"ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುದಾನ ಬಿಡುಗಡೆಯಾಗಲಿ"
ಕಲಬುರಗಿ, ಸೆಪ್ಟೆಂಬರ್ 09: ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಅನುದಾನ ಬಿಡುಗಡೆಯಾಗದ ಕಾರಣಕ್ಕಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಮೊಟ್ಟೆಯನ್ನು ಒದಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ದೂರು ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಭಾಗದಲ್ಲಿ ಕೇಳಿಬರುತ್ತಿದೆ. "ಮಕ್ಕಳಿಗೆ ಮೊಟ್ಟೆಯನ್ನು ನಮ್ಮದೇ ಜೇಬಿನಿಂದ ಹಣ ಖರ್ಚು ಮಾಡಿ ನೀಡುತ್ತಿದ್ದೇವೆ. ಇನ್ನೆಷ್ಟು ದಿನ ಅನುದಾನಕ್ಕಾಗಿ ನಾವು ಕಾಯಬೇಕು?" ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಪ್ರಶ್ನೆ.
ಅಪೌಷ್ಠಿಕತೆಯ ನಿರ್ಮೂಲನೆಗಾಗಿ ಸರ್ಕಾರ ಜಾರಿಗೊಳಿಸಿದ ಹಲವು ಯೋಜನೆಗಳಲ್ಲಿ ಗರ್ಭಿಣಿಯರಿಗೆ ಮತ್ತು 3-6 ವರ್ಷ ವಯಸ್ಸಿನ ಮಕ್ಕಳಿಗೆ ಮೊಟ್ಟೆಯನ್ನು ನೀಡುವುದೂ ಒಂದು. ಅಂಗನವಾಡಿ ಕಾರ್ಯಕರ್ತರಿಗೆ ತಮ್ಮದೇ ಹಣದಲ್ಲಿ ಮೊಟ್ಟೆಯನ್ನು ನೀಡುವಂತೆ ಒತ್ತಾಯಿಸುತ್ತಿರುವ ದೂರೂ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.
ಕಲಬುರಗಿ : ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಹಾಕಿ
ಅಷ್ಟೇ ಅಲ್ಲ, ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ ಎಂಟು ತಿಂಗಳಿನಿಂದ ಅವರ ಸಂಬಳವನ್ನೂ ನೀಡಲಾಗಿಲ್ಲ. "ಮೊಟ್ಟೆಯನ್ನು ಪೂರೈಕೆ ಮಾಡುವುದನ್ನು ನಿಲ್ಲಿಸಬೇಡಿ ಎಂದು ನಾವು ಡಿಸ್ಟ್ರಿಬ್ಯೂಟರ್ ಗಳಿಗೆ ತಿಳಿಸಿದ್ದೇವೆ. ಇಲಾಖೆಯಿಂದ ಅನುದಾನ ಬಿಡುಗಡೆಯಾದ ಕೂಡಲೆ ನೀಡುತ್ತೇವೆ ಎಂದು ಭರವಸೆ ನೀಡುತ್ತಲೇ ಬಂದಿದ್ದೇವೆ. ಆದರೆ ಎಂಟು ತಿಂಗಳಿನಿಂದ ಅವರೂ ನಮ್ಮನ್ನು ಸಹಿಸಿಕೊಂಡಿದ್ದಾರೆ. ಆದರೆ ಇದು ಇನ್ನೆಷ್ಟು ದಿನ? ಈಗ ನಾವೇ ನಮ್ಮ ಜೇಬಿನಿಂದ ಹಣ ಖರ್ಚು ಮಾಡುತ್ತಿದ್ದೇವೆ. ಅದಾದರೂ ನಮಗೆ ಎಷ್ಟು ದಿನ ಸಾಧ್ಯ?' ಎಂಬುದು ಮಹಿಳೆಯೊಬ್ಬರ ಪ್ರಶ್ನೆ. ಸರ್ಕಾರದ ಮಾತೃಪೂರ್ಣ ಯೋಜನೆಯಡಿಯಲ್ಲಿ ಗರ್ಭಿಣಿಯರಿಗೂ ಮೊಟ್ಟೆಯನ್ನು ಸರ್ಕಾರ ನೀಡುತ್ತಿತ್ತು.
"ಮೊದಲಿಗೆ ಹಣದ ಕೊರತೆಯಿಂದಾಗಿ ಅನುದಾನ ಬಿಡುಗಡೆ ಮಾಡಿರಲಿಲ್ಲ. ನಂತರ 'ಬಾಲ ವಿಕಾಸ ಸಮಿತಿ'ಯ ಮೂಲಕ ಅನುದಾನ ಬಿಡುಗಡೆ ಮಾಡಲಾಯಿತಾದರೂ, ಇದೀಗ ಮೊಟ್ಟೆ ಹಂಚಿಕೆಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಅನುದಾನವನ್ನು ತಡೆಹಿಡಿಯಲಾಗಿದೆ" ಎಂಬುದು ಅಧಿಕಾರಿಯೊಬ್ಬರ ಮಾತು.