ಕಲಬುರ್ಗಿಯ 10 ಸಾವಿರ ಮಕ್ಕಳಿಗೆ 'ಅನ್ನಪೂರ್ಣ ಬೆಳಗಿನ ಉಪಹಾರ'ಕ್ಕೆ ಚಾಲನೆ
ಬೆಂಗಳೂರು/ಕಲಬುರಗಿ, ಸೆ. 27: ಅವಕಾಶ ವಂಚಿತ ಹಾಗೂ ಬಡ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶ ಹೊಂದಿರುವ ಬೆಳಗಿನ ಉಪಹಾರ ನೀಡುವ ಮಹತ್ವದ ಗುರಿಯನ್ನು ಹೊಂದಿರುವ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಶನಿವಾರ ಸೆಪ್ಟೆಂಬರ್ 28 ರಂದು ಕಲಬುರ್ಗಿ ಜಿಲ್ಲೆಯ 10 ಸಾವಿರ ಮಕ್ಕಳಿಗೆ ಪ್ರತಿದಿನ "ಅನ್ನಪೂರ್ಣ ಬೆಳಗಿನ ಉಪಹಾರʼ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
Recommended Video
ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟಿಗಳಾದ ಆನಂದ ಅವರು ಮಾತನಾಡಿ, ಬಹಳಷ್ಟು ಮಕ್ಕಳು ಶಾಲೆಗೆ ಹೋಗುವ ಮೊದಲು ಸರಿಯಾದ ಉಪಹಾರ ಸೇವಿಸುವುದಿಲ್ಲಾ. ಖಾಲಿ ಹೊಟ್ಟೆಯಲ್ಲಿ ಅವರು ಹೇಗೆ ಸರಿಯಾಗಿ ಕಲಿಯಲು ಸಾಧ್ಯ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಇವರಿಗೆ ಸರಿಯಾದ ಪೋಷಣೆ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಬೆಳಗಿನ ಉಪಹಾರ ನಿರಾಕರಿಸಲಾಗುವ ಅಥವಾ ಉಪಹಾರ ಸಿಗದೇ ಇರುವ ಮಕ್ಕಳು ಖಾಲಿ ಹೊಟ್ಟೆಯಲ್ಲಿ ಶಾಲೆಗೆ ಹೋಗುವುದು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ಇದನ್ನು ಮನಗೊಂಡು ದೇಶದ 15 ರಾಜ್ಯಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಬೆಳಗಿನ ಉಪಹಾರ ಒದಗಿಸುವ ಅನ್ನಪೂರ್ಣ ಉಪಹಾರ ಕಾರ್ಯಕ್ರವನ್ನು ಆಯೋಜಿಸಿದ್ದೇವೆ ಎಂದರು.
ಪೌಷ್ಟಿಕಾಂಶಯುಕ್ತ ಹಾಲು ವಿತರಣೆ ರಾಜ್ಯದೆಲ್ಲೆಡೆ ವಿಸ್ತರಣೆ: ಸುರೇಶ್ ಕುಮಾರ್
ಕಲಬುರ್ಗಿ ಜಿಲ್ಲೆಯ ಸರಕಾರಿ ಶಾಲೆಯ ಮಕ್ಕಳಿಗೆ ಪ್ರಾರಂಭಿಸುತ್ತಿರುವ ಈ ಯೋಜನೆಯನ್ನು ರಾಜ್ಯದ ಎಲ್ಲಾ ಸರಕಾರಿ ಶಾಲೆಯ ಮಕ್ಕಳಿಗೂ ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ
"ಅದಮ್ಯ ಚೇತನ ಹಾಗೂ ಮುದ್ದೇನಹಳ್ಳಿ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ನೀಡಲಾಗುತ್ತಿರುವ ಪೌಷ್ಠಿಕಾಂಶಯುಕ್ತ ಹಾಲು ವಿತರಣೆಯನ್ನು ರಾಜ್ಯದ ಎಲ್ಲೆಡೆ ವಿಸ್ತರಿಸಲಾಗುವುದು" ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಅಲ್ಲದೆ, ಮಧ್ಯಾಹ್ನದ ಬಿಸಿಯೂಟವನ್ನು ಸರಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪಿಯುಸಿ ವಿದ್ಯಾರ್ಥಿಗಳಿಗೂ ವಿಸ್ತರಿಸುವ ಬಗ್ಗೆ ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಅವರ ಪ್ರಸ್ತಾಪದ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಟ್ರಸ್ಟಿನ 600 ಕ್ಕೂ ಹೆಚ್ಚು ಸ್ವಯಂ ಸೇವಕರು
