ಅಂತೂ ರದ್ದಾಗಿದೆ ಬಹಮನಿ ಉತ್ಸವ, ಖುದ್ದಾಗಿ ಹೇಳಿದ್ದಾರೆ ಶರಣಪ್ರಕಾಶ್
ಕಲಬುರಗಿ, ಫೆಬ್ರವರಿ 16: ರಾಜ್ಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿದ್ದ ಬಹಮನಿ ಉತ್ಸವ ಆಚರಿಸುವ ನಿರ್ಧಾರದಿಂದ ಹಿಂಪಡೆಯಲಾಗಿದೆ. ಅಲ್ಲಿಗೆ ಬಹಮನಿ ಉತ್ಸವ ರದ್ದು ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಬಹಮನಿ ಉತ್ಸವವನ್ನು ರದ್ದುಗೊಳಿಸಲಾಗಿದೆ ಅಂತ ಹೇಳಿದ್ದಾರೆ.
ಮಳಖೇಡ ಉತ್ಸವ ನಿಗದಿಯಂತೆ ನಡೆಯಲಿದೆ. ಮಳಖೇಡ ಉತ್ಸವ ಆಚರಣೆಗೆ ಸರಕಾರದ ಆದೇಶ ಹೊರಬಿದ್ದಿತ್ತು. ಆದರೆ ಕೆಲವರು ಆಗ್ರಹಿಸಿದ್ದರಿಂದ ಬಹಮನಿ ಉತ್ಸವ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸರಕಾರದಿಂದ ಆದೇಶ ಹೊರಬಿದ್ದಿರಲಿಲ್ಲ. ಅನೇಕರು ಬಹಮನಿ ಉತ್ಸವಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಉತ್ಸವ ಮಾಡುವ ನಿರ್ಧಾರ ಕೈ ಬಿಡಲಾಗಿದೆ ಎಂದು ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ವಿವಾದಕ್ಕೆ ಕಾರಣವಾದ 'ಬಹಮನಿ ಉತ್ಸವ' ಆಚರಣೆ
ಬಹಮನಿ ಉತ್ಸವವನ್ನು ಸರಕಾರದಿಂದ ಮಾಡುವ ವಿಚಾರ ಇಲ್ಲ. ಖಾಸಗಿಯಾಗಿ ಯಾವುದಾದರು ಸಂಘ- ಸಂಸ್ಥೆಗಳು ಮಾಡುತ್ತೇವೆ ಎಂದು ಮುಂದೆ ಬಂದರೆ ಪರಿಶೀಲನೆ ಮಾಡಲಾಗುತ್ತದೆ ಎಂದಿದ್ದಾರೆ. ಬಹಮನಿ ಉತ್ಸವ ಆಚರಣೆ ನಿರ್ಧಾರವು ದೊಡ್ಡ ವಿವಾದದ ಸ್ವರೂಪ ಪಡೆದಿತ್ತು. ಬಹಮವಿ ಉತ್ಸವ ಮಾಡದಂತೆ ಬಿಜೆಪಿ ಸೇರಿದಂತೆ ಕೆಲ ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದವು.