾಥೋಡ್ ಎದುರಾಳಿ. ಕೆಲವು ದಿನಗಳ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟಿಕೆಟ್ ಕೊಡಿಸಿದ್ದಾರೆ. ಚಿಂಚೋಳಿ ಉಪ ಚುನಾವಣೆ ಖರ್ಗೆ ಮತ್ತು ಉಮೇಶ್ ಜಾಧವ್ ಕುಟುಂಬದ ನಡುವಿನ ಹೋರಾಟವಾಗಿದೆ.