ಭೀಮಾ ನದಿಯಲ್ಲಿ ಪ್ರವಾಹ: ತುರ್ತು ಸಭೆ ಕರೆದ ಡಿಸಿ ಜ್ಯೋತ್ಸ್ನಾ
ಕಲಬುರಗಿ,ಅಕ್ಟೋಬರ್.15: ಕಲಬುರಗಿ ಜಿಲ್ಲೆಯ ಭೀಮಾನದಿಯಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ರಾತ್ರಿ ಪೂರ್ತಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ಯಾ ಅವರು ಸೂಚಿಸಿದ್ದಾರೆ.
ಗುರುವಾರ ರಾತ್ರಿ ಜಿಲ್ಲಾಮಟ್ಟದ ಅಧಿಕಾರಿಗಳ ತುರ್ತುಸಭೆ ಕರೆದು ಅವರು ಆಯಾ ತಾಲೂಕು ಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ಪಿಡಿಓ, ಗ್ರಾಮಲೆಕ್ಕಿಗರೊಂದಿಗೆ ಸಮನ್ವಯ ಸಾಧಿಸಿ, ನಿರ್ದೇಶನ ನೀಡುವ ಮೂಲಕ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು.
ಕಲಬುರಗಿ ಭೀಮಾ ನದಿ ಪಾತ್ರದ 148 ಗ್ರಾಮಗಳ ಸ್ಥಳಾಂತರಕ್ಕೆ ಸಿದ್ಧತೆ
ಮಹಾರಾಷ್ಟ್ರದ ಡ್ಯಾಂಗಳಿಂದ ಪ್ರಸಕ್ತ 5 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, 2,50,000 ಕ್ಯೂಸೆಕ್ಸ್ ನೀರು ಹೆಚ್ಚಳವಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಭೀಮಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚಾಗುವ ಸಂಭವವಿದೆ. ಆದ್ದರಿಂದ ಇಂತಹ ತುರ್ತು ಸಂದರ್ಭದಲ್ಲಿ ಇಡೀ ರಾತ್ರಿ ಮಿನಿ ವಿಧಾನಸೌಧದಲ್ಲಿ ಇದ್ದು, ಪರಿಸ್ಥಿತಿ ನಿಭಾಯಿಸಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಲಬುರಗಿ ಜಿಲ್ಲೆಯ ಭೀಮಾನದಿ ಪಾತ್ರದ 148 ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ. ಜೇವರ್ಗಿ, ಚಿತ್ತಾಪುರ,ಅಫ್ಜಲ್ ಪುರ ಹಾಗೂ ಸೇಡಂ ತಾಲ್ಲೂಕುಗಳಲ್ಲಿ ಕಟ್ಟೆಚ್ಚರ ನೀಡಲಾಗಿದೆ. ಭೀಮಾ ನದಿತೀರದ ಹಾಗೂ ಹಿನ್ನೀರಿನ ಜನತೆ ಸುರಕ್ಷಿತವಾಗಿರುವ ಎತ್ತರದ ಪ್ರದೇಶಕ್ಕೆ ತೆರಳಲು ಸೂಚಿಸಲಾಗಿದೆ.
ಕರ್ನಾಟಕದ 6 ಜಿಲ್ಲೆಗಳಿಗೆ ರೆಡ್ ಅಲರ್ಟ್: ಗಾಳಿ ಸಹಿತ ಧಾರಾಕಾರ ಮಳೆ
40 ರಿಂದ 50 ಬೋಟ್ಗಳ ವ್ಯವಸ್ಥೆ: ಪ್ರವಾಹಕ್ಕೀಡಾಗುವ ಗ್ರಾಮಗಳ ಸ್ಥಳಾಂತರ ಮಾಡಬೇಕು. ಅವರನ್ನು ಸುರಕ್ಷಿತವಾಗಿರುವ ಎತ್ತರದ ಪ್ರದೇಶಕ್ಕೆ ಕರೆದೊಯ್ಯಬೇಕು. ಮುನ್ನೆಚ್ಚರಿಕೆಯಾಗಿ 40 ರಿಂದ 50 ಬೋಟ್ಗಳ ವ್ಯವಸ್ಥೆ ಮಾಡಬೇಕು. ಈ ಕುರಿತು ಬಳ್ಳಾರಿ ಹೋಂ ಗಾರ್ಡ್ ಅಧಿಕಾರಿಗಳು ಮತ್ತು ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಇನ್ನಷ್ಟು ಅಗತ್ಯವಿರುವ ಬೋಟ್ಗಳನ್ನು ತರಿಸಬೇಕು. ಹಾಗೆಯೇ ಸಂತ್ರಸ್ಥರನ್ನು ಕರೆತರಲು ಅಂಬ್ಯುಲೆನ್ಸ್ ಹಾಗೂ ಕ್ರೂಸರ್ ವಾಹನಗಳ ವ್ಯವಸ್ಥೆ ಮಾಡಬೇಕು. ಪ್ರವಾಹದಿಂದ ತೊಂದರೆಗೊಳಗಾಗುವ ಜನರನ್ನು ರಕ್ಷಿಸಲು ನುರಿತ ಈಜುಗಾರರನ್ನು ನಿಯೋಜಿಸಬೇಕೆಂದು ತಿಳಿಸಿದರು.
ರಾತ್ರಿಯಿಡೀ ಸರ್ಕಾರಕ್ಕೆ ಕ್ಷಣ ಕ್ಷಣಕ್ಕೆ ವರದಿ ಸಲ್ಲಿಸಬೇಕಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳ ವಿಕೋಪ ನಿರ್ವಹಣಾ ಘಟಕದೊಂದಿಗೆ ಸಮನ್ವಯ ಸಾಧಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಡಿ.ಯು.ಡಿ.ಸಿ. ಇಂಜಿನಿಯರ್ ಶಿವನಗೌಡ ಅವರಿಗೆ ಸೂಚಿಸಿದರು.
ಪ್ರವಾಹಕ್ಕಿಡಾಗುವ ಜೇವರ್ಗಿ, ಚಿತ್ತಾಪುರ, ಅಫಜಲಪುರ ಹಾಗೂ ಹಿನ್ನೀರಿನಿಂದ ತೊಂದರೆಗೊಳಗಾಗುವ ಸೇಡಂ ತಾಲೂಕುಗಳಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ನಾಲ್ವರನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಆಯಾ ತಾಲೂಕುಗಳ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಎಲ್ಲಾ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಲು ಅಪರ ಜಿಲ್ಲಾಧಿಕಾರಿಗಳು ಮತ್ತು ಭೂದಾಖಲೆಗಳ ಉಪನಿರ್ದೇಶಕರಿಗೆ ಸೂಚಿಸಿದರು. ಸಂತ್ರಸ್ತರಿಗೆ ಆಹಾರ, ಔಷಧಗಳ ಕಿಟ್ ನೀಡಲು ಕ್ರಮ ಕೈಗೊಳ್ಳಬೇಕೆಂದು ಅಗತ್ಯವಿರುವವಷ್ಟು ಕಾಳಜಿ ಕೇಂದ್ರಗಳನ್ನು ತೆರೆಯಬೇಕೆಂದು ಸಲಹೆ ನೀಡಿದರು.
Recommended Video
ಸಭೆಯಲ್ಲಿ ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಮಿ ಮರಿಯಮ್ ಜಾರ್ಜ್, ಡಿಸಿಪಿ ಕಿಶೋರ ಬಾಬು, ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್ ಹಾಗೂ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.