ಮಳಖೇಡದ ಉತ್ತರಾದಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಮಿತ್ ಶಾ
ಮಳಖೇಡ (ಕಲಬುರಗಿ ಜಿಲ್ಲೆ), ಫೆಬ್ರವರಿ 26: ಕಲಬುರಗಿ ಜಿಲ್ಲೆಯಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಲ್ಲಿನ ಉತ್ತರಾದಿ ಮಠಕ್ಕೆ ಸೋಮವಾರ ಭೇಟಿ ನೀಡಿದರು. ಕುಟುಂಬ ಸಮೇತ ತೆರಳಿದ ಅವರು, ವಿಶೇಷ ಪೂಜೆ ಸಲ್ಲಿಸಿದರು. ಮಠದ ಆವರಣದಲ್ಲಿರುವ ಜಯತೀರ್ಥರ (ಟೀಕಾಚಾರ್ಯರು) ವೃಂದಾವನಕ್ಕೆ ಪತ್ನಿ ಜೊತೆಗೂಡಿ ಪೂಜೆ ಸಲ್ಲಿಸಿದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೋಮವಾರದ ಪ್ರವಾಸ ವೇಳಾಪಟ್ಟಿ
ಅಮಿತ್ ಶಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಸ್ಥಳೀಯ ಮುಖಂಡರು ಸಾಥ್ ನೀಡಿದರು. ಆದರೆ ಕಲಬುರಗಿ ನಗರದ ರೋಜಾ ಬಡಾವಣೆಯಲ್ಲಿರುವ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಅಮಿತ್ ಶಾ ಭೇಟಿ ನೀಡಲಿಲ್ಲ. ಶ್ರೀ ಶರಣಬಸವೇಶ್ವರ ದೇವಸ್ಥಾನ, ಮಳಖೇಡದ ಉತ್ತರಾದಿಮಠಕ್ಕೆ ಪತ್ನಿ ಸೋನಾಲ್ ಶಾ ಜೊತೆ ಭೇಟಿ ನೀಡಿ, ದರ್ಶನ ಪಡೆದರು.
ಕಳೆದ ವಾರ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನದ ಜೊತೆ ದರ್ಗಾಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದರು. ಅಮಿತ್ ಶಾ ಅವರು ದರ್ಗಾಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ ನಾನಾ ಬಗೆಯ ಟೀಕೆ ಹಾಗೂ ವಿಮರ್ಶೆ ಕೇಳಿಬರುತ್ತಿದೆ. ಭಾರತದ ಎರಡನೇ ಅಜ್ಮಿರ್ ಎಂದೇ ಖ್ವಾಜಾ ಬಂದೇ ನವಾಜ್ ದರ್ಗಾ ಹೆಸರು ಪಡೆದಿದೆ.