ಕೃಷಿ ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ನೋಟು, ದಂಗಾದ ಅಧಿಕಾರಿಗಳು!
ಬೆಂಗಳೂರು, ಸೆ. 16: ಒಂದೆಡೆ ಕೊರೊನಾ ವೈರಸ್ ರೈತರ ಜೀವ ಹಿಂಡುತ್ತಿದ್ದರೆ ಮತ್ತೊಂದೆಡೆ ಕೃಷಿ ಇಲಾಖೆಯ ಕೆಲವು ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟು ರೈತರಿಗೆ ಮತ್ತಷ್ಟು ತೊಂದರೆ ಕೊಡುತ್ತಿದ್ದಾರೆ. ಕೃಷಿ ಸಲಕರಣೆಗಳಿಗೆ ರಿಯಾಯತಿ ಬಿಲ್ ಪಾಸ್ ಮಾಡಿಕೊಡಲು 50 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಪ್ರಕರಣ ಕಲಬುರಗಿಯಲ್ಲಿ ನಡೆದಿದೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಸಹಾಯಕ ಕೃಷಿ ಅಧಿಕಾರಿ ಸುನೀಲ್ ಕುಮಾರ್ ಯರಗೋಳ್ ಎಸಿಬಿ ಬಲೆಗೆ ಬಿದ್ದಿರುವ ಕೃಷಿ ಅಧಿಕಾರಿ. ಕಲಬುರಗಿ ನಗರದ ಕನ್ನಡ ಭವನ ಬಳಿ ಹಣ ರೈತರಿಂದ ಹಣ ಪಡೆಯುವಾಗಲೇ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಬ್ಸಿಡಿ ಬಿಲ್ ಪಾಸ್ ಮಾಡಿಕೊಡಲು 1.5 ಲಕ್ಷ ರೂಪಾಯಿ ಲಂಚಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದ. ಐವತ್ತು ಸಾವಿರ ರೂ. ಹಣ ಪಡೆಯುವಾಗ ಎಸಿಬಿ ಎಸ್ಪಿ ಮಹೇಶ್ ಮೇಘಣ್ಣವರ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಜೇವರ್ಗಿ ನಿವಾಸಿ ರೈತ ಶರಣಗೌಡ ಎಂಬುವರಿಗೆ ಹಣದ ಬೇಡಿಕೆ ಇಟ್ಟಿದ್ದ. ಹಣ ಪಡೆಯುವಾಗ ಎಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿ ಸಹಾಯಕ ಕೃಷಿ ಅಧಿಕಾರಿ ಸುನೀಲ್ ಕುಮಾರ್ ಯರಗೋಳ್ ಕೊಟ್ಟಿದ್ದ ಮಾಹಿತಿ ಮೇರೆಗೆ ಆತನ ಕಲಬುರಗಿ ನಿವಾಸದ ಮೇಲೆ ರೇಡ್ ಮಾಡಿರುವ ಪೊಲೀಸರು ಅಪಾರ ಪ್ರಮಾಣದ ಹಣ ಮತ್ತು ಬಂಗಾರ ವಶಪಡಿಸಿಕೊಂಡಿದ್ದಾರೆ.
ಜೇವರ್ಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನಿಲ್ ಕುಮಾರ ಅವರ ಕಲಬುರಗಿ ಮನೆಯಲ್ಲಿ ಪರಿಶೀಲನೆ ನಡೆಸಿದಾಗ 9 ಲಕ್ಷ ರೂಪಾಯಿ ನಗದು ಹಣ, ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. 50 ಸಾವಿರ ರೂ ಲಂಚ ಪಡೆಯುವಾಗ ನಿನ್ನೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಳಿಕ ಕಲಬುರಗಿಯ ಆತನ ಮನೆ ಮೇಲೆ ಎಸಿಬಿ ರೇಡ್ ಮಾಡಿತ್ತು. ಮನೆಯಲ್ಲಿ ತಪಾಸಣೆ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಜೊತೆಗೆ ಅಸ್ತಿಪಾಸ್ತಿ ದಾಖಲೆ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.