ಆರ್ಟಿಕಲ್ 370 ರದ್ದುಗೊಳಿಸುವಂತೆ ಉಪವಾಸ ಸತ್ಯಾಗ್ರಹ
ಕಲಬುರಗಿ, ಫೆಬ್ರವರಿ 22 : ಯೋಧರಿಗೆ ಮಾರಕವಾಗಿರುವ ಆರ್ಟಿಕಲ್ 370 ಮತ್ತು 35 (ಎ) ರದ್ದುಗೊಳಿಸಬೇಕು ಎಂದು ಕಲಬುರಗಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮನವಿಯನ್ನು ಸಲ್ಲಿಸಲಾಗಿದೆ.
ಬಲಿದಾನ ಆಂದೋಲನ ಎಂಬ ಹೆಸರಿನಲ್ಲಿ ಕಲಬುರಗಿಯಲ್ಲಿ ಫೆ.19ರಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಪಾಪಿ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಡುವುದನ್ನು ನಿಲ್ಲಿಸಬೇಕು, ಅವರ ಮೇಲೆ ದಾಳಿ ಮಾಡಿ ಅಲ್ಲಿರುವ ಭಯೋತ್ಪಾದಕರನ್ನು ಕೊಲ್ಲಬೇಕು ಎಂದು ಕೇಂದ್ರವನ್ನು ಆಗ್ರಹಿಸಲಾಗುತ್ತಿದೆ.
ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?
ಇನ್ನೊಮ್ಮೆ ಭಾರತದ ಮೇಲೆ ದಾಳಿ ಮಾಡದಂತೆ ತಕ್ಕ ಪಾಠ ಕಲಿಸಬೇಕು. ಪುಲ್ವಮಾದಲ್ಲಿ ನಡೆದ ಉಗ್ರರ ದಾಳಿಯ ಹೊಣೆ ಹೊತ್ತುಕೊಂಡ ಜೈಷ್ ಎ ಮೊಹಮ್ಮದ್ ಸಂಘಟನೆಯ ಪ್ರತಿಯೊಬ್ಬ ಸದಸ್ಯರನ್ನು ಬಂಧಿಸಿ ಭಾರತಕ್ಕೆ ಕರೆತಂದು ಸಾರ್ವಜನಿಕವಾಗಿ ನೇಣು ಹಾಕಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಯಾವುದೇ ಜಾತಿ, ಧರ್ಮ, ಪಂಥ ಹಾಗೂ ರಾಜಕೀಯ ಪಕ್ಷಗಳಿಗೆ ಸಂಬಂಧವಿಲ್ಲದಂತೆ ಬಲಿದಾನ ಆಂದೋಲನವನ್ನು ಮಾಡಲಾಗುತ್ತಿದೆ. ನಮ್ಮ ಬಲಿದಾನ ದೇಶದ ರಕ್ಷಣೆಗೆ ದೇಶದ ಪ್ರತಿ ಜನರ ಒಳಿತಿಗಾಗಿ ಶ್ರಮಿಸುವ ಆಂದೋಲನವಾಗಿದೆ ಎಂದು ಪ್ರತಿಭಟನಾನಿತರರು ಹೇಳಿದ್ದಾರೆ.
ದೇಶದ ಸೈನಿಕರಿಗೆ ಬೆನ್ನೆಲುಬಾಗಿ ನಿಲ್ಲುವಂತಹ ಯುವಕ-ಯುವತಿಯರು ದೇಶಕ್ಕೆ ಬೇಕಾಗಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲಾ ಧರ್ಮದವರು ಒಗ್ಗಟ್ಟಿನಿಂದ ಬಲಿದಾನ ಆಂದೋಲನಕ್ಕೆ ಕೈ ಜೋಡಿಸಿ, ಭಾರತದ ಒಗ್ಗಟ್ಟು ಏನೆಂದು ವಿಶ್ವಕ್ಕೆ ಮಾದರಿಯಾಗುವಂತೆ ಮಾಡೋಣ ಎಂದು ಕರೆ ನೀಡಿದ್ದಾರೆ.
370ನೇ ವಿಧಿ ರದ್ದು ಪಡಿಸುವ ಆನ್ ಲೈನ್ ಅಭಿಯಾನಕ್ಕೆ ಭರ್ಜರಿ ಪ್ರತಿಕ್ರಿಯೆ
ಕುಡಿಯುವ ನೀರು, ರಸ್ತೆ, ಚರಂಡಿ, ಸಂಬಳ ಹೆಚ್ಚಳ ಮುಂತಾದವುಗಳಿಗಾಗಿ ಹೋರಾಟ ಮಾಡುತ್ತಾರೆ. ದೇಶದ ಒಳಿತಿಗಾಗಿ ಹೋರಾಟ ಮಾಡುವವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆಂದೋಲನದ ಮೂಲಕ ಯುವಕ-ಯುವತಿಯರ ಹಾಗೂ ದೇಶದ ನಾಗರಿಕರ ಶಕ್ತಿ ಹೆಚ್ಚಿಸುವ ಕಾರ್ಯ ಆಗಬೇಕಿದೆ ಎಂದು ಕರೆ ನೀಡಲಾಗಿದೆ.