ದೇಶದ 15 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಟ್ರಸ್ಟಿನ 600 ಕ್ಕೂ ಹೆಚ್ಚು ಸ್ವಯಂ ಸೇವಕರು 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೌಷ್ಟಿಕಾಂಶ ಭರಿತ ಬೆಳಗಿನ ಉಪಹಾರವನ್ನು ಒದಗಿಸುತ್ತಿದ್ದೇವೆ. ಈ ಕಾರ್ಯಕ್ರಮದಿಂದ ಈಗಾಗಲೇ ಸಕಾರಾತ್ಮಕವಾದ ಪರಿಣಾಮಗಳು ಬೀರಿದೆ. ಶಾಲೆಗೆ ಹಾಜರಾತಿ, ಉತ್ತಮ ಆರೋಗ್ಯ ಮತ್ತು ಶೈಕ್ಷಣಿಕವಾಗಿ ಬಹಳಷ್ಟು ಅಭಿವೃದ್ದಿಯನ್ನು ಮಕ್ಕಳಲ್ಲಿ ಕಂಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಕಲಬುರ್ಗಿ ಜಿಲ್ಲೆಯಲ್ಲಿ ಅಪೌಷ್ಟಿಕತೆಯ ಪ್ರಕರಣಗಳು
ಕಲಬುರ್ಗಿ ಜಿಲ್ಲೆಯಲ್ಲಿ ಅಪೌಷ್ಟಿಕತೆಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಜಿಲ್ಲೆಯ ಮಕ್ಕಳಿಗೆ ಅದಮ್ಯ ಚೇತನ ಸಂಸ್ಥೆಯ ಜೊತೆಗೂಡಿ ಉಪಹಾರ ನೀಡಬೇಕು ಎನ್ನುವುದು ನಮ್ಮ ಬಹಳ ದಿನಗಳ ಕನಸಾಗಿತ್ತು. ಮಧ್ಯಾಹ್ನದ ಬಿಸಿಯೂಟ ನೀಡುವಲ್ಲಿ 15 ವರ್ಷಗಳ ಅನುಭವ ಹಾಗೂ ಪರಿಣಿತಿ ಹೊಂದಿರುವ ಅದಮ್ಯ ಚೇತನ ಸಂಸ್ಥೆಯ ಜೊತೆಗೂಡಿ ಇಲ್ಲಿನ 75 ಶಾಲೆಯ 10 ಸಾವಿರ ಮಕ್ಕಳಿಗೆ ಮೊದಲ ಹಂತದಲ್ಲಿ ಬೆಳಗಿನ ಉಪಹಾರ ನೀಡುವ ಯೋಜನೆ ಪ್ರಾರಂಭವಾಗಲಿದೆ ಎಂದರು. ಈ ಕಾರ್ಯಕ್ರಮವನ್ನು ಅದಮ್ಯ ಚೇತನ ಸಂಸ್ಥೆ ಅನುಷ್ಠಾನಗೊಳಿಸಲಿದೆ.
ಕಲಬುರ್ಗಿ ಕಾರ್ಯಕ್ರಮದ ವಿವರಗಳು
ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ದಿವ್ಯ ಆಶೀರ್ವಾದಗಳೊಂದಿಗೆ ಸದ್ಗುರು ಮಧುಸೂದನ ಸಾಯಿ ಅವರ ಘನ ಅಧ್ಯಕ್ಷತೆಯಲ್ಲಿ ಶನಿವಾರ ಸೆಪ್ಟೆಂಬರ್ 28, 2019 ರ ಬೆಳಿಗ್ಗೆ 9 ಗಂಟೆಗೆ ನವನಿಹಾಳ ಗ್ರಾಮದ, ಶ್ರೀ ಸತ್ಯ ಸಾಯಿ ಯೂನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್ ನಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್, ಕಲಬುರ್ಗಿಯ ಸಂಸತ್ ಸದಸ್ಯರಾದ ಉಮೇಶ್ ಜಿ ಜಾಧವ್, ಅದಮ್ಯ ಚೇತನದ ಅಧ್ಯಕ್ಷರಾ ಡಾ ತೇಜಸ್ವಿನಿ ಅನಂತಕುಮಾರ್, ಶಾಸಕರಾದ ಬಸವರಾಜ್ ಮತ್ತೊಮೂಡ್, ದತ್ತಾತ್ರೇಯ ಸಿ ಪಾಟೀಲ್, ರಾಜಕುಮಾರ್ ತೆಲ್ಕೂರ್, ಅವಿನಾಶ್ ಜಿ ಜಾಧವ್, ಸುಭಾಷ್ ಗುತ್ತೇದಾರ್, ಬಿ.ಜಿ ಪಾಟೀಲ್, ಸಿ ಶ್ರೀನಿವಾಸ್, ಅಧ್ಯಕ್ಷರು, ಶ್ರೀ ಸತ್ಯ ಸಾಯಿ ಹೆಲ್ತ್ ಅಂಡ್ ಎಜುಕೇಷನ್ ಟ್ರಸ್ಟ್ ಪಾಲ್ಗೊಳ್ಳಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು . ಬಿ.ಎನ್ ನರಸಿಂಹ ಮೂರ್ತಿ, ಕುಲಪತಿಗಳು, ಶ್ರೀ ಸತ್ಯ ಸಾಯಿ ಯೂನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್ ವಹಿಸಲಿದ್ದಾರೆ.